

ERCAM-2024 : ಸುಸ್ಥಿರ ಎಂಜಿನಿಯರಿಂಗ್ ಆವಿಷ್ಕಾರಗಳ ಕುರಿತು ಜಾಗತಿಕ ತಜ್ಞರಿಂದ ಸಂವಾದ :
ಯಲಹಂಕ : ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಗುರುವಾರ ಆಯೋಜಿಸಿದ್ದ ‘ಇಆರ್ಸಿಎಎಂ 2024’ ಸುಸ್ಥಿರ ಎಂಜಿನಿಯರಿಂಗ್ ಆವಿಷ್ಕಾರಗಳ ಕುರಿತ ಜಾಗತಿಕ ತಜ್ಞರ ಸಮಾವೇಶವನ್ನು ಡಸಾಲ್ಟ್ ಸಿಸ್ಟಮ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಎನ್.ಜಿ. ಉದ್ಘಾಟಿಸಿದರು.
ನಂತರ ಅವರು ಮಾತನಾಡಿ “ತಂತ್ರಜ್ಞಾನವು ಉದ್ಯೋಗಗಳನ್ನು ಕಸಿದುಕೊಳ್ಳುವುದಿಲ್ಲ, ಬದಲಿಗೆ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಕೈಗಾರಿಕೆಗಳು ಬೆಳೆಯುತ್ತಿದ್ದಂತೆ ನಾವು ಹೊಸ ಹೊಸ ಉತ್ಪನ್ನಗಳನ್ನು ತಯಾರಿಸುವುದು ಅತ್ಯವಶ್ಯಕ. ಈ ನಿಟ್ಟಿನಲ್ಲಿ ಹೆಚ್ಚು ಪರಿಣಾಮಕಾರಿ ಯಾಗಿ ಕಾರ್ಯ ನಿರ್ವಹಿಸಲು ತಂತ್ರಜ್ಞಾನವು ನಮಗೆ ನೆರವಾಗುತ್ತದೆ. ಏರೋನಾಟಿಕ್ಸ್, ಮೂಲಸೌಕರ್ಯ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ನಂತಹ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರಗಳಿಗೆ ಭಾರಿ ಬೇಡಿಕೆ ಇರುವುದನ್ನು ಗಮನಿಸಿದ್ದೇನೆ. ನಮ್ಮ ಪ್ರತಿಭಾವಂತ ಯುವ ಸಮೂಹವನ್ನು ಇಡೀ ಜಗತ್ತೇ ಮೆಚ್ಚಿಕೊಳ್ಳುತ್ತದೆ. ನಾವು ಪರಿಶ್ರಮ ಮತ್ತು ಹೊಸ ಅವಿಷ್ಕಾರಗಳಿಗೆ ಸದಾ ಸಿದ್ಧರಾಗಿರುತ್ತೇವೆ. ನಮ್ಮ ಯುವಜನತೆಯ ಆವಿಷ್ಕಾರಗಳ ಗತಿ ಹೀಗೆಯೇ ಸಾಗಿದರೆ, 2028 ಅಥವಾ 2030ರ ವೇಳೆಗೆ ಭಾರತವನ್ನು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆ ಶಕ್ತಿಯನ್ನಾಗಿ ಮಾಡಲು ಸಹಕಾರಿಯಾಗಲಿದೆ ಎಂದರು.
ಸಮಾವೇಶ ಕುರಿತು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಚ್.ಸಿ.ನಾಗರಾಜ್ ಮಾತನಾಡಿ “ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯವು ವಿವಿಧ ವಿಭಾಗಗಳಲ್ಲಿ ಹೊಸ ಸಂಶೋಧನೆಗಳನ್ನು ಕೈಗೊಳ್ಳುವವರಿಗೆ ನೆರವಾಗುವ ಸೂಕ್ತ ವೇದಿಕೆಯನ್ನು ಒದಗಿಸಲು ಬದ್ಧವಾಗಿದೆ ಎಂದು ತಿಳಿಸಿದರು.
ಸಮಾವೇಶದ ಮೊದಲ ದಿನದ ಸಂವಾದದಲ್ಲಿ ಫೋಸ್ರೋಕ್ ಕೆಮಿಕಲ್ಸ್ ಇಂಡಿಯಾ ಪ್ರೈ.ಲಿ. ಲಿಮಿಟೆಡ್ ನ ತಾಂತ್ರಿಕ ವಿಭಾಗದ ವ್ಯವಸ್ಥಾಪಕ ವಾಮದೇವ್ ಜಿ.ಬಿ, ಐ-ಸ್ಟೆಮ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ರಾಷ್ಟ್ರೀಯ ಸಂಯೋಜಕ ಡಾ. ಹರಿಲಾಲ್ ಭಾಸ್ಕರ್, ಡಬ್ಲ್ಯೂ. ಎಸ್.ಪಿ.ಎಂ.ಇ.ಪಿ. ಸರ್ವೀಸಸ್ ನ ಮುಖ್ಯಸ್ಥ ರಾಮಿರೆಡ್ಡಿ ಕೊಂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಸಿವಿಲ್, ಏರೋನಾಟಿಕಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಹಲವು ಸಂಶೋಧನೆ ಗಳನ್ನು ಕುರಿತು ಖ್ಯಾತ ಶಿಕ್ಷಣ ತಜ್ಞರು, ವಿಜ್ಞಾನಿಗಳು, ಸಂಶೋಧಕರು ಮತ್ತು ಉದ್ಯಮ ತಜ್ಞರು ಬರೆದಿರುವ ಲೇಖನಗಳನ್ನು ಒಳಗೊಂಡ ಪುಸ್ತಕ ಬಿಡುಗಡೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾ ವಿದ್ಯಾಲಯದ ಪ್ರೊ.ಎಮಿರೇಟ್ಸ್ ಮತ್ತು ಸಲಹೆಗಾರರಾದ ಡಾ.ವಿ.ಶ್ರೀಧರ್, ಡೀನ್ ಅಕಾಡೆಮಿಕ್ಸ್ ಡಾ.ಸುಧೀರ್ ರೆಡ್ಡಿ, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ರಮೇಶ್ ಬಾಬು, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ್ ಎಲ್., ಏರೋನಾಟಿಕಲ್ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಎಚ್ ವಿ ಸೇರಿದಂತೆ ಇನ್ನಿತರರಿದ್ದರು.