

ಆನ್ ಲೈನ್ ಬೆಟ್ಟಿಂಗ್ ಆ್ಯಪ್ ಗಳ ನಿಷೇಧಕ್ಕೆ ಕ.ರ.ವೇ.ಕಾರ್ಯಕರ್ತರ ಆಗ್ರಹ :
ಯಲಹಂಕ : ಆನ್ ಲೈನ್ ಬೆಟ್ಟಿಂಗ್ ಆ್ಯಪ್ ಗಳಿಂದ ರಾಜ್ಯದಲ್ಲಿ ಯುವ ಜನತೆ ದಾರಿ ತಪ್ಪುತ್ತಿದ್ದು, ಇವುಗಳ ದುಷ್ಪರಿಣಾಮದಿಂದಾಗಿ ಯುವಕರು ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾರೆ ಈ ದಿಸೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ಬೆಟ್ಟಿಂಗ್ ಆ್ಯಪ್ ಗಳನ್ನು ನಿಷೇಧಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ವಿದ್ಯಾರ್ಥಿ ಘಟಕದ ಕಾರ್ಯಕರ್ತರು ಯಲಹಂಕ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಪ್ರತಿಭಟನೆ ಉದ್ದೇಶಿಸಿ ಕ.ರ.ವೇ.ವಿದ್ಯಾರ್ಥಿ ಘಟಕದ ರಾಜ್ಯಾಧ್ಯಕ್ಷ ಯಲಹಂಕ ಗುರು ಮಾತನಾಡಿ ‘ಆನ್ ಲೈನ್ ಬೆಟ್ಟಿಂಗ್ ಆ್ಯಪ್ ಗಳು ಇತ್ತೀಚೆಗೆ ಯುವಕರ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಯುವಕರು ಪೋಷಕರಿಂದ ಕೈತಪ್ಪಿ ಹೋಗುವಂತಹ ದುಸ್ಥಿತಿಗೆ ತಲುಪುತ್ತಿದ್ದಾರೆ. ಪೋಷಕರು ಕಷ್ಟಪಟ್ಟು ದುಡಿದು ಕೂಡಿಟ್ಟ ಹಣವನ್ನು ಆನ್ ಲೈನ್ ಆ್ಯಪ್ ಗಳಲ್ಲಿ ಬೆಟ್ಟಿಂಗ್ ಆಟವಾಡಿ ಸೋತು, ಇತ್ತ ಪೋಷಕರಿಗೆ ಹೇಳಲಾಗದೆ, ತಾವೂ ಸಹ ಸಂತೈಸಿಕೊಳ್ಳಲಾಗದೆ ಆತ್ಮಹತ್ಯೆಯ ಹಾದಿ ತುಳಿಯುತ್ತಿರುವುದು ದುರ್ದೈವದ ಸಂಗತಿ. ಯುವ ಜನತೆಯನ್ನು ದಾರಿ ತಪ್ಪಿಸುತ್ತಿರುವ ಈ ಬೆಟ್ಟಿಂಗ್ ಆ್ಯಪ್ ಗಳಿಗೆ ಕನ್ನಡ ಚಲನಚಿತ್ರ ನಟ, ನಟಿಯರು ಆಕರ್ಷಕ ಜಾಹೀರಾತುಗಳಲ್ಲಿ ನಟಿಸುವ ಮೂಲಕ ಯುವಕರನ್ನು ಪ್ರೋತ್ಸಾಹಿಸುತ್ತಿರುವುದು ನಾಚಿಕೆಗೇಡಿನ ಸಂಗತಿ, ಸಮಾಜಕ್ಕೆ ಆದರ್ಶದ ಸಂದೇಶ ನೀಡಬೇಕಿದ್ದ ನಟ,ನಟಿಯರು ಹಣದ ದುರಾಸೆಗಾಗಿ ಇಂತಹ ಜಾಹೀರಾತುಗಳಲ್ಲಿ ನಟಿಸುತ್ತಿರುವುದು ಸ್ವಾರ್ಥದ ಪರಮಾವಧಿಯೇ ಸರಿ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಇಂತಹ ಸಮಾಜಘಾತಕ ಆ್ಯಪ್ ಗಳಲ್ಲಿ ನಟಿಸುವ ನಟ, ನಟಿಯರನ್ನು ಚಿತ್ರರಂಗದಿಂದ ಬಹಿಷ್ಕರಿಸಬೇಕು. ಯುವಕರಿಗೆ ದಾರಿ ದೀಪವಾಗಬೇಕಿದ್ದ ಸ್ಟಾರ್ ಗಳು ಯುವಕರ ಪಾಲಿಗೆ ಮಾರಕವಾಗಿ ಪರಿಣಮಿಸಿರುವುದು ನಮ್ಮ ಸಮಾಜದ ದೌರ್ಭಾಗ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಸಾರಾಯಿ ಮತ್ತು ಒಂದಂಕಿ ಲಾಟರಿ ಮಾರಾಟದಿಂದ ಉಂಟಾಗುತ್ತಿದ್ದ ದುಷ್ಪರಿಣಾಮ ವನ್ನು ಅರಿತು ಸರ್ಕಾರ ರಾಜ್ಯದಲ್ಲಿ ಸಾರಾಯಿ ಮತ್ತು ಒಂದಂಕಿ ಲಾಟರಿ ನಿಷೇಧ ಮಾಡಿತ್ತು. ಆದರೆ ಇದೀಗ ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಸರ್ಕಾರ ಹೆಚ್ಚಿನ ತೆರಿಗೆ ಸಂಗ್ರಹದ ಏಕೈಕ ಕಾರಣಕ್ಕಾಗಿ ಬೆಟ್ಟಿಂಗ್ ಆ್ಯಪ್ ದಂಧೆಕೋರರಿಗೆ ಬೆನ್ನೆಲುಬಾಗಿ ನಿಂತಿರುವುದು ನಿಜಕ್ಕೂ ಶೋಚನೀಯ ಸಂಗತಿ, ಸರ್ಕಾರದ ಈ ನಡೆಯನ್ನು ಕ.ರ.ವೇ.ವಿರೋಧಿಸುತ್ತದೆ. ಸರ್ಕಾರಕ್ಕೇನಾದರೂ ರಾಜ್ಯದ ಯುವ ಜನತೆಯ ಬಗ್ಗೆ ನಿಜವಾದ ಕಾಳಜಿಯಿದ್ದರೆ, ಕೂಡಲೇ ಬೆಟ್ಟಿಂಗ್ ಆ್ಯಪ್ ಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ ಅವರು ಬೆಟ್ಟಿಂಗ್ ಆ್ಯಪ್ ಗಳನ್ನು ಸರ್ಕಾರ ಕೂಡಲೇ ನಿಷೇಧಿಸದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ಬೆಟ್ಟಿಂಗ್ ಆ್ಯಪ್ ನಿಷೇಧ ಕುರಿತ ಮನವಿ ಪತ್ರವನ್ನು ತಹಶಿಲ್ದಾರ್ ಕಚೇರಿಯ ಅಧಿಕಾರಿ ಸ್ವೀಕರಿಸಿ, ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ)ಯ ಯಲಹಂಕ ವಿಧಾನ ಸಭಾ ಕ್ಷೇತ್ರದ ಗೌರವಾಧ್ಯಕ್ಷ ಪ್ರಕಾಶ್ ಟಿ., ಯಲಹಂಕ ಕ್ಷೇತ್ರಾಧ್ಯಕ್ಷ ಅಭಿಷೇಕ್, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಮೋಹನ್ ಸೇರಿದಂತೆ ನೂರಾರು ಸಂಖ್ಯೆಯ ಕ.ರ.ವೇ. ಕಾರ್ಯಕರ್ತರಿದ್ದರು.