ರಾಜಾನುಕುಂಟೆ ಗ್ರಾಮ ಪಂಚಾಯಿತಿ ವತಿಯಿಂದ ಮಕ್ಕಳ ವಿಶೇಷ ಗ್ರಾಮಸಭೆ :

ವಿವಿಧ ಸವಲತ್ತುಗಳ ವಿತರಣೆ :

ಯಲಹಂಕ : ಯಲಹಂಕ ಕ್ಷೇತ್ರದ ರಾಜಾನುಕುಂಟೆ ಗ್ರಾಮ ಪಂಚಾಯಿತಿ ವತಿಯಿಂದ ಗುರುವಾರ ಏರ್ಪಡಿಸಿದ್ದ ‘ವಿಶೇಷ ಗ್ರಾಮಸಭೆ’ಯನ್ನು ಶಾಸಕ ಎಸ್ ಆರ್ ವಿಶ್ವನಾಥ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ‘ಗ್ರಾಮಸಭೆ ಗಳಿಗಿಂತ ಮಕ್ಕಳ ವಿಶೇಷ ಗ್ರಾಮಸಭೆಗಳಿಗೆ ಹೆಚ್ಚಿನ ಮಹತ್ವವಿದೆ, ಏಕೆಂದರೆ ಇಂದಿನ ಮಕ್ಕಳು ದೇಶದ ಭವಿಷ್ಯದ ನಿರ್ಮಾತೃಗಳು, ಇಲ್ಲಿ ಕಲಿತ ಶಿಕ್ಷಣದಿಂದ ದೇಶ,ವಿದೇಶಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ, ನಮ್ಮ ಗ್ರಾಮದ ಕೀರ್ತಿಯನ್ನು ಬಾನೆತ್ತರಕ್ಕೆ ಕೊಂಡೊಯ್ಯುವ ಛಾತಿ ಮಕ್ಕಳಿಗೆ ಇರುತ್ತದೆ. ಈ ದಿಸೆಯಲ್ಲಿ ಶಾಲಾ ವ್ಯಾಸಂಗವನ್ನು ಅತ್ಯಂತ ಶ್ರದ್ಧೆಯಿಂದ ಮಾಡುವಂತೆ ಕಿವಿ ಮಾತು ಹೇಳಿದರು.

ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಕಳೆದ ಹದಿನೆಂಟು ವರ್ಷಗಳಿಂದಲೂ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಕೊಠಡಿ, ಆಟದ ಮೈದಾನ, ಶೌಚಾಲಯ, ಕಂಪ್ಯೂಟರ್, ಲೇಖನ ಪರಿಕರಗಳು, ಗ್ರಂಥಾಲಯ, ಪ್ರಯೋಗಾಲಯ ಸೇರಿದಂತೆ ಶಾಲೆಗಳಿಗೆ ಅಗತ್ಯವಿರುವ ವಿವಿಧ ಸೌಕರ್ಯಗಳನ್ನು ಒದಗಿಸಿ ಕೊಟ್ಟಿದ್ದೇನೆ ಈ ಮೂಲಕ ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸಿರುವುದಾಗಿ ತಿಳಿಸಿದರು.

ಗ್ರಾಮಸಭೆಯಲ್ಲಿ ಅರ್ಹ ಫಲಾನುಭವಿಗಳಿಗೆ ದಿನಸಿ ಕಿಟ್, ಕುಕ್ಕರ್, ಶಾಲಾ ಮಕ್ಕಳಿಗೆ ಲೇಖನ ಪರಿಕರಗಳ ಕಿಟ್, ವಿಕಲ ಚೇತನರಿಗೆ ಸಹಾಯಧನದ ಚೆಕ್ ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಎರಡು ಹೊಸ ಸ್ವಚ್ಛತಾ ವಾಹನಗಳ ಲೋಕಾರ್ಪಣೆ ಮತ್ತು ನೂತನ ಶಾಲಾ ಕೊಠಡಿ ಉದ್ಘಾಟನೆ ನೆರವೇರಿಸಲಾಯಿತು.

ಗ್ರಾ.ಪಂ.ಅಧ್ಯಕ್ಷೆ ಚನ್ನಮ್ಮ, ಮಾಜಿ ಅಧ್ಯಕ್ಷರಾದ ಎಸ್.ಜಿ. ಮೂರ್ತಿ(ಎಸ್.ಟಿ.ಡಿ.ಮೂರ್ತಿ), ಅಂಬಿಕಾ, ಉಪಾಧ್ಯಕ್ಷ ಶಿವಕುಮಾರ್, ಗ್ರಾ.ಪಂ.ಸದಸ್ಯ ರಾದ ಸಾದೇನಹಳ್ಳಿ ಚಿಕ್ಕಣ್ಣ, ಆರ್ ಎಚ್ ಹನುಮೇಗೌಡ, ನಾಗೇಶ್, ಭವಾನಿ, ಮುತ್ತುವೇಣು, ಸುಜಾತ, ಗಂಗಮ್ಮ, ಆರ್ ಡಿ ರಾಜಣ್ಣ, ವೆಂಕಟೇಶ್, ಸೌಮ್ಯ ಗೋವಿಂದರಾಜು, ಬಾಲಾಜಿ, ಸುಜಾತ, ಬಿಜೆಪಿ ಯುವ ಮುಖಂಡ ಸಾದೇನಹಳ್ಳಿ ಪ್ರಕಾಶ್ ಗೌಡ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *