ಮಹಿಳೆಯರು ಕೌಟುಂಬಿಕ ನಿರ್ವಹಣೆಯ ಜೊತೆಗೆ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳಲಿ : ಹೇಮಾವತಿ ನಾಗರಾಜ್ ಬಾಬು
ಬೆಟ್ಟಹಲಸೂರು ಗ್ರಾ.ಪಂ.ಯಲ್ಲಿ ಮಹಿಳಾ ಗ್ರಾಮಸಭೆ, ಸೀಮಂತ ಕಾರ್ಯಕ್ರಮ :
ಬ್ಯಾಟರಾಯನಪುರ : ದೇಶದ ಜನಸಂಖ್ಯೆಯಲ್ಲಿ ಸರಿಸುಮಾರು ಅರ್ಧದಷ್ಟಿರುವ ಮಹಿಳೆಯರು ಕೇವಲ ಕೌಟುಂಬಿಕ ನಿರ್ವಹಣೆ ಗಷ್ಟೇ ಸೀಮಿತವಾಗದೆ, ಸ್ವ ಉದ್ಯೋಗದ ಮೂಲಕ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳಬೇಕು ಎಂದು ಬೆಟ್ಟಹಲಸೂರು ಗ್ರಾ.ಪಂ‌.ಅಧ್ಯಕ್ಷೆ ಹೇಮಾವತಿ ನಾಗರಾಜ್ ಬಾಬು ಮಹಿಳೆಯರಿಗೆ ಕಿವಿ ಮಾತು ಹೇಳಿದರು.
ಬ್ಯಾಟರಾಯನಪುರ ಕ್ಷೇತ್ರದ ಬೆಟ್ಟಹಲಸೂರು ಗ್ರಾ.ಪಂ. ವತಿಯಿಂದ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಮಹಿಳಾ ಗ್ರಾಮಸಭೆ ಮತ್ತು ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಭಾರತೀಯ ಪರಂಪರೆಯಲ್ಲಿ ಮಹಿಳೆಯರಿಗೆ ಅನಾದಿ ಕಾಲದಿಂದಲೂ ಪೂಜ್ಯ ಸ್ಥಾನವಿದೆ, ಮಹಿಳೆ ತಾಯಿಯಾಗಿ, ಪತ್ನಿಯಾಗಿ, ಅಕ್ಕ,ತಂಗಿಯಾಗಿ ಅತ್ತೆ, ಸೊಸೆಯಾಗಿ ಕುಟುಂಬದ ಘನತೆ ಮತ್ತು ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಆದರೆ ಇದರ ಹೊರತಾಗಿಯೂ ನಮ್ಮ ಮಹಿಳೆಯರು ಸ್ವ ಉದ್ಯೋಗದ ಮೂಲಕ ಸಮಾಜದಲ್ಲಿ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳಬೇಕು ಹಾಗಾದಾಗ ದೇಶದ ಆರ್ಥಿಕ ಪ್ರಗತಿಗೆ ಮಹಿಳೆಯರು ಸಹ ಇಂಬು ನೀಡಿದಂತಾಗುತ್ತದೆ.
ಬೆಂ.ನಗರ ಜಿಲ್ಲಾ ಪಂಚಾಯಿತಿ ಸಿಇಓ ಆಗಿ ಲತಾಕುಮಾರಿ ಅವರು ಅಧಿಕಾರ ವಹಿಸಿಕೊಂಡ ಮೇಲೆ ನಗರದಲ್ಲಿ ಮಹಿಳೆಯರ ಏಳಿಗೆಯ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಹಿಳೆಯರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ, ಈ ಹಿಂದೆ ಹೆಸರಿಗಷ್ಟೇ ಆಚರಿಸಲಾಗುತ್ತಿದ್ದ ಮಹಿಳಾ ದಿನಾಚರಣೆ ಮತ್ತು ಮಹಿಳಾ ಗ್ರಾಮಸಭೆಗೆ ಲತಾಕುಮಾರಿ ಅವರು ಹೊಸದೊಂದು ರೂಪು ನೀಡಿ ವಿಜೃಂಭಣೆಯಿಂದ ಆಚರಿಸುವಂತೆ‌ ಮಾಡಿರುವ ಬಗ್ಗೆ ಹೆಮ್ಮೆ ಇದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಮಹಿಳಾ ಗ್ರಾಮಸಭೆಯಲ್ಲಿ 10 ಕ್ಕೂ ಹೆಚ್ಚು ಗರ್ಭಿಣಿ ತಾಯಂದಿರಿಗೆ ಸೀಮಂತ, ಆರೋಗ್ಯ ಕಿಟ್ ವಿತರಣೆ, ರಂಗೋಲಿ ಸ್ಪರ್ಧೆ ಮತ್ತು ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿಜೇತರಾದ ಮಹಿಳೆರಿಗೆ ಬಹುಮಾನ ವಿತರಣೆ, ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಹಾಯಧನದ ಚೆಕ್ ವಿತರಣೆ, ಮಾಸಿಕ ಸಂತೆ, ಉಡುಗೊರೆ ವಿತರಣೆ, ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಗ್ರಾಮಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಬಿ.ಆರ್.ಪ್ರವೀಣ್, ಮಾಜಿ ಅಧ್ಯಕ್ಷ ಬಿ.ಎಸ್.ಅನಿಲ್ ಕುಮಾರ್, ಗ್ರಾ.ಪಂ.ಸದಸ್ಯರಾದ ಬಿ.ಆರ್.ರಾಮಾಂಜಿನಿ, ವಿಮಲಾ ಗಣೇಶ್, ರತ್ನಮ್ಮ ಆಂಜಿನಪ್ಪ, ಸಾವಿತ್ರಮ್ಮ ಮುನಿರಾಜು, ಮಮತಾ ಪ್ರಶಾಂತ್, ತುಳಸಮ್ಮ ವೆಂಕಟರಮಣಪ್ಪ, ಸುವರ್ಣ ಜಯಣ್ಣ, ನಾಗರತ್ನ ಸುಬ್ರಮಣಿ, ಎ.ಪಿ.ಮುನಿಕೃಷ್ಣ, ಬಿ.ವೈ. ಮಂಜುನಾಥ್, ರಾಮಮೂರ್ತಿ, ಬೆಟ್ಟಹಲಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಯಶಸ್ವಿನಿ, ಪಿಡಿಓ ಲೋಕನಾಥ್, ಕಾರ್ಯದರ್ಶಿ ಸುಬ್ರಮಣ್ಯ, ಸೇರಿದಂತೆ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರಿದ್ದರು.

Leave a Reply

Your email address will not be published. Required fields are marked *