ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘ :

2025-30ರ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ :

ಯಲಹಂಕ : ಸಮರ್ಥ ಆಡಳಿತ, ಶ್ಲಾಘನೀಯ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ರಾಜ್ಯದ ಸಹಕಾರಿ ಬ್ಯಾಂಕ್ ಕ್ಷೇತ್ರದಲ್ಲಿ ಜನಮನ್ನಣೆ ಪಡೆದಿರುವ ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಗೆ 2025-30ರ ಐದು ವರ್ಷಗಳ ಅವಧಿಗೆ ಫೆಬ್ರವರಿ 15ರಂದು ನಡೆಯಲಿದೆ.

ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಹಾಲಿ ಸದಸ್ಯರಾಗಿರುವ ಬಿಜೆಪಿ ಬೆಂಬಲಿತ 12 ಅಭ್ಯರ್ಥಿಗಳು ಶಾಸಕ ಎಸ್ ಆರ್ ವಿಶ್ವನಾಥ್ ಅವರ ನೇತೃತ್ವದಲ್ಲಿ ಗುರುವಾರ ರಾಜಾನುಕುಂಟೆ ಸಮೀಪದ ಅದ್ದಿಗಾನಹಳ್ಳಿಯ ಶ್ರೀ ಪಟಾಲಮ್ಮ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ, ಮತಯಾಚನೆ ಕಾರ್ಯಕ್ಕೆ ಚಾಲನೆ ನೀಡಿದರು.

ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ 2025ರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಸಾಮಾನ್ಯ ಕ್ಷೇತ್ರದಿಂದ ಹಾಲಿ ನಿರ್ದೇಶಕರಾಗಿರುವ ಆವಲಹಳ್ಳಿಯ ಎ.ತಿಮ್ಮರಾಯಿಗೌಡ, ಕೋಗಿಲು ಗ್ರಾಮದ ಕೆ.ಆರ್.ಪುಟ್ಟರಾಜು, ಅದ್ದೆವಿಶ್ವನಾಥಪುರದ ಎಂ.ಮಂಜುನಾಥ್, ನಾಗೇನಹಳ್ಳಿಯ ಎನ್.ಶಿವಕುಮಾರ್, ಮಾರಸಂದ್ರ ಗ್ರಾಮದ ಎಂ.ಪಿ.ಈಶ್ವರಾಚಾರ್, ಸಿಂಗನಾಯಕನಹಳ್ಳಿ ಗ್ರಾಮದ ಎಸ್ ಎನ್ ರಾಮಚಂದ್ರರೆಡ್ಡಿ ಸ್ಪರ್ಧಿಸಿದ್ದಾರೆ.

ಮಹಿಳಾ ಮೀಸಲು ಕ್ಷೇತ್ರದಿಂದ ಹಾಲಿ ಅಧ್ಯಕ್ಷರಾದ ಡಾ.ವಾಣಿಶ್ರೀ ವಿಶ್ವನಾಥ್, ದೊಡ್ಡಬೆಟ್ಟಹಳ್ಳಿಯ ಪುಷ್ಪಲತ ಚಂದ್ರಶೇಖರ್ ಸ್ಪರ್ಧಿಸಿದ್ದಾರೆ‌.

ಹಿಂದುಳಿದ ವರ್ಗದ ಪ್ರವರ್ಗ ‘ಎ’ ಮೀಸಲು ಕ್ಷೇತ್ರದಿಂದ ಯಲಹಂಕದ ಎನ್.ಮುನಿಯಪ್ಪ (ಕೂರ್ಲಪ್ಪ), ಪ್ರವರ್ಗ ‘ಬಿ’ ಮೀಸಲು ಕ್ಷೇತ್ರದಿಂದ ಯಲಹಂಕದ ವೈ.ಕೆ.ಮುರಾರಿರಾಮು ಅಭ್ಯರ್ಥಿಗಳಾಗಿ ಸ್ಪರ್ಧೆಯಲ್ಲಿ ಇದ್ದಾರೆ.

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ನಾಗದಾಸನ ಹಳ್ಳಿಯ ಎನ್.ಎ.ಚಂದ್ರು, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಯಲಹಂಕದ ಅಮರಾವತಿ ಸ್ಪರ್ಧಿಸಿದ್ದಾರೆ.

ಈ ಕುರಿತು ಶಾಸಕ ಎಸ್ ಆರ್ ವಿಶ್ವನಾಥ್ ಪ್ರತಿಕ್ರಿಯಿಸಿ ಮಾತನಾಡಿ ‘ಸಹಕಾರಿ ಕ್ಷೇತ್ರದಲ್ಲಿ ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದು, ದೇಶದ ವಿವಿಧ ರಾಜ್ಯಗಳ ಸಹಕಾರ ಸಚಿವರು ಹಾಗೂ ಸಹಕಾರ ಕ್ಷೇತ್ರದ ದಿಗ್ಗಜ ಮಹನೀಯರು ಸಿಂಗನಾಯಕನಹಳ್ಳಿ ಸಹಕಾರ ಸಂಘದ ಕಚೇರಿಗೆ ಭೇಟಿ ನೀಡಿ, ಇಲ್ಲಿನ ಆಡಳಿತ ವ್ಯವಸ್ಥೆಯ ಮಾದರಿಯನ್ನು ನೋಡಿ, ತಮ್ಮಲ್ಲಿ ಅಳವಡಿಸಿಕೊಂಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಇಂದಿಗೂ ಸಹ ರಾಷ್ಟ್ರದ ಸಹಕಾರ ಕ್ಷೇತ್ರದ ಮಹನೀಯರು ಸಹಕಾರ ಕ್ಷೇತ್ರದ ಕಾರ್ಯವೈಖರಿ ಮತ್ತು ಅಭಿವೃದ್ಧಿ ಕಾರ್ಯಗಳ ಮಾದರಿ ಪರಿಶೀಲನೆಗೆ ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘಕ್ಕೆ ಭೇಟಿ ನೀಡಲು ಸಲಹೆ ನೀಡುತ್ತಿರುವುದು ನಮ್ಮ ಪ್ರಾಮಾಣಿಕ ಕಾರ್ಯವೈಖರಿ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹಿಡಿದ ಕೈಗನ್ನಡಿ ಎನ್ನಬಹುದು, ಈ ಬಗ್ಗೆ ನಮಗೆ ಹೆಮ್ಮೆಯಿದೆ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ಡಿ.ಜಿ.ಅಪ್ಪಯ್ಯಣ್ಣ, ಚೊಕ್ಕನಹಳ್ಳಿ ವೆಂಕಟೇಶ್, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ಡಾ.ಉದ್ದಂಡಯ್ಯ, ಸೋಮಶೇಖರ್, ಎಸ್.ಜಿ.ನರಸಿಂಹಮೂರ್ತಿ, ಎಸ್.ಜಿ.ಪ್ರಶಾಂತ್ ರೆಡ್ಡಿ, ಯಲಹಂಕ ಗ್ರಾಮಾಂತರ ಮಂಡಲ ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ರಾಜೇಶ್ ಸೇರಿದಂತೆ ಹಲವು ಬಿಜೆಪಿ ಮುಖಂಡರಿದ್ದರು.

Leave a Reply

Your email address will not be published. Required fields are marked *