ಆರೋಗ್ಯ ಇಲಾಖೆಯ ನಿರ್ಲಕ್ಷ್ಯ :

ರಸ್ತೆ ಬದಿಯಲ್ಲಿ ಅನಾಥವಾಗಿ ನಿಂತಿರುವ 108 ಆಂಬುಲೆನ್ಸ್ :

ಯಲಹಂಕ : ಯಲಹಂಕ ತಾಲೂಕಿನ ರಾಜನಕುಂಟೆ- ಕಾಕೋಳು ರಸ್ತೆಯಲ್ಲಿ ಬರುವ ಕುಂಟೆಯ ಮುಂಭಾಗದಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದಾಗಿ ಹಲವು ವರ್ಷಗಳಿಂದ ಅನಾಥವಾಗಿರುವ ನಿಂತಿರುವ ಈ 108 ಆಂಬುಲೆನ್ಸ್ ಸರ್ಕಾರಿ ವಾಹನವು ಮುಖ್ಯ ರಸ್ತೆ ಬದಿಯಲ್ಲೇ ನಿಂತಿದ್ದರೂ ಸಹ ಆರೋಗ್ಯ ಇಲಾಖೆಯ ಯಾವ ಅಧಿಕಾರಿಗಳ ಕಣ್ಣಿಗೂ ಕಾಣದಿರುವುದು ನಿಜಕ್ಕೂ ದುರ್ದೈವದ ಸಂಗತಿ.

ಒಂದೊಮ್ಮೆ ಹಲವು ಜನರ ಜೀವ ಕಾಪಾಡಿದ್ದ ಈ ಆಂಬುಲೆನ್ಸ್ ಗೆ ಈ ರೀತಿಯ ದುರ್ಗತಿ ಬಂದಿರುವ ಬಗ್ಗೆ ಸಾರ್ವಜನಿಕರು ಮಮ್ಮಲ ಮರುಗಿದ್ದಾರೆ.

ಈ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಕಡತನಮಲೆ ನಂಜುಂಡಪ್ಪ ಮಾತನಾಡಿ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಈ 108 ಆಂಬುಲೆನ್ಸ್ ವಾಹನವು ನಾಕಂಡಂತೆಯೇ ಹಲವು ವರ್ಷಗಳಿಂದ ಇಲ್ಲಿಯೇ ನಿಂತಿದೆ. ಮಳೆಗೆ ತೋಯುತ್ತಾ, ಬಿಸಿಲಿಗೆ ಒಣಗುತ್ತಾ, ಚಳಿಗೆ ಕೊರಗುತ್ತಾ ನಿಂತಿರುವ ಈ ವಾಹನದ ಬಗ್ಗೆ ಯಾವೊಬ್ಬ ಆರೋಗ್ಯ ಅಧಿಕಾರಿಯೂ ಗಮನ ಹರಿಸದಿರುವುದು ಅವರ ಕಾರ್ಯವೈಖರಿಗೆ ಹಿಡಿದಿರುವ ಕೈಗನ್ನಡಿಯಾಗಿದೆ. ಈ ಹಿಂದೆ ಅನೇಕ ಜೀವಗಳನ್ನು ಕಾಪಾಡಿರುವ ಈ ವಾಹನವು ರಾಜನುಕುಂಟೆ ಮತ್ತು ಸುತ್ತಮುತ್ತಲ ಗ್ರಾಮಗಳ ರೋಗಿಗಳನ್ನು ಸಕಾಲಕ್ಕೆ ಆಸ್ಪತ್ರೆಗೆ ಸೇರಿಸಲು ಬಹಳ ಉಪಯೋಗಕ್ಕೆ ಬರುತ್ತಿತ್ತು. ಆದರೆ ಈ ವಾಹನವೇ ಅನಾಥವಾಗಿ ರಸ್ತೆ ಬದಿಯಲ್ಲಿ ನಿಂತಿರುವುದನ್ನು ನೋಡಿದರೆ ಸಾರ್ವಜನಿಕರ ಬಗ್ಗೆ, ಅಪಘಾತಗಳ ಬಗ್ಗೆ ಸರ್ಕಾರಕ್ಕಾಗಲಿ, ಆರೋಗ್ಯ ಇಲಾಖೆಯ ಅಧಿಕಾರಿಗಳಿಗಾಗಲಿ ಅದೆಷ್ಟು ಕಾಳಜಿ ಇದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಈಗಲಾದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಆಂಬುಲೆನ್ಸ್ ವಾಹನವನ್ನು ಇಲ್ಲಿಂದ ಸ್ಥಳಾಂತರ ಮಾಡಿ ಕೊಂಡೊಯ್ದು ಸಮರ್ಪಕ ರೀತಿಯಲ್ಲಿ ರಿಪೇರಿ ಮಾಡಿಸಿ ಸಾರ್ವಜನಿಕ ಸೇವೆಗೆ ಅಣಿಗೊಳಿಸುತ್ತಾರಾ ಕಾದು ನೋಡಬೇಕಿದೆ ಎಂದರು.

Leave a Reply

Your email address will not be published. Required fields are marked *