ಜನಸಾಗರದ ನಡುವೆ ವಿಜೃಂಭಣೆ ನೆರವೇರಿದ ಬೆಟ್ಟಹಲಸೂರು ಶ್ರೀ ಮುತ್ಯಾಲಮ್ಮದೇವಿ ರಥೋತ್ಸವ :

ಬ್ಯಾಟರಾಯನಪುರ : ಕ್ಷೇತ್ರದ ಬೆಟ್ಟಹಲಸೂರು ಗ್ರಾಮದ ಗ್ರಾಮದೇವತೆ ಶ್ರೀ ಮುತ್ಯಾಲಮ್ಮ ದೇವಿ ರಥೋತ್ಸವವು ಜನಸಾಗರದ ನಡುವೆ ಬುಧವಾರ ವಿಜೃಂಭಣೆಯಿಂದ ನೆರವೇರಿತು.

ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಸಂಖ್ಯೆಯ ಭಕ್ತರು ಸುಡು ಬಿಸಿಲನ್ನು ಲೆಕ್ಕಿಸದೆ ಮುತ್ಯಾಲಮ್ಮದೇವಿ ರಥೋತ್ಸವದಲ್ಲಿ ಭಕ್ತಿಪೂರ್ವಕವಾಗಿ ಪಾಲ್ಗೊಂಡು ತಾಯಿಯ ಕೃಪೆಗೆ ಪಾತ್ರರಾದರು.

ಶ್ರೀ ಮುತ್ಯಾಲಮ್ಮ ದೇವಸ್ಥಾನ ಸೇವಾ ಸಮಿತಿ ಮತ್ತು ಗ್ರಾಮಸ್ಥರ ಸಹಯೋಗದೊಂದಿಗೆ ಆಯೋಜಿಸಿದ್ದ ಮುತ್ಯಾಲಮ್ಮ ದೇವಿ ಜಾತ್ರೆ ಮತ್ತು ರಥೋತ್ಸವದ ಅಂಗವಾಗಿ ಸೋಮವಾರ ಬೆಟ್ಟಹಲಸೂರು ಗ್ರಾಮದ ಶಿವ ದೇವಾಲಯಗಳಿಗೆ ಆರತಿ, ಮಂಗಳವಾರ ಬಸವಣ್ಣ(ದನದೇವರು)ದೇವರಿಗೆ ಆರತಿ, ಬುಧವಾರ ಬೆಳಿಗ್ಗೆ ಶ್ರೀ ಮುತ್ಯಾಲಮ್ಮ ದೇವಿಗೆ ಆರತಿ, ವಿಶೇಷ ಪೂಜೆ, ರಥೋತ್ಸವ ಮತ್ತು ಅಗ್ನಿಕುಂಡ ಪ್ರವೇಶ ಸೇರಿದಂತೆ ವಿವಿಧ ದೇವತಾ ಕಾರ್ಯಗಳನ್ನು ನೆರವೇರಿಸಲಾಯಿತು. ರಥೋತ್ಸವದಲ್ಲಿ ಮುತ್ಯಾಲಮ್ಮ ದೇವಿಯ ಸಹೋದರಿ ಪಕ್ಕದ ಗ್ರಾಮ ಸೊಣ್ಣಪ್ಪನಹಳ್ಳಿಯ ಶ್ರೀ ಸತ್ಯಮ್ಮದೇವಿಯನ್ನು ಸಹ ರಥದಲ್ಲಿ ಬೆಟ್ಟಹಲಸೂರು ಗ್ರಾಮಕ್ಕೆ ಆಹ್ವಾನಿಸಿ ಮುತ್ಯಾಲಮ್ಮ ದೇವಿ ರಥೋತ್ಸವದೊಂದಿಗೆ ಸತ್ಯಮ್ಮದೇವಿ ರಥೋತ್ಸವವನ್ನು ಸಹ ನೆರವೇರಿಸಲಾಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಮುತ್ಯಾಲಮ್ಮ ದೇವಿಯ ಸಾವಿರಾರು ಭಕ್ತರು ಶ್ರದ್ಧಾಭಕ್ತಿಯಿಂದ ರಥ ಎಳೆದು, ಬಾಳೆಹಣ್ಣು ದವಣ ತೂರಿ ಭಕ್ತಿಯಿಂದ ತಾಯಿಗೆ ಉಘೇ ಎಂದರು. ಈ ವೇಳೆ ಭಕ್ತರು ಪಾನಕ, ಮಜ್ಜಿಗೆ, ವಿತರಿಸುವ ಮೂಲಕ ಭಕ್ತಾದಿಗಳ ದಣಿವನ್ನು ತಣಿಸಿದರು. ರಥೋತ್ಸವದ ಬಳಿಕ ನಡೆದ ಅಗ್ನಿಕೊಂಡ ಪ್ರವೇಶದಲ್ಲಿ ನೂರಾರು ಭಕ್ತರು ಅಗ್ನಿಕುಂಡ ಹಾಯ್ದರು.

ವಿಜೃಂಭಣೆಯ ಈ ರಥೋತ್ಸವ ಕಾರ್ಯಕ್ರಮದಲ್ಲಿ ಬೆಟ್ಟಹಲಸೂರು ಗ್ರಾ.ಪಂ.ಅಧ್ಯಕ್ಷೆ ಹೇಮಾವತಿ ನಾಗರಾಜ್ ಬಾಬು, ಉಪಾಧ್ಯಕ್ಷ ಬಿ.ಆರ್.ಪ್ರವೀಣ್, ಗ್ರಾ.ಪಂ.ಮಾಜಿ ಅಧ್ಯಕ್ಷರು, ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ಮಂಜುನಾಥಗೌಡ, ತಾ.ಪಂ‌.ಮಾಜಿ ಸದಸ್ಯ ಬಿ.ನಾಗರಾಜ್ ಬಾಬು, ಬೆಟ್ಟಹಲಸೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಂಚಮಿ ಶ್ರೀನಿವಾಸ್, ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಿ.ಜಿ.ನಂಜುಂಡಪ್ಪ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಬಿ.ಎಂ.ನಾಗೇಶ್, ಬಿ.ಎಸ್.ಅನಿಲ್ ಕುಮಾರ್, ಗ್ರಾಮದ ಮುಖಂಡರಾದ ಚಿತ್ರಶೇಖರ್, ಕಂಟ್ರ್ಯಾಕ್ಟರ್ ಉಮೇಶ್, ಶಿವರಾಜ್, ಬಿ.ಎನ್. ಮಂಜುನಾಥ್, ಪ‌್ರಶಾಂತ್, ದೇವನಾಥಗೌಡ, ಶಶಿ ಸೇರಿದಂತೆ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಿದ್ದರು.

Leave a Reply

Your email address will not be published. Required fields are marked *