






ದೇಶದಲ್ಲಿ ಜಾತಿ ಜಾಗೃತಿಗಿಂತ ಧರ್ಮ ಜಾಗೃತಿಯ ಅಗತ್ಯವಿದೆ : ಎಸ್ ಆರ್ ವಿಶ್ವನಾಥ್
ಸಿಂಗನಾಯಕನಹಳ್ಳಿ ಗ್ರಾಮದಲ್ಲಿ ಮಡಿವಾಳ ಮಾಚಿದೇವರ ಜಯಂತಿ : ಮಾಚಿದೇವರ ಭವನ ಉದ್ಘಾಟನೆ :
ಯಲಹಂಕ : ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನ ಗಳನ್ನು ಅವಲೋಕಿಸಿದರೆ ನಮ್ಮಲ್ಲಿ ಜಾತಿ ಜಾಗೃತಿಗಿಂತ ಧರ್ಮ ಮತ್ತು ದೇಶದ ಉಳಿವಿನ ಬಗೆಗಿನ ಜಾಗೃತಿ ಅತ್ಯವಶ್ಯಕವಾಗಿದೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯಪಟ್ಟರು.
ಮಡಿವಾಳ ಮಾಚಿದೇವ ಚಾರಿಟೇಬಲ್ ಟ್ರಸ್ಟ್ ಮತ್ತು ಮಡಿವಾಳ ಸಮುದಾಯದ ಕುಲ ಬಾಂಧವರ ವತಿಯಿಂದ ಏರ್ಪಡಿಸಿದ್ದ ‘ಕುಲಗುರು ಮಡಿವಾಳ ಮಾಚಿದೇವರ ಜಯಂತಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಸಮುದಾಯ ಮತ್ತು ತಮ್ಮ ಕುಲಗಳ ಆಚರಣೆಗಳು, ಸಂಪ್ರದಾಯಗಳ ಜತೆಗೆ ಧರ್ಮ ಮತ್ತು ದೇಶದ ಒಗ್ಗಟ್ಟು ಪ್ರಸ್ತುತ ಪರಿಸ್ಥಿತಿಯಲ್ಲಿ ಅಗತ್ಯವಿದೆ. ಏಕೆಂದರೆ ನಾವು ದೇಶದ ಬಹುಭಾಗವನ್ನು ಅನ್ಯ ಧರ್ಮೀಯರ ಧಾಳಿಗಳಿಂದ ಕಳೆದುಕೊಂಡಿದ್ದೇವೆ, ಒಂದೊಮ್ಮೆ ಅಫ್ಘಾನಿಸ್ತಾನ, ಪಾಕಿಸ್ಥಾನ, ಬಾಂಗ್ಲಾದೇಶ, ಶ್ರೀಲಂಕಾ ಮುಂತಾದ ಹಲವು ದೇಶಗಳು ಭರತ ಭೂಮಿಯ ಭಾಗವಾಗಿದ್ದವು. ಅಲ್ಲಿನ ಹಿಂದೂ ಧರ್ಮೀಯರನ್ನು ಬಲವಂತವಾಗಿ ಮತಾಂತರ ಮಾಡಲಾಯಿತು. ದೇಶದ ಭಾಗವನ್ನು ಕಳೆದುಕೊಂಡಿ ರುವ ನಾವು ಜಾತಿಗಳ ಒಳಜಗಳದಲ್ಲಿ ಮುಳುಗಿ ಮೈಮರೆತರೆ ಜಗತ್ತಿನ ಏಕೈಕ ಶ್ರೇಷ್ಠ ಧರ್ಮ ಎನಿಸಿಕೊಂಡಿರುವ ಹಿಂದೂ ಧರ್ಮದ ಅಧಃಪತನವಾಗುತ್ತದೆ ಈ ದಿಸೆಯಲ್ಲಿ ನಾವು ಧರ್ಮ ಮತ್ತು ದೇಶದ ಬಗೆಗಿನ ಜಾಗೃತಿ ಮೂಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಅಥಣಿಯ ಬಸವ ರಾಜೇಂದ್ರ ಶರಣರು ಮಾತನಾಡಿ ‘ಶರಣ ಸಾಹಿತ್ಯದ ಉಳಿವಿಗಾಗಿ ಮಡಿವಾಳ ಮಾಚಿದೇವರು ಮಾಡಿದ ತ್ಯಾಗ, ಹೋರಾಟ ಸ್ಮರಣೀಯವಾದುದು. ಸಮ ಸಮಾಜ ನಿರ್ಮಾಣಕ್ಕಾಗಿ ಕೈಗೊಂಡ ಹೋರಾಟದಲ್ಲಿ ಬಿಜ್ಜಳನ ಮಗನ ಕೆಂಗಣ್ಣಿಗೆ ಗುರಿಯಾದ ಶರಣರು ಕಲ್ಯಾಣವನ್ನು ಬಿಟ್ಟು ದಿಕ್ಕಾಪಾಲಾಗಬೇಕಾದ ಪರಿಸ್ಥಿತಿ ಒದಗಿ ಬಂದಾಗ ಬಸವಣ್ಣನ ಮನವಿಯ ಮೇರೆಗೆ ಅಮೂಲ್ಯವಾದ ಶರಣ ಸಾಹಿತ್ಯದ ಸಂರಕ್ಷಣೆಯ ಹೊಣೆಹೊತ್ತ ಮಾಚಿದೇವರು ಶರಣ ಸಾಹಿತ್ಯವನ್ನು ಬೆನ್ನಿಗೆ ಕಟ್ಟಿಕೊಂಡು, ಶರಣ ಸಾಹಿತ್ಯವನ್ನು ಸಂರಕ್ಷಣೆಗಾಗಿ ಮಾಡಿದ ಹೋರಾಟ, ಪಟ್ಟ ಪರಿಶ್ರಮ ಮೈನವಿರೇಳಿಸುತ್ತದೆ ಎಂದು ಮಡಿವಾಳ ಮಾಚಿದೇವರ ಕೊಡುಗೆ ಕುರಿತು ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಶಾಸಕರ ವಿಶೇಷ ಅನುದಾನದ ಅಡಿಯಲ್ಲಿ 50 ಲಕ್ಷ ರು.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಮಾಚಿದೇವರ ಭವನವನ್ನು ಶಾಸಕ ಎಸ್ ಆರ್ ವಿಶ್ವನಾಥ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಬಿಜೆಪಿ ಮುಖಂಡ ಎಸ್ ಎನ್ ರಾಜಣ್ಣ, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ರಾಮಮೂರ್ತಿ, ಮಡಿವಾಳ ಮಾಚಿದೇವ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ತಿಮ್ಮಪ್ಪ, ಗೌರವಾಧ್ಯಕ್ಷರಾದ ಸಿದ್ದಗಂಗಪ್ಪ, ಉಪಾಧ್ಯಕ್ಷರಾದ
ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬಾಬು ಕೆ., ಆರ್ ಎಸ್ ಎಸ್ ಎನ್ ಬ್ಯಾಂಕ್ ನಿರ್ದೇಶಕರಾದ ಮಂಜುನಾಥ್, ರಾಮಚಂದ್ರ ರೆಡ್ಡಿ, ಸಿಂಗನಾಯಕನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಅಮರಾವತಮ್ಮ, ಮಾಜಿ ಅಧ್ಯಕ್ಷ ಟಿ.ಮುನಿರೆಡ್ಡಿ, ಮಾಜಿ ಉಪಾಧ್ಯಕ್ಷರಾದ ಪ್ರಶಾತರೆಡ್ಡಿ, ಜೀವಿತಾ ಮುನಿಕೃಷ್ಣ, ಆಲೂರು ಗ್ರಾ.ಪಂ.ಅಧ್ಯಕ್ಷೆ ಪುಷ್ಪಾಮಂಜುನಾಥ್, ಹುರುಳಿಚಿಕ್ಕನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಲಲಿತಾ ರಾಮು, ಮಡಿವಾಳ ಸಮುದಾಯದ ಮುಖಂಡರಾದ ಸಿ.ನಂಜಪ್ಪ, ರಾಜಣ್ಣ, ಪ್ರಕಾಶ್, ಎಸ್ ಎಸ್ ರಾಜಣ್ಣ, ಎಂ.ನಾಗರಾಜು, ಜಯರಾಮಣ್ಣ, ಚಂದ್ರಶೇಖರ್, ಸಂದೀಪ್ ಎಚ್.ಜಿ. ಸೇರಿದಂತೆ ಮಡಿವಾಳ ಸಮುದಾಯದ ಕುಲಬಾಂಧವರಿದ್ಧರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthu kogilu layout
Yelahanka Bangalore
9845085793
7349337989