






ಸರ್ಕಾರದ ಒಳ ಮೀಸಲಾತಿ ವಿರೋಧಿ ಧೋರಣೆ ಖಂಡಿಸಿ ಹಕ್ಕೊತ್ತಾಯ ಸಮಾವೇಶಕ್ಕೆ ಕರೆ :
ಒಳ ಮೀಸಲಾತಿ ಜಾರಿಗೆ ಶಾಸಕರಿಗೆ ಮನವಿ :
ಯಲಹಂಕ : ರಾಜ್ಯ ಸರ್ಕಾರ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಎಸ್.ಸಿ.ಮೋರ್ಚಾ, ಬೆಂಗಳೂರು ಆದಿಜಾಂಬವ ಮಾದಿಗ ಮಹಾಸಭಾ, ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದ ನೂರಾರು ಕಾರ್ಯಕರ್ತರು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದರು.
ಇದೇ ವೇಳೆ ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಎಸ್.ಸಿ.ಮೋರ್ಚಾ ಅಧ್ಯಕ್ಷ ಬಿ.ಶ್ರೀನಿವಾಸಯ್ಯ ಮಾತನಾಡಿ ‘ಆಗಸ್ಟ್ 1ರಂದು ಸುಪ್ರೀಂಕೋರ್ಟ್ ನ ಸಂವಿಧಾನ ಪೀಠ ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ಆಯಾ ರಾಜ್ಯಗಳಿಗೆ ನೀಡುವ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಈ ಐತಿಹಾಸಿಕ ತೀರ್ಪು ಹೊರಬೀಳುವಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಪಾತ್ರ ಮಹತ್ವಪೂರ್ಣವಾದುದು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಒಳ ಮೀಸಲಾತಿ ಜಾರಿಗೆ ಶಿಫಾರಸ್ಸು ಮಾಡುವ ನಿರ್ಧಾರ ಮಾಡಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಒಳ ಮೀಸಲಾತಿ ಯನ್ನು ಬೆಂಬಲಿಸಿದ್ದಾರೆ. ಹರಿಯಾಣದ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟ್ ತೀರ್ಪು ಬಂದ ಮೊದಲ ವಾರದಲ್ಲೆ ಒಳ ಮೀಸಲಾತಿ ಜಾರಿ ಮಾಡಿದೆ.
ಆದರೆ ತೀರ್ಪು ಹೊರಬಿದ್ದು ನಾಲ್ಕು ತಿಂಗಳು ಕಳೆದರೂ ಸಹ ಕರ್ನಾಟಕ ರಾಜ್ಯ ಸರ್ಕಾರ ಕಾಟಾಚಾರಕ್ಕೆ ನ್ಯಾ.ನಾಗಮೋಹನ್ ದಾಸ್ ಆಯೋಗ ರಚಿಸಿದ್ದು ಬಿಟ್ಟರೆ ಏನನ್ನೂ ಮಾಡಿಲ್ಲ. ಒಳ ಮೀಸಲಾತಿ ಕುರಿತು ಆಯೋಗ ಎರಡು ತಿಂಗಳಲ್ಲಿ ವರದಿ ನೀಡಲಿದೆ ಎಂದು ರಾಜ್ಯ ಸರ್ಕಾರ ಹೇಳಿತ್ತು, ಆದರೆ 45 ದಿನ ಕಳೆದರೂ ಸಹ ಆಯೋಗ ಈ ದಿಸೆಯಲ್ಲಿ ಕೆಲಸ ಆರಂಭಿಸಿಲ್ಲ. ಆಯೋಗಕ್ಕೆ ಆಗತ್ಯವಿರುವ ಕಚೇರಿ, ಸಿಬ್ಬಂದಿ, ಹಣಕಾಸಿನ ನೆರವು ಸೇರಿದಂತೆ ಯಾವುದನ್ನು ಕೊಡದ ರಾಜ್ಯ ಕಾಂಗ್ರೆಸ್ ಸರ್ಕಾರ ಕಾಲಹರಣ ಮಾಡುವುದರ ಜೊತೆಗೆ ಒಳಮೀಸಲಾತಿ ವಿರೋಧಿ ಧೋರಣೆ ತೋರುತ್ತಿದೆ ಎಂದು ಆರೋಪಿಸಿದರು. ಒಳ ಮೀಸಲಾತಿ ಕುರಿತ ಸರ್ಕಾರದ ನಡೆಯನ್ನು ಖಂಡಿಸಿ ಡಿ.16ರಂದು ಬೆಳಗಾವಿಯಲ್ಲಿ ಹಕ್ಕೊತ್ತಾಯ ಸಮಾವೇಶ ಹಮ್ಮಿಕೊಂಡಿದ್ದು ಈ ಸಮಾವೇಶಕ್ಕೆ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಪಾಲ್ಗೊಳ್ಳಬೇಕು ಮತ್ತು ಬೆಳಗಾವಿ ಅಧಿವೇಶನದಲ್ಲಿ ಒಳ ಮೀಸಲಾತಿ ಜಾರಿ ವಿಷಯ ಕುರಿತು ಪ್ರಸ್ತಾಪಿಸುವುದರ ಜೊತೆಗೆ ಒಳ ಮೀಸಲಾತಿಗೆ ಬೆಂಬಲ ಸೂಚಿಸಬೇಕು ಎಂದು ಒತ್ತಾಯಿಸಿದರು.
ಮನವಿ ಪತ್ರ ಸ್ವೀಕರಿಸಿದ ನಂತರ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ‘ಒಳ ಮೀಸಲಾತಿ ಜಾರಿಗೆ ನನ್ನ ಸಂಪೂರ್ಣ ಬೆಂಬಲಿವಿದೆ. ಒಳ ಮೀಸಲಾತಿ ಜಾರಿ ಕುರಿತು ನೀವು ನೀಡಿರುವ ಮನವಿ ಕುರಿತು ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸುವುದರ ಜೊತೆಗೆ ಒಳ ಮೀಸಲಾತಿ ಬೆಂಬಲಿಸಿ ಧ್ವನಿ ಎತ್ತುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಎಸ್.ಸಿ.ಮೋರ್ಚಾ ನಿಕಟ ಪೂರ್ವ ಅಧ್ಯಕ್ಷ ಲಿಂಗನಹಳ್ಳಿ ವೆಂಕಟೇಶ್, ಹಾಲಿ ಪ್ರಧಾನ ಕಾರ್ಯದರ್ಶಿ ಮುನಿರಾಜು, ದಲಿತ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಜೆ.ಲಿಂಗಯ್ಯ, ಬೆಂ.ಉತ್ತರ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮುನಿದಾಸಪ್ಪ, ಯಲಹಂಕ ಹೆಸರಘಟ್ಟ ಹೋಬಳಿ ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ವೀರಸಾಗರ ನಾಗೇಶ್, ಪ್ರಧಾನ ಕಾರ್ಯದರ್ಶಿ ಸಿಂಗನಾಯಕನಹಳ್ಳಿ ಮಲ್ಲೇಶ್, ಉಪಾಧ್ಯಕ್ಷ ಎಂ.ಹನುಮಂತಯ್ಯ, ಕಾರ್ಯದರ್ಶಿ, ಪ್ರಚಾರ ಸಮಿತಿ ಅಧ್ಯಕ್ಷ ರಾಜಶೇಖರ್, ಮುನಿಕೃಷ್ಣ, ದಾಸನಪುರ ಹೋಬಳಿ ಅಧ್ಯಕ್ಷ ಗಂಗಾಧರ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಗ್ರಾ.ಮಂಡಲ ಎಸ್ ಸಿ ಮೋರ್ಚಾ ಉಪಾಧ್ಯಕ್ಷ ದೇವಿಕುಮಾರ್, ಗೋಪಣ್ಣ, ಜಿಲ್ಲಾ ಬಿಜೆಪಿ ಮುಖಂಡರಾದ ಈರಣ್ಣ ಮೌರ್ಯ, ಬಿ.ಆರ್.ಮುನಿರಾಜು, ಯಲಹಂಕ ನಗರ ಮಂಡಲ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೆಂಕಟಾಲ ಮುನಿರಾಜು, ಅಟ್ಟೂರು ವಾರ್ಡ್ ಎಸ್ ಸಿ ಮೋರ್ಚಾ ಅಧ್ಯಕ್ಷ ಎನ್.ಸುನಿಲ್ ಕುಮಾರ್, ನಗರ ಮಂಡಲ ಕಾರ್ಯದರ್ಶಿ ಗುರುಮೂರ್ತಿ, ಗ್ರಾಮಾಂತರ ಮಂಡಲ ಕಾರ್ಯದರ್ಶಿಗಳಾದ ಮಾಕಳಿ ರವಿಚಂದ್ರ, ಶ್ಯಾನುಭೋಗನಹಳ್ಳಿ ರವಿಕುಮಾರ್, ಗಂಟಿಗಾನಹಳ್ಳಿ ನಾಗೇಶ್, ನಾಗದಾಸನಹಳ್ಳಿ ಚಂದ್ರಶೇಖರ್, ಚೇತನ್ ಬೆಟ್ಟಹಳ್ಳಿ, ಕಾಕೋಳು ರಂಗಸ್ವಾಮಿ ಸೇರಿದಂತೆ ಮಾದಿಗ ಸಮುದಾಯದ ನೂರಾರು ಮುಖಂಡರಿದ್ದರು.