ಬೆಂಗಳೂರು

ಬೆಂಗಳೂರಿನ ರಾಜಾಜಿನಗರದ ಪ್ರತಿಷ್ಠಿತ ವೆಂಕಟ್, ಸೇಂಟ್ ಆನ್ಸ್ ಹಾಗೂ ವೀನಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಟಿ. ಬಾಲಕೃಷ್ಣ ಅವರ ಜನ್ಮದಿನವನ್ನು ‘ಸಂಸ್ಥಾಪಕ ದಿನ’ ವನ್ನಾಗಿ ಆಚರಿಸಲಾಯಿತು.
ಅಭಿನಂದನೆಯನ್ನು ಸ್ವೀಕರಿಸಿದ ಶ್ರೀ ಟಿ ಬಾಲಕೃಷ್ಣ ಅವರು ಮಾತನಾಡುತ್ತಾ, ವಿಶ್ವದ ಎಲ್ಲೆಡೆ ಅಧಿಕ ಮಳೆಯಿಂದ ಜನರು ತತ್ತರಿಸಿ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ ನಾವು ಆಡಂಬರದ ಬದಲು ಮಾನವೀಯತೆಯನ್ನು ತೋರಬೇಕು.
ಆದರೂ ನಮ್ಮ ಸಂಸ್ಥೆಗಳ ಅಧ್ಯಾಪಕ ವೃಂದ ಹಾಗೂ ಕಚೇರಿ ಸಿಬ್ಬಂದಿಯವರು ಪ್ರೀತಿ ಅಭಿಮಾನದಿಂದ ಆಯೋಜಿಸಿರುವ ಈ ಸರಳ ಸಮಾರಂಭದಲ್ಲಿ ಭಾಗವಹಿಸಿದ್ದೇನೆ ಎಂದರು.

ಬೇರೆ ಉದ್ಯಮ ಸ್ಥಾಪಿಸುವ ಬದಲು ಸಮಾಜಕ್ಕೆ ಏನಾದರೂ ನೀಡಲು ತಾವು ಶಿಕ್ಷಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡೆನು. ಪರಿಣಾಮ ತಾವು ನಿರೀಕ್ಷಿಸದ ರೀತಿಯಲ್ಲಿ , ನಾಲ್ಕು ದಶಕಗಳ ಹಿಂದೆ ತಾವು ಸ್ಥಾಪಿಸಿದ್ದ ಶಿಕ್ಷಣ ಸಂಸ್ಥೆ ಇಂದು ಪ್ರತಿಷ್ಠಿತ ಸಂಸ್ಥೆಗಳಾಗಿ ಬೆಳೆದಿವೆ. ಇದರ ಹಿಂದೆ ನಿರಂತರ ಕಠಿಣ ಪರಿಶ್ರಮ, ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗಿದ್ದು, ಶಿಕ್ಷಕ ಸಮೂಹದ ಸಾರ್ಥಕ ಸೇವೆ, ಜೊತೆಗೆ ಪೋಷಕರ ಬೆಂಬಲ, ಹಿತೈಷಿಗಳ ಸಹಕಾರದಿಂದ ಇವೆಲ್ಲವೂ ಸಾಧ್ಯವಾಗಿದೆ. ಗುಣಮಟ್ಟದ ಶಿಕ್ಷಣ, ಅತ್ಯುತ್ತಮ ಫಲಿತಾಂಶ. ಸಮಾಜಕ್ಕೆ, ದೇಶಕ್ಕೆ ಉತ್ತಮ ನಾಗರಿಕರನ್ನು ನೀಡಿದ ಹೆಗ್ಗಳಿಕೆ ನಮ್ಮದಾಗಿದೆ. ನಮ್ಮ ವಿದ್ಯಾರ್ಥಿಗಳು ಇಂದು ಭಾರತವಷ್ಟೇ ಅಲ್ಲದೆ ವಿಶ್ವದೆಲ್ಲೆಡೆ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಭಾರತೀಯ ನಾಗರಿಕ ಸೇವೆ ಮೊದಲಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಅಭಿವೃದ್ಧಿಯೊಂದಿಗೆ ದೇಶಪ್ರೇಮ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಉಪಾಧ್ಯಕ್ಷರಾದ ಬಿ ವೆಂಕಟೇಶ್, ಕಾರ್ಯಕಾರಿ ನಿರ್ದೇಶಕರಾದ ಬಿ ಶೇಖರ್
ವೆಂಕಟ್ ಶಾಲೆಯ ಪ್ರಾಂಶುಪಾಲರಾದ ಡಾ ಸುಲೋಚನಾ ಬಾಲಕೃಷ್ಣ, ಉಪ ಪ್ರಾಂಶುಪಾಲರಾದ ಅಲಂಕೃತ ವೆಂಕಟೇಶ್, ಸುಭಿಕ್ಷ ಶೇಖರ್, ಶಾಲಾ ಮುಖ್ಯಸ್ಥರುಗಳು ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು, ಪೋಷಕರು, ಸಮುದಾಯದ ಅಭಿಮಾನಿಗಳು ಬಾಲಕೃಷ್ಣ ಅವರನ್ನು ಸನ್ಮಾನಿಸಿ, ಈ ಆತ್ಮೀಯ ಸರಳ ಸಮಾರಂಭಕ್ಕೆ ಸಾಕ್ಷಿಯಾದರು.

ವಂದನೆಗಳೊಂದಿಗೆ, ತಮ್ಮ ವಿಶ್ವಾಸಿ
ಮುರಳೀಧರ ಕುಲಕರ್ಣಿ
ಕಲಾ ಶಿಕ್ಷಕರು, ಸೇಂಟ್ ಆನ್ಸ್ ಶಾಲೆ

Leave a Reply

Your email address will not be published. Required fields are marked *