











ಬಂಡಿಕೊಡಿಗೇಹಳ್ಳಿ ಗ್ರಾಮ ಪಂಚಾಯ್ತಿಯಿಂದ ಆಯೋಜನೆ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಬಂಡಿಕೊಡಿಗೇಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಬುಧವಾರ ಆಯೋಜಿಸಿದ್ದ 2024-25ನೇ ಸಾಲಿನ ಮೊದಲನೇ ಸುತ್ತಿನ ಗ್ರಾಮ ಸಭೆಯನ್ನು ಗ್ರಾ.ಪಂ.ಅಧ್ಯಕ್ಷೆ ಪವಿತ್ರ ಸುಬ್ರಮಣಿ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ ‘ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗಾಗಿ ಗ್ರಾ.ಪಂ.ನ ಸರ್ವ ಸದಸ್ಯರು ಒಟ್ಟಾಗಿ ಕೆಲಸ ಮಾಡುತ್ತೇವೆ. ವಿವಿಧ ಯೋಜನೆಗಳ ಬಗ್ಗೆ ಲಭ್ಯ ಮಾಹಿತಿ ಪಡೆದು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವ ದಿಸೆಯಲ್ಲಿ ಕೆಲಸ ಮಾಡಲು ಬದ್ಧರಾಗಿದ್ದೇವೆ. ಮನರೇಗಾ ಯೋಜನೆಯಡಿ ಹಲವು ಕಾಮಗಾರಿಗಳನ್ನು ನಿರ್ವಹಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಗ್ರಾಮಸಭೆ ಉದ್ದೇಶಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂಣಚ್ಚ ಅವರು ಮಾತನಾಡಿ ‘ಗ್ರಾಮ ಸಭೆಯಲ್ಲಿ ಆಡಳಿತ ವರದಿಯನ್ನು ತಿಳಿಸಿ ಈಗಾಗಲೇ ಎಲ್ಲಾ ಗ್ರಾಮಗಳಲ್ಲಿ ವಾರ್ಡ್ ಸಭೆಗಳನ್ನು ಮಾಡಿ ಬೇಡಿಕೆಗಳನ್ನು ಪಡೆದು ಕಾಮಗಾರಿಗಳನ್ನು ನಿರ್ವಹಿಸಲು ನೀಲನಕ್ಷೆ ಸಿದ್ಧಪಡಿಸಿದ್ದು, ಅತೀ ಶೀಘ್ರವಾಗಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ, ಶ್ರವಣ ಸಾಧನಗಳು, ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣ ರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಬಡ ವಿದ್ಯಾರ್ಥಿಗಳಿಗೆ ಸಹಾಯಧನ ಮುಂತಾದ ಹಲವು ಸವಲತ್ತುಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಪಿ.ವಿ.ಸಿ.(ಸಮತಾವಾದ) ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ, ಗ್ರಾ.ಪಂ.ಉಪಾಧ್ಯಕ್ಷೆ ಶ್ವೇತ ಚನ್ನಕೇಶವ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಜನಾರ್ದನ ಪಿ., ಎನ್.ಜಗದೀಶ್, ಚೈತ್ರ ರಾಜಶೇಖರ್, ಗ್ರಾ.ಪಂ. ಸದಸ್ಯರಾದ ಚೈತ್ರ ಪಿ.ತಿಮ್ಮೇಗೌಡ, ಅನಿತಾ ನಾರಾಯಣ, ಜೆ.ಪವಿತ್ರ ಹರೀಶ್, ಭಾಗ್ಯಲಕ್ಷ್ಮಿ ಬಿ.ವಿ. ಚಂದ್ರಮುರಳಿ, ಆಶಾ ರವೀಂದ್ರ, ಆಂಜಿನಪ್ಪ ಕೆ., ಎಂ.ಕೆ.ಭಾರತಿ ನಾರಾಯಣಸ್ವಾಮಿ, ಮುನೇಗೌಡ ಎನ್., ಗಿರೀಶ್ ಎಂ., ವಿ.ದೇವರಾಜ್, ನವೀನ್ ಎನ್., ಸುಬ್ರಮಣಿ ಎಂ., ಪುಷ್ಪ ನಾರಾಯಣಸ್ವಾಮಿ, ಮಂಜುನಾಥ್ ಕೆ., ಜಯಲಕ್ಷ್ಮಮ್ಮ ಶಿವಣ್ಣ, ರಾಮಕೃಷ್ಣರಾಜು, ಅಮರನಾರಾಯಣಸ್ವಾಮಿ, ಗಾಯತ್ರಿ ವಿ.ಬಸವರಾಜು, ಉಮಾ ಮುನಿರಾಜು, ಕೃಷ್ಣಪ್ಪ ಬಿ.ಎನ್. ಪಂಚಾಯಿತಿ ಕಾರ್ಯದರ್ಶಿ ಶಿವಣ್ಣ, ಜಿಲ್ಲಾ ಐಇಸಿ ಸಂಯೋಜಕ ನವೀನ್ ಬಾಬು ಎನ್. ಸೇರಿದಂತೆ ಗ್ರಾಮ ಸಿಬ್ಬಂದಿ ವರ್ಗದವರು, ಬಂಡಿಕೊಡಿಗೇಹಳ್ಳಿ ಗ್ರಾಮಸ್ಥರಿದ್ದರು.