ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ನಾವಿನ್ಯತೆಯೇ ನೂತನ ಮಾರ್ಗ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಇನೋವಸ್ಥಾನ್’ ಅಭಿಯಾನಕ್ಕೆ ಚಾಲನೆ

ಬೆಂಗಳೂರು 30.06.2025: ಪ್ರಪಂಚದಾದ್ಯಂತ ಸ್ಪರ್ಧೆಯು ಉತ್ತುಂಗದಲ್ಲಿರುವ ಇಂದಿನ ಸಮಯದಲ್ಲಿ, ಭಾರತವನ್ನು ಸ್ವಾವಲಂಬಿಯನ್ನಾಗಿ ಮತ್ತು ಜಾಗತಿಕ ನಾಯಕನನ್ನಾಗಿ ಮಾಡಲು ನಾವೀನ್ಯತೆಯ ಶಕ್ತಿಯ ಮೂಲಕ ಮಾತ್ರ ಸಾಧ್ಯ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಕೈಗಾರಿಕಾ ನಾವೀನ್ಯತೆ ಮತ್ತು ಸಂಶೋಧನಾ ಮಂಡಳಿ ಮತ್ತು ಜೈನ್ ಡೀಮ್ಡ್ ವಿಶ್ವವಿದ್ಯಾಲಯ ಬೆಂಗಳೂರು ಆಯೋಜಿಸಿದ್ದ ಆವಿಷ್ಕಾರ, ಬೌದ್ಧಿಕ ಸಂಪತ್ತು ಮತ್ತು ಉದ್ಯಮಾಧಾರಿತ ಬೆಳವಣಿಗೆಗೆ ರಾಷ್ಟ್ರಮಟ್ಟದ ಆಂದೋಲನ “ಇನೋವಸ್ಥಾನ್–ವಿಚಾರದಿಂದ ವಿಕಾಸ ಯಾತ್ರೆ”ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

“ಭಾರತದಲ್ಲಿ ನಾವೀನ್ಯತೆ ಕೇವಲ ಪ್ರಯೋಗಾಲಯಕ್ಕೆ ಸೀಮಿತವಾಗಿಲ್ಲ, ಬದಲಾಗಿ ನಾವು ಅದನ್ನು ನೀತಿ, ಶಿಕ್ಷಣ, ಕೈಗಾರಿಕೆ ಮತ್ತು ಸಮಾಜದ ಭಾಗವಾಗಿಸುತ್ತಿದ್ದೇವೆ. ಭಾರತವು ವಿಶ್ವದ ಪ್ರಮುಖ ನಾವೀನ್ಯತೆಯ ರಾಷ್ಟ್ರಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಬೇಕಾದರೆ, ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು, ನವೋದ್ಯಮಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಕಾರ್ಪೊರೇಟ್ ವಲಯ ಮತ್ತು ಸರ್ಕಾರಿ ನೀತಿ ಸಂಸ್ಥೆಗಳು ಎಲ್ಲವೂ ಒಂದೇ ವೇದಿಕೆಯಲ್ಲಿ ಒಟ್ಟಾಗಿ ಕೆಲಸ ಮಾಡುವುದು, ಸಮನ್ವಯಗೊಳಿಸುವುದು ಮತ್ತು ನಾವೀನ್ಯತೆಯನ್ನು ರಾಷ್ಟ್ರೀಯ ಆದ್ಯತೆಯನ್ನಾಗಿ ಮಾಡುವುದು ಅವಶ್ಯಕ” ಎಂದು ಹೇಳಿದರು.

“ನಮ್ಮ ಭಾರತ ದೇಶವು ಯಾವಾಗಲೂ ವಿಚಾರಗಳ ಭೂಮಿಯಾಗಿದೆ. ತಕ್ಷಶಿಲ ಮತ್ತು ನಳಂದದಂತಹ ವಿಶ್ವವಿದ್ಯಾಲಯಗಳು ಜ್ಞಾನದ ಬೆಳಕನ್ನು ಹರಡಿದ, ಚರಕ ಮತ್ತು ಸುಶ್ರುತರಂತಹ ವಿದ್ವಾಂಸರು ವೈದ್ಯಕೀಯ ವಿಜ್ಞಾನದಲ್ಲಿ ಕ್ರಾಂತಿಯನ್ನುಂಟು ಮಾಡಿದ ಮತ್ತು ಆರ್ಯಭಟರಂತಹ ಗಣಿತಜ್ಞರು ಶೂನ್ಯವನ್ನು ಕಂಡುಹಿಡಿದ ರಾಷ್ಟ್ರವಾಗಿದೆ. ಚಿಂತನೆ, ತತ್ವಶಾಸ್ತ್ರ ಮತ್ತು ನಾವೀನ್ಯತೆ ಯಾವಾಗಲೂ ಭಾರತದ ಆತ್ಮದ ತಿರುಳಾಗಿವೆ. ಇಂದಿನ ಯುಗವು ಕೇವಲ ಯೋಚಿಸುವುದರ ಬಗ್ಗೆ ಅಲ್ಲ, ಆ ಆಲೋಚನೆಗಳನ್ನು ವಾಸ್ತವಕ್ಕೆ ಪರಿವರ್ತಿಸುವುದರ ಬಗ್ಗೆ. ಭಾರತವು “ಜಾಗತಿಕ ನಾವೀನ್ಯತೆ ಸೂಚ್ಯಂಕ” ದಲ್ಲಿ ಐತಿಹಾಸಿಕ ಪ್ರಗತಿಯನ್ನು ಸಾಧಿಸಿದೆ. 2015 ರಲ್ಲಿ, ದೇಶವು 81 ನೇ ಸ್ಥಾನದಲ್ಲಿತ್ತು, ಆದರೆ 2023 ರ ದತ್ತಾಂಶದ ಪ್ರಕಾರ, ಅದು 40 ನೇ ಸ್ಥಾನವನ್ನು ತಲುಪಿದೆ” ಎಂದು ತಿಳಿಸಿದರು.

“ಭಾರತದಂತಹ ಯುವ ರಾಷ್ಟ್ರದಲ್ಲಿ ನಾವೀನ್ಯತೆಯ ಸಾಧ್ಯತೆಗಳು ಅಪಾರವಾಗಿವೆ. ಸ್ಟಾರ್ಟ್ಅಪ್ ಸಂಸ್ಕೃತಿ, ಡಿಜಿಟಲೀಕರಣ, ಆತ್ಮನಿರ್ಭರ ಭಾರತ್ ಮತ್ತು ‘ಮೇಕ್ ಇನ್ ಇಂಡಿಯಾ’ ನಂತಹ ಅಭಿಯಾನಗಳು ನಾವೀನ್ಯತೆಗೆ ಹೊಸ ದಿಕ್ಕನ್ನು ನೀಡುತ್ತಿವೆ. ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಕೈಗಾರಿಕೆಗಳಂತಹ ಎಲ್ಲಾ ಹಂತಗಳಲ್ಲಿ ನಾವೀನ್ಯತೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಸರ್ಕಾರವು “ರಾಷ್ಟ್ರೀಯ ಬೌದ್ಧಿಕ ಆಸ್ತಿ ನೀತಿ”ಯ ಮೂಲಕ ನಾವೀನ್ಯಕಾರರನ್ನು ಬೆಂಬಲಿಸುತ್ತಿದೆ. ವಿಶ್ವವಿದ್ಯಾಲಯಗಳು ತಮ್ಮ ಬೌದ್ಧಿಕ ಆಸ್ತಿಗಳನ್ನು ನಿರ್ವಹಿಸಲು ಮತ್ತು ವಾಣಿಜ್ಯೀಕರಣಗೊಳಿಸಲು ಐಪಿ ಕೇಂದ್ರಗಳು ಮತ್ತು ನೀತಿಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಬೇಕಾಗಿದೆ” ಎಂದು ಹೇಳಿದರು.

“ಪೇಟೆಂಟ್ ವಾರ್ಷಿಕ ವರದಿ 2022-23 ರ ಪ್ರಕಾರ, ಕರ್ನಾಟಕ ರಾಜ್ಯದಿಂದ 6,500 ಕ್ಕೂ ಹೆಚ್ಚು ಪೇಟೆಂಟ್ ಅರ್ಜಿಗಳನ್ನು ಸ್ವೀಕರಿಸಲಾಗಿರುವುದು ಶ್ಲಾಘನೀಯ. ಈ ಸಂಖ್ಯೆಯನ್ನು ಇನ್ನೂ ವೇಗವಾಗಿ ಹೆಚ್ಚಿಸಬೇಕಾಗಿದೆ. ಇದಕ್ಕಾಗಿ, ವಿಶೇಷವಾಗಿ ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು, ನವೋದ್ಯಮಗಳು ಮತ್ತು MSME ಗಳು ಬೌದ್ಧಿಕ ಆಸ್ತಿಯನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಪ್ರಸ್ತುತ ಭಾರತವು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ನವೋದ್ಯಮಗಳು ಮತ್ತು 110 ಯುನಿಕಾರ್ನ್ ಕಂಪನಿಗಳನ್ನು ಹೊಂದಿದೆ. ಆದರೂ, ಕೇವಲ ಒಂದು ಸಣ್ಣ ಶೇಕಡಾವಾರು ಜನರು ಮಾತ್ರ ಬೌದ್ಧಿಕ ಆಸ್ತಿ ರಕ್ಷಣೆಯನ್ನು ಹೊಂದಿದ್ದಾರೆ. ಭಾರತದಲ್ಲಿ ಬೌದ್ಧಿಕ ಆಸ್ತಿ ಮತ್ತು ಅದರ ಕಾರ್ಯತಂತ್ರದ ಬಳಕೆಯ ತಿಳುವಳಿಕೆಯನ್ನು ಮತ್ತಷ್ಟು ಬಲಪಡಿಸುವ ಅವಶ್ಯಕತೆಯಿದೆ” ಎಂದು ತಿಳಿಸಿದರು.

“ಇನ್ನೋವೇಟ್ ಪ್ರೊಟೆಕ್ಟ್-ಸ್ಕೇಲ್’ ಸಂಸ್ಕೃತಿಯನ್ನು ನಾವು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಸರ್ಕಾರವು ಪ್ರಾರಂಭಿಸಿದ ಸ್ಟಾರ್ಟ್ಅಪ್ ಇಂಡಿಯಾ, ಆತ್ಮನಿರ್ಭರ ಭಾರತ್, ಇನ್ನೋವೇಶನ್ ಮಿಷನ್, ಮೇಕ್ ಇನ್ ಇಂಡಿಯಾದಂತಹ ವಿವಿಧ ಕಾರ್ಯಕ್ರಮಗಳು ಈ ಪ್ರಯಾಣದ ಭಾಗವಾಗಿದೆ. ಇಂದು ಐಐಟಿಗಳು, ಐಐಎಂಎಸ್, ಎನ್ಐಟಿಎಸ್ ಮತ್ತು ನಾವೀನ್ಯತೆ ಕೇಂದ್ರಗಳಲ್ಲಿ ಸಾವಿರಾರು ಯುವಕರು ಹೊಸ ಪರಿಹಾರಗಳು, ಹೊಸ ಅಪ್ಲಿಕೇಶನ್‌ಗಳು, ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಪ್ರತಿಯೊಂದು ಸಣ್ಣ ವಿಚಾರವೂ ದೊಡ್ಡ ಬದಲಾವಣೆಯನ್ನು ತರಬಹುದು. ಜೀವನವನ್ನು ಸುಲಭಗೊಳಿಸುವ ಅಪ್ಲಿಕೇಶನ್, ಯಂತ್ರ, ಸಾಫ್ಟ್‌ವೇರ್ ಕೇವಲ ತಾಂತ್ರಿಕ ಉತ್ಪನ್ನವಲ್ಲ, ಅದು ಅಭಿವೃದ್ಧಿಯ ವಾಹನವಾಗುತ್ತದೆ” ಎಂದು ಹೇಳಿದರು.

ಬೆಂಗಳೂರು ನಗರವು ತಂತ್ರಜ್ಞಾನ, ಆರ್ಥಿಕ ಅಭಿವೃದ್ಧಿ, ಶಿಕ್ಷಣ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಕೇಂದ್ರವಾಗಿದೆ. ಬೆಂಗಳೂರಿನಲ್ಲಿ ಅನೇಕ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿವೆ, ಅವುಗಳಲ್ಲಿ ಒಂದು ಜೈನ್ ಡೀಮ್ಡ್ ವಿಶ್ವವಿದ್ಯಾಲಯವಾಗಿದ್ದು, ಇದು ಬೆಂಗಳೂರನ್ನು ಶಿಕ್ಷಣದ ಕೇಂದ್ರವನ್ನಾಗಿ ಮಾಡುವಲ್ಲಿ ಗಣನೀಯ ಕೊಡುಗೆ ನೀಡಿದೆ ಎಂದು ರಾಜ್ಯಪಾಲರು ಶ್ಲಾಘಿಸಿದರು.

“ಇನ್ನೋವೇಶನ್‌ಸ್ಥಾನ” ಎಂಬುದು ಉನ್ನತ ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ನವೋದ್ಯಮಗಳಲ್ಲಿ ನಾವೀನ್ಯತೆಯನ್ನು ವೇಗಗೊಳಿಸಲು ಮತ್ತು ಸಾಂಸ್ಥೀಕರಣಗೊಳಿಸಲು ಒಂದು ರಾಷ್ಟ್ರೀಯ ಅಭಿಯಾನವಾಗಿದೆ. ಕರ್ನಾಟಕದಿಂದ ಪ್ರಾರಂಭವಾದ ಈ “ವಿಚಾರದಿಂದ ವಿಕಾಸ ಯಾತ್ರೆ” ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸ್ವಾವಲಂಬಿ ಭಾರತ ಮತ್ತು ನಾವೀನ್ಯತೆ ಆಧಾರಿತ ರಾಷ್ಟ್ರವನ್ನು ನಿರ್ಮಿಸುವ ಸಂಕಲ್ಪದಿಂದ ಪ್ರೇರಿತವಾಗಿದೆ. ಆದ್ದರಿಂದ “ಇನ್ನೋವೆಸ್ತಾನ್” ಅಂದೋಲನವು ಭಾರತವನ್ನು “ಪರಿಣಾಮದ ಆಲೋಚನೆಗಳ” ಕಡೆಗೆ ಕೊಂಡೊಯ್ಯುವ ಚಿಂತನೆಯ ಚಳುವಳಿಯಾಗಿದೆ. ಅಲ್ಲಿ ಪ್ರತಿಯೊಬ್ಬ ನಾಗರಿಕನೂ ನಾವೀನ್ಯಕಾರನಾಗಬಹುದು. ಹಾಗಾಗಿ, ನಾವೆಲ್ಲರೂ ಒಟ್ಟಾಗಿ ಭಾರತವನ್ನು ಚಿಂತನಶೀಲ, ನವೀನ ಮತ್ತು ಬಲಿಷ್ಠ ರಾಷ್ಟ್ರವನ್ನಾಗಿ ಮಾಡೋಣ ಎಂದು ರಾಜ್ಯಪಾಲರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜೈನ್ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ.ಚೆನ್ರಾಜ್ ರಾಯ್ಚಂದ್ ಜೈನ್, ಕೈಗಾರಿಕಾ ನಾವೀನ್ಯತೆ ಮತ್ತು ಸಂಶೋಧನಾ ಮಂಡಳಿಯ ಅಧ್ಯಕ್ಷೆ ಡಾ. ಶ್ವೇತಾ ಸಿಂಗ್, ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಅಶುತೋಷ್ ಶರ್ಮಾ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಪ್ರೊಫೆಸರ್ ಟಿ.ಜಿ. ಸೀತಾರಾಮ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *