




ಬಡವರ ಸೇವೆಯೇ ಬದುಕಿನ ಸಾರ್ಥಕತೆ : ಎಸ್.ಮಹದೇವಯ್ಯ
ಬ್ಯಾಟರಾಯನಪುರ : ಬಡವರು, ದೀನ-ದಲಿತರು, ಅನಾಥರ ಸೇವೆಯಲ್ಲಿ ಬದುಕಿನ ಸಾರ್ಥಕತೆ ಅಡಗಿದೆ, ಸೇವೆ ದೇವರ ಪೂಜೆಯಷ್ಟೇ ಶ್ರೇಷ್ಠವಾದುದು ಎಂದು ಅನಿವಾಸಿ ಭಾರತೀಯ ಎಸ್.ಮಹದೇವಯ್ಯ(ಲಂಡನ್) ಅಭಿಪ್ರಾಯಪಟ್ಟರು.
ಬ್ಯಾಟರಾಯನಪುರ ಕ್ಷೇತ್ರದ ಹುಣಸಮಾರನಹಳ್ಳಿಯ ‘ಶ್ರೀ ಜಗದ್ಗುರು ಪಂಡಿತಾರಾಧ್ಯ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿ’ನಲ್ಲಿ ತಮ್ಮ ಸ್ವಂತ ಹಣದ ನೆರವಿನಿಂದ ನಿರ್ಮಿಸಲಾಗಿದ್ದ ಮಕ್ಕಳ ಆಟದ ಮೈದಾನ ಉದ್ಘಾಟನೆ ಮತ್ತು ಚಿರಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಕಳೆದ 50 ವರ್ಷಗಳಿಂದ ಲಂಡನ್ ನಲ್ಲಿದ್ದರೂ ಸಹ ತಾಯ್ನಾಡಿನ ತುಡಿತ ಸದಾ ಕಾಡತ್ತದೆ, ವರ್ಷದಲ್ಲಿ ಕೆಲವು ತಿಂಗಳಾದರೂ ಇಲ್ಲಿಗೆ ಬಂದು ಕೆಲ ಶಾಲೆಗಳು, ಅನಾಥಾಶ್ರಮಗಳು, ವೃದ್ಧಾಶ್ರಮಗಳು, ವಿಶೇಷ ಚೇತನರ ಆಶ್ರಮಗಳಿಗೆ ನೆರವು ನೀಡುವ ಪರಿಪಾಠ ಆರಂಭದಿಂದಲೂ ಬೆಳೆಸಿಕೊಂಡು ಬಂದಿದ್ದೇನೆ. ಹುಣಸಮಾರನಹಳ್ಳಿಯ ಈ ಶಾಲೆಯಲ್ಲೇ ನಾನು ಮಾಧ್ಯಮಿಕ ಶಾಲೆಯನ್ನು ಕಲಿತೆ, ಇಲ್ಲಿನ ವಿದ್ಯಾರ್ಥಿ ನಿಯಮದಲ್ಲಿ ಊಟ ಮಾಡಿಕೊಂಡು ಪ್ರೌಢಶಾಲಾ ವ್ಯಾಸಂಸಗ ಮಾಡಿರುವ ನನಗೆ ಈ ಶಾಲೆಯ ಏಳಿಗೆಯ ಬಗ್ಗೆ ವಿಶೇಷ ಕಾಳಜಿ ಇದ್ದು, ಈ ದಿಸೆಯಲ್ಲಿ ಶಾಲೆಯ ಮಕ್ಕಳು ವಿದ್ಯಾಭ್ಯಾಸ ಮತ್ತು ಕ್ರೀಡೆ ಎರಡರಲ್ಲೂ ಸಾಧನೆ ಮಾಡಬೇಕೆಂಬ ಸದುದ್ದೇಶದಿಂದ ಫುಟ್ಬಾಲ್, ಕಬಡ್ಡಿ, ವಾಲಿಬಾಲ್ ಮತ್ತು ಖೋಖೋ ಕೋರ್ಟ್ ಗಳನ್ನು ನಿರ್ಮಿಸಿ ಇಂದು ಲೋಕಾರ್ಪಣೆ ಮಾಡಲಾಗಿದೆ.
ಹಾಗೆಯೇ ದಾನಿಗಳಾದ ಕನ್ನಳ್ಳಿಯ ಶ್ರೀ ಪಟೇಲ್ ಸಾವಂದಯ್ಯ, ಎಸ್.ಮೃತ್ಯುಂಜಯ ಮತ್ತು ಎಸ್.ಪಂಚಾಕ್ಷರಯ್ಯ ಇವರ ದಿವ್ಯ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾಜದಿಂದ ಎಲ್ಲವನ್ನೂ ಪಡೆದ ನಾವು ಸಮಾಜಕ್ಕೆ ಹಿಂತಿರುಗಿ ಕೊಡುವ ಸದಬ್ಯಾಸ ಬೆಳೆಸಿಕೊಂಡು ಬದುಕಿನಲ್ಲಿ ಮುನ್ನಡೆಯಬೇಕು. ಬಸವಣ್ಣನವರ ತತ್ವಾದರ್ಶಗಳ ಹಿನ್ನೆಲೆಯಲ್ಲೇ ಬದುಕಿನಲ್ಲಿ ಸಾಗಿ ಬಂದಿರುವ ನಾನು ಸೇವೆ ಮತ್ತು ಪೂಜೆಯಲ್ಲಿ ಯಾವ ಅಂತರವೂ ಇಲ್ಲ ಎಂದುಕೊಂಡಿದ್ದೇನೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹುಣಸಮಾರನಹಳ್ಳಿ ಶ್ರೀಮಠದ ಶ್ರೀ ಪಟ್ಟದ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದು, ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ.ಕೆ.ವಿ.ಮಂಜುನಾಥ್, ಎಸ್.ಜೆ.ಪಿ.ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಛಾಯಾ, ಉಪ ಪ್ರಾಂಶುಪಾಲ ರಾದ ಎಂ.ಗಂಗರಾಜು, ನಿವೃತ್ತ ಉಪ ಪ್ರಾಂಶುಪಾಲರಾದ ಎಂ.ವಿ.ವಿಜಯಾಂಬಿಕೆ, ಶಿಕ್ಷಕರಾದ ಎಂ.ಕೆ.ಚೆಲುವರಾಜು ಸೇರಿದಂತೆ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿಗಳಿದ್ದರು.