ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ಐದು ದಿನಗಳ ಜಾನಪದ ಕಲಾ ಸ್ಪರ್ಧೆ :
ಯಲಹಂಕ : ‘ಸುವರ್ಣ ಕರ್ನಾಟಕ ಸಂಭ್ರಮ ಲಕ್ಷ ದೀಪೋತ್ಸವ’ದ ಪ್ರಯುಕ್ತ ಯಲಹಂಕದ ‘ಲಕ್ಷ ದೀಪೋತ್ಸವ ಸಮಿತಿ’ ಮತ್ತು ‘ಸ್ನೇಹಿತರ ಕೂಟ’ ಇವರ ಸಹಯೋಗದೊಂದಿಗೆ ಅಗಲಿದ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಸ್ಮರಣಾರ್ಥವಾಗಿ ಐದು ದಿನಗಳ ಜಾನಪದ ಕಲಾ ಸ್ಪರ್ಧೆ ಏರ್ಪಡಿಸಲಾಗಿದ್ದು, ನ.21ರ ಗುರುವಾರದಿಂದ ಕೋಲಾಟ, ಭಜನೆ, ರಂಗೋಲಿ, ಬಾಲಗೋಪಾಲ ವೇಷ ಭೂಷಣ ಸೇರಿದಂತೆ ವಿವಿಧ ಜಾನಪದ ಕಲೆಗಳ ಸ್ಪರ್ಧೆ ನಡೆಯಲಿದೆ ಎಂದು  ‘ಲಕ್ಷ ದೀಪೋತ್ಸವ ಸಮಿತಿ’ ಅಧ್ಯಕ್ಷ, ಮಾಜಿ ಬಿಬಿಎಂಪಿ ಸದಸ್ಯ ವೈ.ಎನ್.ಅಶ್ವಥ್ ತಿಳಿಸಿದರು.
‘ಸುವರ್ಣ ಕರ್ನಾಟಕ ಸಂಭ್ರಮ ಲಕ್ಷ ದೀಪೋತ್ಸವ’ದ ಹಿನ್ನೆಲೆಯಲ್ಲಿ ಬುಧವಾರ ಯಲಹಂಕದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ‘ನ.21ರಂದು ಕೋಲಾಟ ಸ್ಪರ್ಧೆ, ನ.22 ಮತ್ತು 23ರಂದು ಭಜನಾ ಸ್ಪರ್ಧೆ, ನ.24ರಂದು ರಂಗೋಲಿ ಸ್ಪರ್ಧೆ ಮತ್ತು ಬಾಲಗೋಪಾಲ ವೇಷ ಭೂಷಣ ಸ್ಪರ್ಧೆ ಜರುಗಲಿದ್ದು, ಪ್ರತಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ, ತೃತೀಯ ಸೇರಿದಂತೆ ಐದನೇ ಸ್ಥಾನ ವಿಜೇತರವರೆಗೂ ತಾವು ಗಳಿಸಿದ ಸ್ಥಾನಕ್ಕೆ ಅನುಗುಣವಾಗಿ 15 ಸಾವಿರದಿಂದ ಮೊದಲ್ಗೊಂಡು 1 ಸಾವಿರದವರೆಗೆ ಹಲವು ಹಂತಗಳ ನಗದು ಬಹುಮಾನ ನೀಡಲಾಗುತ್ತದೆ. ನಗದು ಬಹುಮಾನದ ಮೊತ್ತವೇ 1 ಲಕ್ಷದವರೆಗೆ ಇರಲಿದೆ.
ನ.24ರ ಸಂಜೆ 5 ಗಂಟೆಗೆ ಯಲಹಂಕದ ಬಿಬಿಎಂಪಿ ಕಚೇರಿ ಮುಂಭಾಗದಲ್ಲಿ ಬಹುಮಾನ ವಿತರಣೆ ಸಮಾರಂಭ ಏರ್ಪಡಿಸಲಾಗಿದ್ದು, ಅಂದು ಜಾನಪದ ಕಲಾ ಸ್ಪರ್ಧೆಗಳಲ್ಲಿ ವಿಜೇತರಾದ ಕಲಾವಿದವರಿಗೆ ನಗದು ಬಹುಮಾನ ವಿತರಣೆಯ ಜೊತೆಗೆ ಯಲಹಂಕ ಬಿಬಿಎಂಪಿ ವ್ಯಾಪ್ತಿಯಲ್ಲಿ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪುರಸಭೆ ಮತ್ತು ನಗರಸಭೆ ಮಾಜಿ ಅಧ್ಯಕ್ಷರುಗಳ ಹೆಸರಿನಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.
ನ.25ರಂದು ಸಂಜೆ 6.30ಕ್ಕೆ ಯಲಹಂಕದ ಇತಿಹಾಸ ಪ್ರಸಿದ್ಧ ಶ್ರೀ.ವಿಶ್ವನಾಥೇಶ್ವರಸ್ವಾಮಿ ಮತ್ತು ಶ್ರೀ.ವೇಣುಗೋಪಾಲಸ್ವಾಮಿ ಸೇರಿದಂತೆ ಯಲಹಂಕದ ನವದೇವತೆಗಳಿಗೆ ಲಕ್ಷ ದೀಪೋತ್ಸವ ಏರ್ಪಡಿಸಲಾಗಿದೆ. ಈ ಬಾರಿಯ ಲಕ್ಷ ದೀಪೋತ್ಸವವನ್ನು ‘ಸುವರ್ಣ ಕರ್ನಾಟಕ ಸಂಭ್ರಮ ಕನ್ನಡ ಲಕ್ಷ ದೀಪೋತ್ಸವ’ ಎಂಬ ಶೀರ್ಷಿಕೆಯ ಅಡಿಯಲ್ಲಿ ನೆರವೇರಿಸಲಾಗುತ್ತಿದ್ದು, ಯಲಹಂಕದ ಅಧಿದೇವತೆಗಳ ಜೊತೆಗೆ ಕನ್ನಡಾಂಬೆಗೂ ಸಹ ಲಕ್ಷ ದೀಪೋತ್ಸವ ನೆರವೇರಿಸಲಾಗು ವುದು. ಈ ಎಲ್ಲಾ ಕಾರ್ಯಕ್ರಮ ಗಳಲ್ಲಿ ಯಲಹಂಕದ ವಿವಿಧ ದೇವಾಲಯಗಳ ಆಡಳಿತ ಮತ್ತು ಭಕ್ತ ಮಂಡಳಿಗಳು ಸಹಯೋಗ ವಹಿಸಲಿವೆ ಎಂದು ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ರಂಗಬ್ರಹ್ಮ ಡಾ.ಎಸ್.ಎಲ್.ಎನ್.ಸ್ವಾಮಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *