



ಬ್ಯಾಟರಾಯನಪುರ : ಕ್ಷೇತ್ರದ ಜಾಲ ಹೋಬಳಿಯ ಮರಳಕುಂಟೆ ಗ್ರಾಮದ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ರಥಸಪ್ತಮಿ ಪ್ರಯುಕ್ತ ಏರ್ಪಡಿಸಿದ್ದ 57ನೇ ವರ್ಷದ ಬ್ರಹ್ನರಥೋತ್ಸವ, ಕಲ್ಯಾಣೋತ್ಸವ, 21 ಪಾಲಕಿ ಉತ್ಸವ ಅತ್ಯಂತ ವೈಭವ ಮತ್ತು ವಿಜೃಂಭಣೆಯಿಂದ ನೆರವೇರಿತು.
ಬ್ರಹ್ಮರಥೋತ್ಸವದ ಅಂಗವಾಗಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ, ಮರಳಕುಂಟೆ ಗ್ರಾಮದ ಪ್ರತಿ ರಾಜ ಬೀದಿಗಳಲ್ಲಿ ಮೆರವಣಿಗೆ ನೆರವೇರಿಸಲಾಯಿತು. ಕೀಲು ಕುದುರೆ, ವೀರಗಾಸೆ, ಡೊಳ್ಳು, ಕಂಸಾಳೆ ಸೇರಿದಂತೆ ವಿವಿಧ ರಾಜ್ಯಗಳ ಜಾನಪದ ಕಲಾತಂಡಗಳ ಕಲಾ ಪ್ರದರ್ಶನದ ನಡುವೆ ಸಾಗಿದ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿಯ ಬ್ರಹ್ಮರಥೋತ್ಸವದ ವೈಭವವನ್ನು ನೆರೆದ ಅಸಂಖ್ಯಾತ ಭಕ್ತರು ಕಣ್ತುಂಬಿಕೊಂಡರು. ಈ ವೇಳೆ ಉದ್ಘೋಷವಾದ ಗೋವಿಂದ ನಾಮ ಸ್ಮರಣೆ ಮುಗಿಲು ಮುಟ್ಟುವಂತಿತ್ತು. ಬ್ರಹ್ಮರಥೋತ್ಸವದ ಪ್ರಯುಕ್ತ ಬೆಳಿಗ್ಗೆ 7 ಗಂಟೆಯಿಂದ ಸಂಜೆಯವರೆಗೂ ಅನ್ನಸಂತರ್ಪಣೆ ನೆರವೇರಿತು. ಸ್ವಾಮಿ ಪ್ರಸಾದ ಸ್ವೀಕರಿಸಿದ ಭಕ್ತರು ಧನ್ಯತೆಯ ಕೃತಾರ್ಥ ಭಾವ ವ್ಯಕ್ತಪಡಿಸಿದರು.
ಈ ಕುರಿತು ಮರಳಕುಂಟೆ ಗ್ರಾಮದ ಮುಖಂಡರು, ದೇವಸ್ಥಾನದ ಆಡಳಿತ ಮಂಡಳಿಯ ಖಜಾಂಚಿ ಗಳಾದ ಸುರೇಶ್ ಮಾತನಾಡಿ ‘ಮರಳಕುಂಟೆ ಗ್ರಾಮದ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಹಲವು ಶತಮಾನಗಳ ಐತಿಹ್ಯವಿದೆ. ಅನಾದಿ ಕಾಲದಿಂದಲೂ ವೈಭವದಿಂದ ನೆರವೇರುತ್ತಾ ಬಂದಿರುವ ಬ್ರಹ್ಮರಥೋತ್ಸವದ ಸೊಬಗನ್ನು ಕಣ್ತುಂಬಿಕೊಳ್ಳುವುದೇ ಒಂದು ಸೌಭಾಗ್ಯದ ವಿಷಯ. ಬ್ರಹ್ಮರಥೋತ್ಸವದ ಪ್ರಯುಕ್ತ ಸ್ವಾಮಿಗೆ ಕಲ್ಯಾಣೋತ್ಸವ, 21 ಪಾಲಕಿ ಉತ್ಸವ, ಅನ್ನಸಂತರ್ಪಣೆ, ಜಾನಪದ ಕಲಾತಂಡಗಳ ಕಲಾಪ್ರದರ್ಶನ,ಬಾಣ,ಬಿರುಸುಗಳ ಪ್ರದರ್ಶನದ ನಡುವೆ ನಡೆಯುವ ಸ್ವಾಮಿಯ ಮೆರವಣಿಗೆಯನ್ನು ಕಣ್ತುಂಬಿಕೊಳ್ಳುವುದೇ ಒಂದು ಅಪೂರ್ವ ಕ್ಷಣ. ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿಯ ಉತ್ಸವದ ವಿಷಯದಲ್ಲಿ ಮರಳಕುಂಟೆ ಗ್ರಾಮದಲ್ಲಿ ಯಾವುದೇ ಪಕ್ಷ, ಜಾತಿ, ಮತ, ಪಂಥಗಳ ಬೇಧವಿಲ್ಲ. ಎಲ್ಲರೂ ಒಗ್ಗಟ್ಟಾಗಿ ನೆರವೇರಿಸಲಾಗುತ್ತದೆ, ಇದೊಂದು ಹೆಮ್ಮೆಯ ಸಂಗತಿ ಎಂದರು.
ರಥಸಪ್ತಮಿ ಬ್ರಹ್ಮರಥೋತ್ಸವದ ಈ ವೈಭವದ ಕಾರ್ಯಕ್ರಮದಲ್ಲಿ ಶ್ರೀ ಯವರ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಪದಾಧಿಕಾರಿಗಳು, ಶ್ರೀ ಯವರ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಮರಳಕುಂಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಮುನಿರಾಮಣ್ಣ(ಎಂ.ಆರ್.), ಮಾರೇನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಚೊಕ್ಕನಹಳ್ಳಿ ನಂಜೇಗೌಡ, ಜಾಲ ಬ್ಲಾಕ್ ಕಾಂಗ್ರೆಸ್(ಪ.ಜಾ) ಅಧ್ಯಕ್ಷರಾದ ಮರಳಕುಂಟೆ ರಮೇಶ್, ಗ್ರಾ.ಪಂ.ಸದಸ್ಯರಾದ ಮರಳಕುಂಟೆ ಕೃಷ್ಣಪ್ಪ, ವಿ.ನಾರಾಯಣಸ್ವಾಮಿ, ಮುಖಂಡರಾದ ರಾಮಯ್ಯ, ಮುನೇಗೌಡ, ನಾರಾಯಣಸ್ವಾಮಿ, ಈರೇಗೌಡ, ಮಳ್ಳೂರಪ್ಪ, ಮುನಿರಾಜು, ಚಾಗಲೇಟಿ ಮುನಿರಾಜು ಸೇರಿದಂತೆ ಮರಳಕುಂಟೆ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸ್ವಾಮಿಯ ಅಸಂಖ್ಯಾತ ಭಕ್ತರಿದ್ದರು.