‘ಪವರ್ ಗ್ರಿಡ್’ ಸಂಸ್ಥೆಯ ಅಂತರ್ ಪ್ರಾಂತೀಯ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ :

ಬ್ಯಾಟರಾಯನಪುರ : ಭಾರತ ಸರ್ಕಾರದ ವಿದ್ಯುತ್ ಸಚಿವಾಲಯದ ಅಂಗಸಂಸ್ಥೆ ಯಾಗಿರುವ ‘ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ’ದ ದಕ್ಷಿಣ ಪ್ರಾಂತ್ಯ-2ರ ವತಿಯಿಂದ ಬ್ಯಾಟರಾಯನಪುರ ಕ್ಷೇತ್ರದ ಬೆಟ್ಟಹಲಸೂರು ಸಮೀಪವಿರುವ ‘ಪಡುಕೋಣೆ-ದ್ರಾವಿಡ್ ಕ್ರೀಡಾತರಬೇತಿ ಕೇಂದ್ರ’ದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ಅಂತರ್ ಪ್ರಾಂತೀಯ ಫುಟ್ಬಾಲ್ ಪಂದ್ಯಾವಳಿಯನ್ನು ಪವರ್ ಗ್ರಿಡ್ ಸಂಸ್ಥೆಯ ಹಣಕಾಸು ವಿಭಾಗದ ನಿರ್ದೇಶಕಜಿ.ರವಿಶಂಕರ್ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು ‘ಅಂತರ್ ಪ್ರಾಂತೀಯ ಫುಟ್ಬಾಲ್ ಪಂದ್ಯಾವಳಿ ಉದ್ಘಾಟಿಸಿರುವುದು ಸಂತೋಷ ಉಂಟು ಮಾಡಿದೆ. ಪವರ್ ಗ್ರಿಡ್ ಸಂಸ್ಥೆಯ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಕೇಂದ್ರ ಪ್ರಾಂತ್ಯದ ಒಟ್ಟು 9 ಪ್ರಾಂತ್ಯಗಳ ಸಿಬ್ಬಂದಿಗಳಿಗಾಗಿ ಅಂತರ್ ಪ್ರಾಂತೀಯ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಿದ್ದು, ದೇಶದ ವಿವಿಧ ಭಾಗಗಳಿಂದ ಬಂದಿರುವ ಪವರ್ ಗ್ರಿಡ್ ಸಂಸ್ಥೆಯ ಸಿಬ್ಬಂದಿಗಳು ಒಂದೆಡೆ ಕಲೆತಿರುವುದೇ ಒಂದು ಸುಯೋಗ ಎನ್ನಬಹುದು. ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಸಮತೋಲನ‌ ಕಾಯ್ದುಕೊಳ್ಳಲು ಅತ್ಯುತ್ತಮ ಸಾಧನಗಳಾಗಿದ್ದು, ಕ್ರೀಡೆಗಳಿಂದ ದೈಹಿಕ, ಮಾನಸಿಕ ಆರೋಗ್ಯದ ಜೊತೆಗೆ ಸ್ಪರ್ಧಾ ಮನೋಭಾವ ಬೆಳೆಯುತ್ತದೆ. ಪವರ್ ಗ್ರಿಡ್ ನ ಅಂತರ್ ಪ್ರಾಂತೀಯ ಈ ಫುಟ್ಬಾಲ್ ಪಂದ್ಯಾವಳಿಯನ್ನು ಐಪಿಎಲ್ ನಂತೆಯೇ ಪಿಪಿಎಲ್ ಎಂದೇ ಕರೆಯಲಿಚ್ಛಿಸುತ್ತೇನೆ. ಸಂಸ್ಥೆಯ ವತಿಯಿಂದ ಮುಂದಿನ ದಿನಗಳಲ್ಲಿ ಪ್ರತಿವರ್ಷ ಇದೇ ರೀತಿಯ ಬೃಹತ್ ಮಟ್ಟದ ಪಂದ್ಯಾವಳಿ ಆಯೋಜಿಸಲಾಗು ವುದು ಎಂದರು.

ಫುಟ್ಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಪವರ್ ಗ್ರಿಡ್ ದಕ್ಷಿಣ ಪ್ರಾಂತ್ಯ-2ರ ಕಾರ್ಯನಿರ್ವಾಹಕ ನಿರ್ದೇಶಕ ಟಿ.ಆರ್.ಕೃಷ್ಣಕುಮಾರ್, ಖ್ಯಾತ ಫುಟ್ಬಾಲ್ ಆಟಗಾರ ಸತೀಶ್ ಸೇರಿದಂತೆ ವಿವಿಧ ಪ್ರಾಂತ್ಯಗಳ ಮುಖ್ಯಸ್ಥರು‌ ಮತ್ತು ಸಿಬ್ಬಂದಿಗಳಿದ್ದರು.

Leave a Reply

Your email address will not be published. Required fields are marked *