



ಸಚಿವ ಕೃಷ್ಣಬೈರೇಗೌಡರಿಂದ ಕೆಂಪಾಪುರದಲ್ಲಿ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಕೆಂಪಾಪುರದಲ್ಲಿ ನೂತನವಾಗಿ ನಿರ್ಮಾಣಗೊಂಡಿದ್ದ ಒಳಾಂಗಣ ಕ್ರೀಡಾಂಗಣವನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಶನಿವಾರ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ ‘ಕಳೆದ ಹಲವು ವರ್ಷಗಳಿಂದ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದ ಒಳಾಂಗಣ ಕ್ರೀಡಾಂಗಣ ಇಂದು ಸಾರ್ವಜನಿಕ ಸೇವೆಗೆ ಲೋಕಾರ್ಪಣೆ ಮಾಡಲಾಗಿದೆ. ಈ ಕ್ರೀಡಾಂಗಣ ಅತ್ಯಂತ ಸುಸಜ್ಜಿತವಾದ ಕ್ರೀಡಾಂಗಣ ವಾಗಿದ್ದು, ಇದರಲ್ಲಿ ತಾಪಮಾನ ನಿಯಂತ್ರಿತ ಈಜುಕೊಳ, 5 ಬ್ಯಾಡ್ಮಿಂಟನ್ ಅಂಕಣಗಳು, ಟೇಕ್ವಾಂಡೋ ತರಬೇತಿ ಅಂಗಳ, ಯೋಗ, ಜಿಮ್, ಟೇಬಲ್ ಟೆನ್ನಿಸ್ ಕ್ರೀಡೆಗಳಿಗೆ ಪ್ರತ್ಯೇಕ ಅಂಕಣಗಳಿವೆ. ಬೇಸಿಗೆಕಾಲ, ಮಳೆಗಾಲ, ಚಳಿಗಾಲ ಸೇರಿದಂತೆ ಯಾವುದೇ ಕಾಲಮಾನದಲ್ಲೂ ಕ್ರೀಡಾಸಕ್ತರು ಇಲ್ಲಿ ಕ್ರೀಡೆಗಳನ್ನು ಆಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ನಾಗರೀಕರು ಉತ್ತಮ ಆರೋಗ್ಯ ಹೊಂದಲು ಕ್ರೀಡೆಗಳು ಅತ್ಯವಶ್ಯಕವಾಗಿದ್ದು, ಕೇವಲ ಕ್ರೀಡಾ ಪ್ರೋತ್ಸಾಹ ನೀಡಿದರೆ ಸಾಲದು, ಅದಕ್ಕೆ ಅಗತ್ಯವಿರುವ ಕ್ರೀಡಾಂಗಣ ನಿರ್ಮಿಸಿ ಕೊಡಬೇಕು. ಈ ದಿಸೆಯಲ್ಲಿ ಇಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ.
ಬ್ಯಾಟರಾಯನಪುರ ಕ್ಷೇತ್ರದಲ್ಲಿ ನಿರ್ಮಾಣಗೊಂಡಿರುವ ನಾಲ್ಕನೆಯ ಒಳಾಂಗಣ ಕ್ರೀಡಾಂಗಣ ಇದಾಗಿದ್ದು, ವಿದ್ಯಾರಣ್ಯಪುರ, ಸಹಕಾರನಗರ, ನವರತ್ನ ಅಗ್ರಹಾರದಲ್ಲಿ ಈಗಾಗಲೇ ಒಳಾಂಗಣ ಕ್ರೀಡಾಂಗಣ ನಿರ್ಮಿಸಿ ಲೋಕಾರ್ಪಣೆ ಮಾಡಿದ್ದು, ಕ್ರೀಡಾಸಕ್ತರು ಅವುಗಳ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ, ಕೆಂಪಾಪುರದಲ್ಲಿ ಲೋಕಾರ್ಪಣೆ ಗೊಂಡಿರುವ ಈ ಒಳಾಂಗಣ ಕ್ರೀಡಾಂಗಣದ ಸದುಪಯೋಗ ವನ್ನು ಈ ಭಾಗದ ಜನತೆ ಪಡೆದು ಕೊಳ್ಳುವಂತಾಗಲಿ ಎಂದರು.
ಸಮಾಜ ಸೇವಕರಾದ ಶ್ರೀಮತಿ ಮೀನಾಕ್ಷಿ ಕೃಷ್ಣಬೈರೇಗೌಡ ಮಾತನಾಡಿ ‘ಕೆಂಪಾಪುರದಲ್ಲಿನ ಈ ಒಳಾಂಗಣ ಕ್ರೀಡಾಂಗಣ ಉದ್ಘಾಟನೆಯ ಜೊತೆಗೆ ಅಂತರ ಅಪಾರ್ಟ್ಮೆಂಟ್ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ಇದರಲ್ಲಿ ಕೆಂಪಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಸುಮಾರು 2 ಸಾವಿರಕ್ಕೂ ಹೆಚ್ಚು ಅಪಾರ್ಟ್ಮೆಂಟ್ ಗಳ ನಿವಾಸಿಗಳು ಪಾಲ್ಗೊಳ್ಳಲಿದ್ದಾರೆ. ಇದೊಂದು ಬೃಹತ್ ಕ್ರೀಡಾಕೂಟವಾಗಿದ್ದು ಇದರಲ್ಲಿ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಸೇರಿದಂತೆ 8 ಕ್ರೀಡೆಗಳನ್ನು ಆಯೋಜಿಸಲಾಗಿದೆ. ಸಹಸ್ರಾರು ಜನ ನಾಗರೀಕರು ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕುವೆಂಪುನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಎನ್.ಶ್ರೀನಿವಾಸಯ್ಯ, ಮಾಜಿ ಗ್ರಾ.ಪಂ.ಅಧ್ಯಕ್ಷ ಕಾಣಿಕ್ ರಾಜ್, ಕೆಂಪಾಪುರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಟಿ.ರಮೇಶ್, ಕಾಂಗ್ರೆಸ್ ಮುಖಂಡರಾದ ಗೋವಿಂದೇಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೋಪಮ್ಮ, ಎನ್.ಎಸ್.ಯು.ಐ.ಅಧ್ಯಕ್ಷ ರಾಹುಲ್ ಗೌಡ, ತಿಮ್ಮರಾಜು, ಅಭಿಷೇಕ್, ವಿನೋದ್, ಸೊಣ್ಣೇಗೌಡ, ಜೇಮ್ಸ್, ನವಾಜ್, ರವಿ, ಕೇಶವ, ಬಾಲು, ಪುರುಷೋತ್ತಮ, ದಿನೇಶ್, ಅನಿಲ್, ಪುಟ್ಟೇಗೌಡ, ರವಿ, ಶೈಲ, ಸುನಂದಮ್ಮ ಸೇರಿದಂತೆ ಇನ್ನಿತರರಿದ್ದರು.