
ಮಾರೇನಹಳ್ಳಿ ಗ್ರಾಮದಲ್ಲಿ 65 ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ :
ಬ್ಯಾಟರಾಯನಪುರ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಮಾರೇನಹಳ್ಳಿ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಕ್ಷೇತ್ರದ ಮಾರೇನಹಳ್ಳಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಮೀನಾಕ್ಷಿ ಕೃಷ್ಣಬೈರೇಗೌಡ ಅವರು ಸುಮಾರು 65 ಗರ್ಭಿಣಿಯರಿಗೆ ಬಾಗಿನ ಅರ್ಪಿಸಿ, ಉಡಿತುಂಬಿ, ಅರಿಶಿನ, ಕುಂಕುಮ ಹಚ್ಚಿ, ಹೂ ಮುಡಿಸಿ ಸಾಮೂಹಿಕ ಸೀಮಂತ ನೆರವೇರಿಸಿದರು.
ನಂತರ ಅವರು ಮಾತನಾಡಿ ‘ಮಾರೇನಹಳ್ಳಿ ಗ್ರಾ.ಪಂ.ವ್ಯಾಪ್ತಿಯ 10 ಹಳ್ಳಿಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬ ಗಳಲ್ಲಿನ ಸುಮಾರು 65 ಗರ್ಭಿಣಿಯರನ್ನು ಗರುತಿಸಿ, ಅವರಿಗೆ ತವರುಮನೆಯಲ್ಲಿ ನೆರವೇರಿಸುವಂತೆಯೇ ಅತ್ಯಂತ ಶಾಸ್ತ್ರೋಕ್ತ ರೀತಿಯಲ್ಲಿ ಸೀಮಂತ ನೆರವೇರಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಮಾರೇನಹಳ್ಳಿ ಗ್ರಾ.ಪಂ.ಯ ಕ್ರಮ ಪ್ರಶಂಸಾರ್ಹವಾದುದು. ಅಗತ್ಯವಿರುವ ಬಡ ಮಹಿಳೆಯರಿಗೆ ಈ ರೀತಿ ಸೀಮಂತ ನೆರವೇರಿಸುವುದು ಅತ್ಯಂತ ಪುಣ್ಯದ ಕೆಲಸವಾಗಿದ್ದು, ಇಂತಹ ಪುಣ್ಯದ ಕೆಲಸದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುವ ಗ್ರಾ.ಪಂ.ಯ ಎಲ್ಲಾ ಸದಸ್ಯರು, ಮುಖಂಡರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಧನ್ಯವಾದಗಳೊಂದಿಗೆ ಶುಭ ಹಾರೈಸುತ್ತೇನೆ ಎಂದರು.
ಮಾರೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ಪಿ.ರಾಹುಲ್ ಮಾತನಾಡಿ ‘ಬಿಡುವಿಲ್ಲದ ಕೆಲಸದ ನಡುವೆಯೂ ಗ್ರಾ.ಪಂ.ವತಿಯಿಂದ ಏರ್ಪಡಿಸಿದ್ದ ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯ ನೆರೆಸುವ ಮೂಲಕ ಹರಸಿ ಹಾರೈಸಿರುವ ಸಮಾಜ ಸೇವಕರಾದ ಮೀನಾಕ್ಷಿ ಕೃಷ್ಣಬೈರೇಗೌಡ ಅವರಿಗೆ ಗ್ರಾ.ಪಂ.ಸರ್ವ ಸದಸ್ಯರ ಪರವಾಗಿ ಅನಂತ ಧನ್ಯವಾದ ಅರ್ಪಿಸಿತ್ತೇನೆ. ಇದೇ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣದ ದಿಸೆಯಲ್ಲಿ ಮಾರೇನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರಾದ ಆಂಜಿನಪ್ಪ(ಪುಟ್ಟು) ಹಾಗೂ ಮಾರೇನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಹಲವು ಮುಖಂಡರ ಸಹಕಾರದೊಂದಿಗೆ ಆರ್ಥಿಕವಾಗಿ ಹಿಂದುಳಿದ ಸುಮಾರು 50ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಗಳನ್ನು ವಿತರಿಸುವ ಮೂಲಕ ನೆರವು ನೀಡಲಾಗಿದೆ. ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಮುಂದೆ ಬರುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾರೇನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರಾದ ಆಂಜಿನಪ್ಪ(ಪುಟ್ಟು), ಯಲಹಂಕ ತಾಲ್ಲೂಕು ಭೂನ್ಯಾಯ ಮಂಡಳಿ ಸದಸ್ಯ ನಾಗರಾಜ್, ಮಾಜಿ ಗ್ರಾ.ಪಂ.ಅಧ್ಯಕ್ಷರಾದ ಚೊಕ್ಕನಹಳ್ಳಿ ನಂಜೇಗೌಡ, ಬಿ.ಎ.ಪ್ರೇಮ, ಡಿ.ಎಂ.ಚೌಡಪ್ಪ, ಮುನಿರಾಜಪ್ಪ, ಕೃಷ್ಣಮೂರ್ತಿ, ರತ್ನಮ್ಮ ವೆಂಕಟಸ್ವಾಮಿ, ಶೃತಿ ಮೂರ್ತಿ, ಸುಮಿತ್ರಾ ಮಂಜುನಾಥ್, ಆಂಜಿನಮ್ಮ ನಾಗರಾಜ್, ಉಪಾಧ್ಯಕ್ಷೆ ನಂಜಮ್ಮ ಬಲ್ಲಯ್ಯ, ಮಾಜಿ ಉಪಾಧ್ಯಕ್ಷೆ ಕಮಲಮ್ಮ ಮುನಿರಾಮಣ್ಣ, ಗ್ರಾ.ಪಂ.ಸದಸ್ಯರಾದ ವಿ.ನಾರಾಯಣಸ್ವಾಮಿ, ಗೀತಾ ಆನಂದಕುಮಾರ್, ಸಂಧ್ಯಾ ಸುಂದರೇಶ್, ಕೃಷ್ಣಪ್ಪ, ಜಿ.ಲಕ್ಷ್ಮೀನಾರಾಯಣ್, ಸಿ.ಎಂ.ನಾಗರಾಜ್, ಶಿಲ್ಪ, ರಾಮಚಂದ್ರ, ವೆಂಕಟೇಶ್, ಶ್ರೀರಾಮ, ಜ್ಯೋತಿ, ಸ್ಮಿತಾ, ಕೆ.ಎಂ.ರತ್ನಮ್ಮ, ಮಾರೇನಹಳ್ಳಿ ವಿಎಸ್ಎಸ್ಎನ್ ಅಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷ ಚೊಕ್ಕನಹಳ್ಳಿ ಮುನಿರಾಜು ಸೇರಿದಂತೆ ಇನ್ನಿತರರಿದ್ದರು.