




ಪೀಪಲ್ ಟ್ರಸ್ಟ್ ಆವರಣದಲ್ಲಿ ಬೃಹತ್ ವಿಜ್ಞಾನ ಮೇಳ :
ಯಲಹಂಕ : ಅಗಸ್ತ್ಯ ಫೌಂಡೇಶನ್, ಸಾಯಿ ಶಂಕರ ವಿದ್ಯಾಲಯ, ಪೀಪಲ್ ಟ್ರಸ್ಟ್, ರೋಟರಿ ಯಲಹಂಕ, ಜೆ.ಎನ್. ಪ್ಲಾನಿಟೋರಿಯಮ್ ಮತ್ತು ಗ್ರೀನ್ ಸರ್ಕಲ್ ಇವರ ಸಹಯೋಗ ದೊಂದಿಗೆ ಯಲಹಂಕ ಕ್ಷೇತ್ರದ ಶ್ರೀರಾಮನಹಳ್ಳಿಯ ಪೀಪಲ್ ಟ್ರಸ್ಟ್ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ಬೃಹತ್ ಮೇಳದಲ್ಲಿ ನಗರದ 25ಕ್ಕೂ ಹೆಚ್ಚು ಪ್ರತಿಷ್ಠಿತ ಶಾಲೆಗಳ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ತಾವು ತಯಾರಿಸಿಕೊಂಡು ತರಲಾಗಿದ್ದ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು.
ವಿಜ್ಞಾನ ಮೇಳದಲ್ಲಿ ಬಾಹ್ಯಾಕಾಶ ವಿಜ್ಞಾನ, ಖಗೋಳಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ, ಪರಿಸರ ವಿಜ್ಞಾನ, ತ್ಯಾಜ್ಯ ನೀರಿನ ಸಂಸ್ಕರಣೆ ಮತ್ತು ಮರುಬಳಕೆ ಸೇರಿದಂತೆ ವಿವಿಧ ವಿಷಯಗಳ ಮಾದರಿಗಳು ಗಮನ ಸೆಳೆದವು.
ವಿಜ್ಞಾನಮೇಳದಲ್ಲಿ ನಗರದ ಹಲವು ಪ್ರತಿಷ್ಠಿತ ಶಾಲೆಗಳ ವಿಜ್ಞಾನ ಶಿಕ್ಷಕರು, ಉಪನ್ಯಾಸಕರು, ಪರಿಸರವಾದಿಗಳು ಪಾಲ್ಗೊಂಡು ವಿಜ್ಞಾನದ ಮಾದರಿಗಳನ್ನು ವೀಕ್ಷಿಸಿದರು.
ವಿಜ್ಞಾನ ಮೇಳ ಕುರಿತು ಪೀಪಲ್ ಟ್ರಸ್ಟ್ ನ ಟ್ರಸ್ಟಿ ಏರ್ ಮಾರ್ಷಲ್ ಚಂಗಪ್ಪ ಮಾತನಾಡಿ ‘ವಿಜ್ಞಾನ ಶಿಕ್ಷಣ ಮತ್ತು ವೈಜ್ಞಾನಿಕ ಸಂಶೋಧನೆಯಂಥ ವಿಷಯಗಳು ಕೇವಲ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ, ಗ್ರಾಮೀಣ ಪ್ರದೇಶಕ್ಕೂ ವಿಸ್ತರಣೆಯಾಗಬೇಕು ಎಂಬುದು ಪೀಪಲ್ ಟ್ರಸ್ಟ್ ನ ಸ್ಥಾಪಕ ರುವಾರಿ ಧರ್ಮದರ್ಶಿ ನಾಣಯ್ಯ ಅವರ ದೂರದೃಷ್ಟಿಯಾಗಿತ್ತು, ಈ ದಿಸೆಯಲ್ಲಿ ಅವರು 25. ವರ್ಷಗಳ ಹಿಂದೆಯೇ ಪೀಪಲ್ ಟ್ರಸ್ಟ್ ಆವರಣದಲ್ಲಿ, ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಮೇಳವನ್ನು ಆಯೋಜಿಸುತ್ತಾ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಸ್ಪೂರ್ತಿ ತುಂಬುವ ಮಹತ್ವದ ಕೆಲಸ ಮಾಡಿದ್ದರು. ನಾಣಯ್ಯನವರ ಈ ದೂರದೃಷ್ಟಿ ಯನ್ನು ನಾವು ಮುಂದಕ್ಕೆ ತೆಗೆದುಕೊಂಡು ಹೋಗುವ ಕೆಲಸವನ್ನು ಮುಂದುವರೆಸಿದ್ದೇವೆ, ವಿಜ್ಞಾನ ಮೇಳದಲ್ಲಿ ಸಾಯಿಶಂಕರ ವಿದ್ಯಾಲಯ ಸೇರಿದಂತೆ ನಗರದ 25ಕ್ಕೂ ಹೆಚ್ಷು ಪ್ರತಿಷ್ಠಿತ ಶಾಲೆಗಳ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಬೋಧಕರು ಪಾಲ್ಗೊಳ್ಳುವ ಮೂಲಕ ಮೇಳವನ್ನು ಯಶಸ್ವೀ ಗೊಳಿಸಿರುವುದು ಸಂತೋಷ ಉಂಟು ಮಾಡಿದ್ದು, ನಮ್ಮ ಸ್ಪೂರ್ತಿಯನ್ನು ಇಮ್ಮಡಿಗೊಳಿಸಿದೆ ಎಂದರು.
ವಿಜ್ಞಾನ ಮೇಳದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಾಜಾರಾಮ್, ಅಗಸ್ತ್ಯ ಫೌಂಡೇಶನ್ ನ ನಿರ್ದೇಶಕ ಜಿ.ಹರಿಹರನ್, ಪೀಪಲ್ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ಹರೀಶ್ ಉತ್ತಯ್ಯ, ಟ್ರಸ್ಟಿ ಆರ್.ಕೆ.ಧಾಮ್, ರೋಟರಿ ಸಂಸ್ಥೆಯ ಯಲಹಂಕ ವಿಭಾಗದ ರೋಟೆರಿಯನ್ ಡಾ.ರಾಧಾಕೃಷ್ಣ ಸೇರಿದಂತೆ ಇನ್ನಿತರರಿದ್ದರು.