


ಕನ್ನಡಿಗರ ಹೃದಯ ವೈಶಾಲ್ಯತೆ ರಾಜ್ಯದಲ್ಲಿರುವ ಅನ್ಯಭಾಷಿಕರಲ್ಲೂ ಮೂಡಲಿ : ಹೃದಯಶಿವ
ರಾಷ್ಟ್ರೀಯ ಪಶುರೋಗ ಸೋಂಕುಶಾಸ್ತ್ರ, ಮಾಹಿತಿ ವಿಜ್ಞಾನ ಸಂಸ್ಥೆಯಲ್ಲಿ 69 ಕನ್ನಡ ರಾಜ್ಯೋತ್ಸವ :
ಯಲಹಂಕ : ಕನ್ನಡಿಗರದ್ದು ಎಲ್ಲರನ್ನೂ ತಬ್ಬಿಕೊಳ್ಳುವ,ಅನ್ಯ ಭಾಷಿಕರನ್ನು ಸಹ ಅವರ ಭಾಷೆಯಲ್ಲೇ ಮಾತನಾಡಿಸುವ ಹೃದಯ ವೈಶಾಲ್ಯತೆ, ಕನ್ನಡಿಗರ ಈ ಹೃದಯ ವೈಶಾಲ್ಯತೆಯನ್ನು ರಾಜ್ಯದಲ್ಲಿ ನೆಲೆಸಿರುವ ಅನ್ಯಭಾಷಿಕರು ಕನ್ನಡಿಗರೊಡನೆ ಕನ್ನಡದಲ್ಲೇ ಮಾತನಾಡುವ ಪ್ರಯತ್ನದ ಮೂಲಕ ಅಳವಡಿಸಿಕೊಳ್ಳುವಂತಾಗಬೇಕು ಎಂದು ಚಿತ್ರಸಾಹಿತಿ ಹೃದಯಶಿವ ಅಭಿಪ್ರಾಯಪಟ್ಟರು.
ಯಲಹಂಕ ಕ್ಷೇತ್ರದ ರಾಮಗೊಂಡನಹಳ್ಳಿ ಸಮೀಪವಿರುವ ರಾಷ್ಟ್ರೀಯ ಪಶುರೋಗ ಸೋಂಕುಶಾಸ್ತ್ರ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆ(ನಿವೇದಿ)ಯಲ್ಲಿ ಮಂಗಳವಾರ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡು ಮಾತನಾಡಿದ ಅವರು ‘ಕನ್ನಡಿಗರಿಗೆ, ಕನ್ನಡ ಭಾಷೆಗೆ ದೇಶ, ವಿದೇಶಗಳಲ್ಲಿ ಹೆಮ್ಮೆಯ ಸ್ಥಾನವಿದೆ. ಕನ್ನಡ ನಾಡು ಸಾಹಿತ್ಯ, ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರ್ಥಿಕ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗರಿಮೆಯ ಸ್ಥಾನ ಗಳಿಸಿದೆ. ನಮ್ಮ ಕನ್ನಡಕ್ಕೆ 2 ಸಾವಿರಕ್ಕೂ ಅಧಿಕ ವರ್ಷಗಳ ಐತಿಹಾಸಿಕ ಹಿನ್ನೆಲೆಯಿದೆ. ಕನ್ನಡನಾಡನ್ನು ಆಳಿದ ಕದಂಬರು, ರಾಷ್ಟ್ರಕೂಟರು ಹೊಯ್ಸಳರು, ಚಾಲುಕ್ಯರು, ವಿಜಯನಗರ ಸಾಮ್ರಾಟರು ಈಗಿನ ಕರ್ನಾಟಕದ ಗಡಿಯನ್ನು ಮೀರಿದ ವಿಶಾಲ ಸಾಮ್ರಾಜ್ಯವನ್ನು ಕಟ್ಟಿ, ಆಳಿದ್ದಾರೆ. ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆಗೆ ಅಪರಿಮಿತವಾದ ಹಿನ್ನೆಲೆ ಇದೆ. ಇಂತಹ ಶ್ರೀಮಂತ ಹಿನ್ನೆಲೆ ಹೊಂದಿರುವ ಕನ್ನಡಿಗರಾದ ನಾವು ಜ್ಞಾನದಾಹಕ್ಕಾಗಿ ಅನ್ಯಭಾಷೆಗಳನ್ನು ಕಲಿಯೋಣ ಆದರೆ ನಮ್ಮ ಮಾತೃಭಾಷೆ ಕನ್ನಡವನ್ನು ದೈನಂದಿನ ಬದುಕಿನಲ್ಲಿ ಹೆಚ್ಚು ಬಳಕೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾದ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಬೆಂ.ಕೃಷಿ ವಿ.ವಿ.ಯ ಜೇನು ಕೃಷಿ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಟಿ.ವಿಜಯಕುಮಾರ್ ಮಾತನಾಡಿ ‘ಹಳಗನ್ನಡ ಕಾವ್ಯದಲ್ಲಿ ‘ಕನ್ನಡ ದೇಶದೋಳ್’ ಎಂಬ ಉಲ್ಲೇಖವಿದ್ದು, ಕನ್ನಡನಾಡಿಗೆ ದೇಶವೊಂದರ ಸ್ಥಾನಮಾನವಿತ್ತು ಎಂಬುದು ಈ ನುಡಿಯಿಂದ ತಿಳಿಯುತ್ತದೆ. ಕನ್ನಡ ಭಾಷೆ, ಸಂಸ್ಕೃತಿಯ ಬೆಳವಣಿಗೆಯ ವಿಚಾರದಲ್ಲಿ ಬಸವಣ್ಣ, ಕುವೆಂಪು ಮತ್ತು ಡಾ.ರಾಜ್ ಕುಮಾರ್ ಮೇರು ಸ್ಥಾನದಲ್ಲಿ ಕಾಣುವ ವಿಶಿಷ್ಟ ಕನ್ನಡಿಗರಾಗಿ ನಮಗೆ ಕಾಣಿಸುತ್ತಾರೆ. ಜನಸಾಮಾನ್ಯರ ಆಡುಭಾಷೆಯಲ್ಲಿ ವಚನಗಳನ್ನು ಬರೆದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವುದರ ಜೊತೆಗೆ ಇವ ನಮ್ಮವ, ಇವ ನಮ್ಮವ ಎಂಬ ವಿಶಾಲ ತಳಹದಿಯಲ್ಲಿ ಜಾತಿ ಮೀರಿದ ಸಮಸಮಾಜ ನಿರ್ಮಾಣ ಮಾಡಿದ ಖ್ಯಾತಿ ಬಸವಣ್ಣ ಮತ್ತು ವಚನಕಾರರಿಗೆ ಸಲ್ಲುತ್ತದೆ.
ಕನ್ನಡನಾಡನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಕರೆಯುವ ಮೂಲಕ ಕನ್ನಡನಾಡನ್ನು ಐರೋಪ್ಯ ಒಕ್ಕೂಟದ ಮಾದರಿಯ ವಿಶಾಲ ದೃಷ್ಟಿಕೋನದಲ್ಲಿ ನೋಡಿದವರು ಮಹಾಕವಿ ಕುವೆಂಪು.
ವಿಭಿನ್ನ ಪಾತ್ರಗಳ ನಿರ್ವಹಣೆಯಲ್ಲಿ ಕನ್ನಡ ಭಾಷೆಯನ್ನು ಅತ್ಯಂತ ಸ್ವಚ್ಛ ರೀತಿಯಲ್ಲಿ ಮಾತನಾಡುವುದು, ಸರಳ ವ್ಯಕ್ತಿತ್ವ ಮತ್ತು ಉಡುಗೆಯ ಮೂಲಕ ಕೋಟ್ಯಾಂತರ ಕನ್ನಡಿಗರ ಮೇಲೆ ಪ್ರಭಾವ ಬೀರಿದ ಡಾ.ರಾಜ್ ಕುಮಾರ್ ಕನ್ನಡ ಭಾಷೆಯ ಪ್ರಯೋಗ ಮತ್ತು ವ್ಯಕ್ತಿತ್ವ ರೂಪಿಸಿಕೊಳ್ಳುವ ವಿಷಯದಲ್ಲಿ ಕನ್ನಡಿಗರಿಗೆ ಮಾದರಿಯಾಗಿ ನಿಲ್ಲುತ್ತಾರೆ. ಅವರ ‘ಬಂಗಾರದ ಮನುಷ್ಯ’ ಚಿತ್ರದ ಪ್ರಭಾವ ಕ್ಕೊಳಗಾಗಿ ಉನ್ನತ ಶಿಕ್ಷಣ ಪಡೆದಿದ್ದ ಮತ್ತು ಉನ್ನತ ಹುದ್ದೆಯಲ್ಲಿದ್ದ ಹಲವರು ಕೃಷಿಕ್ಷೇತ್ರದಲ್ಲಿ ತೊಡಗಿಕೊಂಡ ಹಲವು ಉದಾಹರಣೆಗಳಿವೆ ಎಂದರು.
ಇದೇ ಸಂದರ್ಭದಲ್ಲಿ ಐಸಿಎಆರ್-ನಿವೇದಿ ಸಂಸ್ಥೆಯ ನಿರ್ದೇಶಕ ಡಾ.ಬಲದೇವ್ ರಾಜ್ ಗುಲಾಟಿ, ಪಶುರೋಗ ವಿಜ್ಞಾನಿಗಳಾದ ಡಾ.ರಾಜೇಶ್ವರಿ ಶಿವಂ, ಡಾ.ಎಸ್.ಪಾಟೀಲ್, ಡಾ.ಸತೀಶ್ ಗೌಡ, ಡಾ.ಸತೀಶ್ ಚಂದ್ರ ಸೇರಿದಂತೆ ಐಸಿಎಆರ್- ನಿವೇದಿ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿದ್ದರು.