


ದಿ. ಬಿ. ಬಸವಲಿಂಗಪ್ಪ ಅವರ 32ನೇ ಪರಿನಿರ್ವಾಣ ದಿನಾಚರಣೆ :
ದ.ಸಂ.ಸ.ಸಮತಾವಾದದಿಂದ ಕಾಲ್ನಡಿಗೆ ಜಾಥಾ :
ಯಲಹಂಕ : ದಲಿತ ಸೂರ್ಯ, ಅಭಿನವ ಅಂಬೇಡ್ಕರ್ ಎಂದೇ ಖ್ಯಾತಿ ಪಡೆದಿದ್ದ, ಮಾಜಿ ಸಚಿವ ದಿ.ಬಿ.ಬಸವಲಿಂಗಪ್ಪ ರವರ 32ನೇ ಪರಿನಿರ್ವಾಣ ದಿನಾಚರಣೆ ಪ್ರಯುಕ್ತ ದಲಿತ ಸಂಘರ್ಷ ಸಮಿತಿ ಸಮತಾವಾದ ಸಂಘಟನೆಯ ರಾಜ್ಯಾಧ್ಯಕ್ಷ ಎಚ್.ಮಾರಪ್ಪ ಅವರ ನೇತೃತ್ವದಲ್ಲಿ ಸಂಘಟನೆಯ ನೂರಾರು ಕಾರ್ಯಕರ್ತರು ಶುಕ್ರವಾರ ಯಲಹಂಕ ಉಪನಗರದ ಅಂಬೇಡ್ಕರ್ ನಗರದಿಂದ ಅಳ್ಳಾಳಸಂದ್ರ ಗೇಟ್ ಬಳಿಯಿರುವ ದಿ.ಬಸವಲಿಂಗಪ್ಪ ಅವರ ಸಮಾಧಿ ಸ್ಥಳದವರೆಗೆ ಕಾಲ್ನಡಿಗೆ ಜಾಥಾ ನಡೆಸಿ, ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
ಬಳಿಕ ಎಚ್.ಮಾರಪ್ಪ ಮಾತನಾಡಿ ‘ಸಂವಿಧಾನ ಶಿಲ್ಪಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ಹಾಕಿಕೊಟ್ಟ ಉದಿತ ಮಾರ್ಗದಲ್ಲಿ ರಾಜಕಾರಣ ಮಾಡಿದ ಬಿ. ಬಸವಲಿಂಗಪ್ಪ ಅವರು ಕರ್ನಾಟಕ ಕಂಡ ಅಪರೂಪದ ರಾಜಕಾರಣಿ, ರಾಜ್ಯಕ್ಕೆ ಅವರ ಕೊಡುಗೆ ಅಪಾರ. ದಲಿತರು, ಧಮನಿತರ ಪಾಲಿಗೆ ಅವರು ಭರವಸೆಯ ಬೆಳಕಾಗಿದ್ದರು. ಮಲ ಹೊರುವ ಪದ್ಧತಿ ನಿಷೇಧ, ದಲಿತರಿಗೆ ಮಂಜೂರಾದ ಜಮೀನು ಪರಭಾರೆ ಯಾಗದಂತೆ ಕಾನೂನು ರೂಪಿಸಿದರು. ಅವರು ಕಂದಾಯ ಸಚಿವರಾಗಿದ್ದಾಗಲೇ, ಎಲ್ಲಾ ಜಾತಿಗಳ ಬಡವರಿಗೂ ನೆರವಾದ ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿಯಾಯಿತು. ಬಸವಲಿಂಗಪ್ಪ ಅವರು ರಾಜಕಾರಣವಷ್ಟೇ ಅಲ್ಲದೆ, ವೈಚಾರಿಕ ಲೋಕ ಮತ್ತು ದಲಿತ ಚಳುವಳಿಗೆ ಅವರ ಕೊಡುಗೆ ಮಹತ್ತರ ವಾದದು ಎಂದು ಅವರ ಸಾಧನೆಯನ್ನು ಸ್ಮರಿಸಿದರು.
ದಿ.ಬಸವಲಿಂಗಪ್ಪ ಅವರ ಕೊಡುಗೆ ಪರಿಗಣಿಸಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಿ :
ಪ್ರಜಾ ವಿಮೋಚನಾ ಚಳವಳಿ (ಸ್ವಾಭಿಮಾನ)ಯ ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ ಮಾತನಾಡಿ ‘ಬಸವಲಿಂಗಪ್ಪ ಅವರಿಗೆ ಬಡವರ ಬಗೆಗೆ ಅನನ್ಯವಾದ ಕಾಳಜಿಯಿತ್ತು. ಬೂಸಾ ಚಳುವಳಿಯ ರುವಾರಿ ಯಾಗಿದ್ದ ಅವರು ಪಿಟಿಸಿಎಲ್ ಕಾಯ್ದೆಯ ಅಡಿಯಲ್ಲಿ ನಾಡಿನ ಲಕ್ಷಾಂತರ ಬಡವರಿಗೆ ಭೂಮಾಲಿಕತ್ವ, ಆಶ್ರಯ ಯೋಜನೆ ಅಡಿಯಲ್ಲಿ ಲಕ್ಷಾಂತರ ಬಡವರಿಗೆ ವಾಸ್ತವ್ಯದ ನೆರಳು ಕಲ್ಪಿಸಿ ಕೊಟ್ಟಿದ್ದು, ಅವರನ್ನು ಎಷ್ಟು ಸ್ಮರಿಸಿದರೂ ಸಾಲದು. ಅಂದಿನ ಸಮಕಾಲೀನ ರಾಜಕಾರಣದಲ್ಲಿ ಕಾಂಗ್ರೆಸ್ ನ ಬಹುದೊಡ್ಡ ನಾಯಕರಾಗಿದ್ದ ದಿ.ಬಿ. ಬಸವಲಿಂಗಪ್ಪ ಅವರ ಕೊಡುಗೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಒತ್ತಾಯಿಸಿದರು.
ಪರಿನಿರ್ವಾಣ ದಿನಾಚರಣೆ ಪ್ರಯುಕ್ತ ದ.ಸಂ.ಸ. ಸಮತಾವಾದ ರಾಜ್ಯಾಧ್ಯಕ್ಷ ಎಚ್.ಮಾರಪ್ಪ ಸಾವಿರಕ್ಕೂ ಹೆಚ್ಚು ಬಡವರಿಗೆ ಬ್ಲಾಂಕೆಟ್ ವಿತರಿಸಿದರು.
ಇದೇ ಸಂದರ್ಭದಲ್ಲಿ ದಿ.ಬಸವಲಿಂಗಪ್ಪ ಅವರ ಪುತ್ರ ಮಾಜಿ ಶಾಸಕ ಬಿ.ಪ್ರಸನ್ನ ಕುಮಾರ್, ವರುಣ್ ಪ್ರಸನ್ನಕುಮಾರ್, ನಂಜನಗೂಡು ಮಾಜಿ ಶಾಸಕ ಹರ್ಷವರ್ಧನ್, ಮಾಜಿ ಜಿ.ಪಂ.ಅಧ್ಯಕ್ಷ ಜಕ್ಕೂರು ರವಿಕುಮಾರ್, ಕಾಂಗ್ರೆಸ್ ಮುಖಂಡರಾದ ನಾಗೇನಹಳ್ಳಿ ಶ್ರೀನಿವಾಸ್, ಆವಲಹಳ್ಳಿ ರಮೇಶ್, ಸಿ.ಶಶಿಕುಮಾರ್, ದ.ಸಂ.ಸ.ಜಿಲ್ಲಾ ಸಂಯೋಜಕ ರಾಮಗೊಂಡನಹಳ್ಳಿ ರಮೇಶ್, ಎಂ.ಮಂಜುನಾಥ್, ಮಾವಳಿಪುರ ಕೆಂಪಣ್ಣ ಸೇರಿದಂತೆ ಹಲವು ಗಣ್ಯರಿದ್ದರು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ
Public power
R Hanumanthu
Kogilu layout Yelahanka
9845085793
7349337989
8050671579