ಕನ್ನಡದ ಅಳಿವು-ಉಳಿವು ಕನ್ನಡಿಗರಾದ ನಮ್ಮ ಕೈಯಲ್ಲೇ ಇದೆ : ನ್ಯಾ.ಸಂತೋಷ್ ಹೆಗ್ಡೆ

ಬ್ಯಾಟರಾಯನಪುರ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ :

ಬ್ಯಾಟರಾಯನಪುರ : ಕನ್ನಡದ ಅಳಿವು-ಉಳಿವು ಕನ್ನಡಿಗರಾದ ನಮ್ಮ ಕೈಯಲ್ಲೇ ಇದೆ, ನಿತ್ಯ ಬದುಕಿನಲ್ಲಿ ಹೆಚ್ಚಿನ ಕನ್ನಡ ಬಳಕೆಯ ಮೂಲಕ ಕನ್ನಡವನ್ನು ಉಳಿಸಬಹುದು, ಬೆಳೆಸಬಹುದು ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕ್ಷೇತ್ರದ ಕಾಫಿಬೋರ್ಡ್ ಬಡಾವಣೆಯಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ 69ನೇ ಕನ್ನಡ ರಾಜ್ಯೋತ್ಸವದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಮಾತನಾಡಿದ ಅವರು ‘ಸಮಾಜದ ಏಳಿಗೆಗಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ, ಬ್ಯಾಟರಾಯನಪುರ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ ಈ ಕಾರ್ಯವನ್ನು ಶ್ರದ್ಧೆಯಿಂದ ಮಾಡಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ದಶಕಗಳ ಹಿಂದೆ ಸತ್ಯವಂತರು ಮತ್ತು ಪ್ರಾಮಾಣಿಕರಿಗೆ ಗೌರವವಿತ್ತು, ಆದರೆ ಇದೀಗ ಕಾಲ ಸಂಪೂರ್ಣ ವಿಲೋಮವಾಗಿದೆ, ಸತ್ಯವಂತರು, ಪ್ರಾಮಾಣಿಕರನ್ನು ಹುಚ್ಚರು, ಬದುಕಿನ ಮಾರ್ಗ ತಿಳಿಯದವರು ಎನ್ನುವಂಥ ಕಾಲ ಬಂದಿದೆ, ಇದು ತೀವ್ರ ಕಳವಳಕಾರಿ ಬೆಳವಣಿಗೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರೇಣುಕ ಹೆಗ್ಗಡೆ ಮಾತನಾಡಿ ‘ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕ್ಷೇತ್ರದ ಸಾರ್ವಜನಿಕರು ಮತ್ತು ವಿವಿಧ ಕನ್ನಡ ಪರ ಸಂಘಟನಗಳ ಒಡಗೂಡಿ ಅತ್ಯಂತ ವಿಜೃಂಭಣೆಯಿಂದ 69ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ರಾಜ್ಯೋತ್ಸವದ ಪ್ರಯುಕ್ತ ಬೆಳಿಗ್ಗೆ ಬೃಹತ್ ಬೈಕ್ ರ್ಯಾಲಿ ನಡೆಸಿ, ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಯ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯ ಮಾಡಲಾಗಿದೆ. ಬ್ಯಾಟರಾಯನಪುರ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ ಅತ್ಯಂತ ಕ್ರಿಯಾಶೀಲ ರೀತಿಯಲ್ಲಿ ಕನ್ನಡದ ಕೆಲಸವನ್ನು ಮಾಡುತ್ತಿದ್ದು, ಇದರ ದ್ಯೋತಕವಾಗಿ ಕ್ಷೇತ್ರದ ಕಾಫಿ ಬೋರ್ಡ್ ಬಡಾವಣೆಯಲ್ಲಿ ‘ಕನ್ನಡ ಭವನ’ ನಿರ್ಮಿಸಲಾಗಿದೆ. ಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ಪದಾಧಿಕಾರಿಗಳು, ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸ್ಥಳೀಯ ಸಾರ್ವಜನಿಕರು ಒಗ್ಗೂಡಿ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಎತ್ತಿ ಹಿಡಿಯುವಂತಹ ಹಲವು ಕಾರ್ಯಕ್ರಮಗಳನ್ನು ಕಳೆದ ಹಲವು ವರ್ಷಗಳಿಂದ ಆಯೋಜಿಸುತ್ತಾ ಬರಲಾಗುತ್ತಿದೆ. ಮುಂದೆಯೂ ಸಹ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕ್ಷೇತ್ರದಲ್ಲಿ ಇಂತಹ ವಿನೂತನ ಕಾರ್ಯಕ್ರಮಗಳನ್ನು ನಿರೀಕ್ಷಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಅಡ್ವಕೇಟ್ ಜನರಲ್ ಪ್ರೊ.ರವಿವರ್ಮ, ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್, ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪ್ರಕಾಶ್ ಮೂರ್ತಿ, ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ)ಯ ರಾಜ್ಯ ಉಪಾಧ್ಯಕ್ಷರಾದ ದಾ.ಕೃ.ದೇವರಾಜ್, ದಾ.ಪಿ.ಆಂಜಿನಪ್ಪ, ಗೋವಿಂದೇಗೌಡ ಸೇರಿದಂತೆ ಇನ್ನಿತರರ ಗಣ್ಯರಿದ್ದರು.

Leave a Reply

Your email address will not be published. Required fields are marked *