









ಯಲಹಂಕ : ಯಲಹಂಕದ ವೆಂಕಟಾಲದ ಶ್ರೀ ಅಭಯ ಮಹಾಗಣಪತಿ ದೇವಾಲಯದ 13ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ಎರಡು ದಿನಗಳ ಕಡಲೆಕಾಯಿ ಪರಿಷೆ ಅದ್ಧೂರಿಯಾಗಿ ತೆರೆ ಕಂಡಿತು.
ಬಸವನಗುಡಿ ಕಡಲೆಕಾಯಿ ಪರಿಷೆ ಮಾದರಿಯಲ್ಲೇ ಕಳೆದ 12 ವರ್ಷಗಳಿಂದ ನಡೆಯುತ್ತಾ ಬಂದಿರುವ ಯಲಹಂಕದ ವೆಂಕಟಾಲದ ಕಡಲೇಕಾಯಿ ಪರಿಷೆ ಈ ಬಾರಿ ಅತಿ ಹೆಚ್ಚು ಕಡಲೇಕಾಯಿ ಮಾರಾಟಗಾರರು ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ಮೂಲಕ ವಿಜೃಂಭಣೆಗೆ ಸಾಕ್ಷಿಯಾಯಿತು.
ಪರಿಷೆಯಲ್ಲಿ ಚಿಂತಾಮಣಿ, ಬಾಗೇಪಲ್ಲಿ, ದೊಡ್ಡಬಳ್ಳಾಪುರ, ಹೊಸಕೋಟೆ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಪಾವಗಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಡಲೇಕಾಯಿ ಬೆಳೆಯುವ ರೈತರು ತಾವು ಬೆಳೆದ ವಿವಿಧ ತಳಿಗಳ ಕಡಲೇಕಾಯಿಗಳನ್ನು ತಂದು ಪರಿಷೆಯಲ್ಲಿ ನೇರವಾಗಿ ಮಾರಾಟ ಮಾಡಿದರು. ಕಳೆದ ಬಾರಿಗಿಂತ ದುಫ್ಪಟ್ಟು ಜನ ಕಡಲೇಕಾಯಿ ಮಾರಾಟಗಾರರು ಪಾಲ್ಗೊಂಡಿದ್ದು ಈ ಬಾರಿಯ ವಿಶೇಷತೆಯಾಗಿತ್ತು.
ರೈತರು ಮತ್ತು ಸಾರ್ವಜನಿಕರ ಒತ್ತಾಸೆಯ ಮೇರೆಗೆ ಈ ಬಾರಿಯ ಪರಿಷೆಯನ್ನು ಹೆಚ್ಚು ಮುಕ್ತವಾಗಿ ಮತ್ತು ವಿಜೃಂಭಣೆಯಿಂದ ಆಯೋಜಿಸಲು ನಿರ್ಧರಿಸಲಾಗಿತ್ತು. ಪ್ರತಿ ವರ್ಷದಂತೆ ಪರಿಷೆಯಲ್ಲಿ ಪಾಲ್ಗೊಂಡು, ಕಡಲೇಕಾಯಿ ರಾಶಿ ಹಾಕಿ ವ್ಯಾಪಾರ ಮಾಡುವ ಪ್ರತಿಯೊಬ್ಬ ರೈತರಿಗೆ ಅಭಯ ಮಹಾಗಣಪತಿ ದೇವಾಲಯದ ವತಿಯಿಂದ 500 ರು.ಗಳ ಪ್ರೋತ್ಸಾಹ ಧನದ ಜೊತೆಗೆ ಉಳಿದುಕೊಳ್ಳಲು ಜಾಗ, ಊಟ, ಉಪಚಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಪರಿಷೆಯಲ್ಲಿ ಕಡಲೇಕಾಯಿ ಮಾರಾಟ ಹಣದ ಜೊತೆಗೆ ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳು, ಕೃತಕ ಆಭರಣಗಳು, ಮಕ್ಕಳ ಆಟಿಕೆಗಳು, ಮಣ್ಣಿನಿಂದ ತಯಾರಿಸಿದ ಮಡಿಕೆ, ಕುಡಿಕೆಗಳು, ವಿವಿಧ ರೀತಿಯ ತಿಂಡಿ,ತಿನಿಸುಗಳ ಮಾರಾಟ ಭರ್ಜರಿಯಾಗಿ ನಡೆಯಿತು. ಮಕ್ಕಳು ಮತ್ತು ಪೋಷಕರು ಜಾಯಿಂಟ್ ವ್ಹೀಲ್, ಡ್ಯಾಶಿಂಗ್ ಕಾರ್, ಪುಟಾಣಿ ರೈಲು ಮತ್ತಿತರ ಆಟದ ಸಾಮಗ್ರಿಗಳಲ್ಲಿ ಆಟವಾಡಿ ಮನರಂಜನೆಯ ಅನುಭವ ಪಡೆದುಕೊಂಡರು.
ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಅಭಯ ಮಹಾಗಣಪತಿಗೆ ಸಹಸ್ರ ಮೋದಕ ಹೋಮ, ಆದಿತ್ಯಾದಿ ನವಗ್ರಹ ಹೋಮ, ಗ್ರಾಮ ದೇವತಾ ಹೋಮ, ಮಂಗಳದ್ರವ್ಯ ಸಮೇತ ಕುಂಭಾಭಿಷೇಕ, ರಜತ ಅಲಂಕಾರ, ವಿಷೇಶ ಪೂಜೆ, ದೀಪೋತ್ಸವ, ತೀರ್ಥ ಪ್ರಸಾದ ವಿನಿಯೋಗ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಪರಿಷೆಗೆ ಆಗಮಿಸಿ, ಕಡಲೇಕಾಯಿ ಖಕರೀದಿಸುವುದರ ಜೊತೆಗೆ ರೈತರ ಕುಷಲೋಪರಿ ವಿಚಾರಿಸಿದರು.
ಈ ವೇಳೆ ಮಾತನಾಡಿದ ಶಾಸಕರು ಯಲಹಂಕ ವೆಂಕಟಾಲ ಕಡಲೇಕಾಯಿ ಪರಿಷೆ ವರ್ಷದಿಂದ ವರ್ಷಕ್ಕೆ ವಿಜೃಂಭಣೆಯ ಪರಾಕಾಷ್ಠೆ ತಲುಪುವ ಮೂಲಕ ಯಲಹಂಕದಲ್ಲಿ ಹೊಸದೊಂದು ಮೈಲಿಗಲ್ಲಾಗಿ ಹೊರಹೊಮ್ಮುತ್ತಿರುವುದು ಸಂತೋಷದ ಸಂಗತಿ, ಇಂತಹದೊಂದು ಪರಿಷೆ ಆಯೋಜಿಸಿರುವ ಆತ್ಮೀಯರು, ಬಿಬಿಎಂಪಿ ಮಾಜಿ ಸದಸ್ಯರಾದ ಕೆಂಪೇಗೌಡ ಮತ್ತು ಅವರ ಕುಟುಂಬದ ಪರಿಶ್ರಮ ಪ್ರಶಂಸಾರ್ಹವಾದುದು ಎಂದರು.
ಇದೇ ಸಂದರ್ಭದಲ್ಲಿ ಪರಿಷೆಯ ರುವಾರಿಗಳಾದ ವಿ.ಎಂ.ಕೆಂಪೇಗೌಡ, ಮಾಜಿ ಬಿಬಿಎಂಪಿ ಸದಸ್ಯೆ ಚಂದ್ರಮ್ಮ ಕೆಂಪೇಗೌಡ, ಬಿಜೆಪಿ ಮುಖಂಡರಾದ ವಿ.ಎಂ.ಈಶ್ವರ್, ವಿ.ಎಂ.ಚಂದ್ರಯ್ಯ ಸೇರಿದಂತೆ ಹಲವು ಗಣ್ಯರಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthau kogilu layout
Yelahanka Bangalore Karnataka
9845085793. 8050671579
7349337989
