




2.5 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೃಷ್ಣಬೈರೇಗೌಡ ಚಾಲನೆ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಕೊಡಿಗೇಹಳ್ಳಿ ವಾರ್ಡ್ ವ್ಯಾಪ್ತಿಯ ತಿಂಡ್ಲು ಸಮೀಪದ ಗಣೇಶ ಬಡಾವಣೆ, ಬ್ಯಾಟರಾಯನಪುರ ವಾರ್ಡ್ ವ್ಯಾಪ್ತಿಯ ಅಮೃತಹಳ್ಳಿ ಸಮೀಪದ ಕಾಶಿನಗರ, ಜಕ್ಕೂರು ವಾರ್ಡ್ ವ್ಯಾಪ್ತಿಯ ಕಟ್ಟಿಗೇನಹಳ್ಳಿ ಸಮೀಪದ ಸಂಗೊಳ್ಳಿ ರಾಯಣ್ಣ ಬಡಾವಣೆ ಗಳಲ್ಲಿ ಸುಮಾರು 2.5 ಕೋಟಿ ರು.ಅಂದಾಜು ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಭಾನುವಾರ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಸಚಿವರು ಹಲವು ತಿಂಗಳುಗಳ ಹಿಂದೆಯೇ ಅನುದಾನ ಮಂಜೂರಾಗಿತ್ತು, ಆದರೆ ಮಳೆಗಾಲದ ಕಾರಣದಿಂದಾಗಿ ಕಾಮಗಾರಿಗೆ ಚಾಲನೆ ನೀಡಿರಲಿಲ್ಲ, ಇದೀಗ ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇಂದು 2.5 ಕೋಟಿ ರು.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಮುಂದಿನ ವಾರ ಇನ್ನೂ ಹೆಚ್ಚಿನ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಕ್ಷೇತ್ರದ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಇದೇ ವೇಳೆ ಸಚಿವ ಕೃಷ್ಣಬೈರೇಗೌಡ ಅವರು ಪ್ರಗತಿಯಲ್ಲಿರುವ ದೊಡ್ಡ ಬೊಮ್ಮಸಂದ್ರ ಕೆರೆ ಸಮೀಪದ ರಸ್ತೆಯ ಪರಿವೀಕ್ಷಣೆ ನಡೆಸಿದರು.
ಇದೇ ಸಂದರ್ಭದಲ್ಲಿ ಕೊಡಿಗೇಹಳ್ಳಿ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ವೆಂಕಟಸ್ವಾಮಿ, ಬ್ಯಾಟರಾಯನ ಪುರ ಕ್ಷೇತ್ರ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹನುಮಂತಿ, ಮಾಜಿ ನಗರಸಭಾ ಸದಸ್ಯ ಆರ್.ಎಂ. ಶ್ರೀನಿವಾಸ್, ಕಾಂಗ್ರೆಸ್ ಮುಖಂಡ ರಾದ ವಿ.ಹರಿ, ರಾಜು ಎನ್., ಮಲ್ಯಾದ್ರಿ, ಗೋಪಾಲಕೃಷ್ಣ, ಸತೀಶ್ ಸೇರಿದಂತೆ ಇನ್ನಿತರರಿದ್ದರು.