ಕೆಳ ಹಂತದ ಸಿಬ್ಬಂದಿಗಳು ಸೇವಾ ಕ್ಷೇತ್ರದ ಬುನಾದಿ ಇದ್ದಂತೆ : ಸಿಇಒ ಲತಾಕುಮಾರಿ 

ಯಲಹಂಕ : ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹೀಗೆ ಯಾವುದೇ ಸರ್ಕಾರಿ ಇಲಾಖೆಯ ಸೇವಾ ಕ್ಷೇತ್ರದಲ್ಲಿ ಕೆಳ ಹಂತದ ಸಿಬ್ಬಂದಿಗಳು ಆಯಾ ಇಲಾಖೆಯ ಬುನಾದಿ ಇದ್ದಂತೆ, ಅವರು ಎಷ್ಟು ಪ್ರಾಮಾಣಿಕವಾಗಿ, ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಾರೋ ಆ ಇಲಾಖೆಗೆ ಅಷ್ಟು ಒಳ್ಳೆಯ ಹೆಸರು ಬರುತ್ತದೆ ಎಂದು ಬೆಂ.ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾ ಅಧಿಕಾರಿ ಕೆ.ಎಸ್.ಲತಾಕುಮಾರಿ ಡಿ ಗ್ರೂಪ್ ನೌಕರರ ಸೇವೆಯ ಮಹತ್ವ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.

ಯಲಹಂಕ ಮಿನಿ ವಿಧಾನಸೌಧ ದಲ್ಲಿರುವ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ  ಬೆಂಗಳೂರು ಉತ್ತರ ತಾಲ್ಲೂಕು ಪಂಚಾಯಿತಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ  11 ಗ್ರಾಮ ಪಂಚಾಯಿತಿಗಳ ಕರ ವಸೂಲಿಗಾರರು, ಜಲಗಾರರು ಸ್ವಚ್ಚತಾ ಸಿಬ್ಬಂದಿಗಳು ಸೇರಿದಂತೆ 82 ಸಿಬ್ಬಂದಿಗಳಿಗೆ ಉದ್ಯೋಗದ ಖಾಯಂ ನೇಮಕಾತಿ ಆದೇಶ ಪತ್ರ ವಿತರಣೆ ಮಾಡಿದ ನಂತರ ಮಾತನಾಡಿದ ಅವರು ‘ಖಾಯಂ ಆದೇಶ ಪತ್ರ ಪಡೆದ ಎಲ್ಲರಿಗೂ ಅಭಿನಂದನೆಗಳು, ಪ್ರತಿಯೊಬ್ಬರೂ ಆರೋಗ್ಯದ ಕಡೆ ಗಮನ ನೀಡಿ, ನಿಮಗಾಗಿ ಕುಟುಂಬವಿರುತ್ತೆ ಕುಟುಂಬವಿಲ್ಲದೆ ನಾವು ಅಪೂರ್ಣ ರಾಗುತ್ತೇವೆ. ಇದನ್ನು ಪ್ರತಿಕ್ಷಣ ಸ್ಮರಿಸಿಕೊಳ್ಳುತ್ತಾ  ಜವಬ್ದಾರಿಯಿಂದ ಕೆಲಸ ಮಾಡುವಂತೆ ತಿಳಿಸಿದರು. 

ಸಮಾನತೆ ನಮ್ಮ ಸಂವಿಧಾನದ ಪ್ರಮುಖ ಆಶಯವಾಗಿದೆ. ಯಾವುದೇ ಕ್ಷೇತ್ರದಲ್ಲಿ ಸ್ತ್ರೀ ಇರಲಿ ಪುರುಷನಿರಲಿ ಲಿಂಗ ತಾರತಮ್ಯ ಸಲ್ಲದು, ಎಲ್ಲರನ್ನೂ ಸಮನಾಗಿ ಕಾಣಬೇಕು ಎಂದರು.

ಇದೇ ಸಂದರ್ಭದಲ್ಲಿ ಬೆಂ.ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಲಲಿತಾ, ಉಪ ಕಾರ್ಯದರ್ಶಿ ಅನಿತಾ, ಯೋಜನಾ ನಿರ್ದೇಶಕ ಮೋಹನ್ ಕುಮಾರ್, ಬೆಂ.ಉತ್ತರ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಜೋಸೆಫ್, ವ್ಯವಸ್ಥಾಪಕ ಬೋರೆಗೌಡ, ಸಹಾಯಕ ನಿರ್ದೇಶಕ ಅಮರಯ್ಯ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿ ಅಧಿಕಾರಿ ವರ್ಗದವರು ಸೇರಿದಂತೆ ಬೆಂಗಳೂರು ಉತ್ತರ ತಾಲ್ಲೂಕು ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಸಿಬ್ಬಂದಿಗಳಿದ್ದರು.

ಇದೇ ವೇಳೆ ‘ಲಿಂಗತ್ವ ಆಧಾರಿತ ದೌರ್ಜನ್ಯ ವಿರುದ್ಧ ರಾಷ್ಟ್ರೀಯ ಅಭಿಯಾನ’ದ ಅಂಗವಾಗಿ ಲಿಂಗ ತಾರತಮ್ಯ ವಿರೋಧಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.

Leave a Reply

Your email address will not be published. Required fields are marked *