

ಡೈರಿ ಚುನಾವಣೆ : ಬೆಂ.ಉತ್ತರ ಕ್ಷೇತ್ರದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಎಂ.ಸತೀಶ್ ಸ್ಪರ್ಧೆ :
ಬೆಂಗಳೂರು : ಮೇ 25ರಂದು ನಡೆಯಲಿರುವ ಬೆಂಗಳೂರು ಡೈರಿ ನಿರ್ದೇಶಕರ ಆಯ್ಕೆ ಚುನಾವಣೆಯಲ್ಲಿ ನೆಲ್ಲುಕುಂಟೆ ಗ್ರಾಮದ ಎಂ.ಸತೀಶ್ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಪ್ರೆಷರ್ ಕುಕ್ಕರ್ ಚಿಹ್ನೆ ಅಡಿಯಲ್ಲಿ ಸ್ಪರ್ಧಿಸಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ನಗರದ ಯಲಹಂಕದಲ್ಲಿ ಆಯೋಜಿಸಿದ್ದ ಪತ್ರಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ರೈತ ಕುಟುಂಬದ ಹಿನ್ನೆಲೆಯಿಂದ ಬಂದಿರುವ ನಾನು ಕಳೆದ ಹಲವು ವರ್ಷಗಳಿಂದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದೇನೆ. ಬೆಳಕಿನಿಂದ ಸಂಜೆಯವರೆಗೂ ಹಸುವಿನ ಪೋಷಣೆ ಮಾಡುವ ಹಾಲು ಉತ್ಪಾದಕ ರೈತರ ಸಮಸ್ಯೆಯ ಬಗ್ಗೆ ತಿಳಿದುಕೊಂಡಿದ್ದೇನೆ. ಅವರು ಕಷ್ಟಪಟ್ಟು ಕರೆಯುವ ಪ್ರತಿ ಹನಿ ಹಾಲಿನ ಹಿಂದಿರುವ ಬೆವರಿನ ಪರಿಶ್ರಮದ ಬಗ್ಗೆ ಅರಿವಿದೆ. ಹಾಲು ಉತ್ಪಾದಕ ರೈತರ ಹಾಲಿಗೆ ಮತ್ತು ಹಾಲು ಉತ್ಪಾದಕರಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವ ಮಹತ್ವಾಕಾಂಕ್ಷೆಯಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಹಾಲು ಉತ್ಪಾದಕರು ಆಶೀರ್ವದಿಸಿ ಆಯ್ಕೆ ಮಾಡಿದರೆ ಅವರ ಸೇವೆ ಮಾಡುತ್ತೇನೆ ಇಲ್ಲದಿದ್ದರೂ ಸಹ ಹಾಲು ಉತ್ಪಾದಕ ರೈತರೊಟ್ಟಿಗೆ ಇರುತ್ತೇನೆ ಎಂದರು.
ಪತ್ರಿಕಾಗೋಷ್ಠಿ ಉದ್ದೇಶಿಸಿ ಪಿ ಆರ್ ಆರ್ ರೈತ ಸಂಘದ ಅಧ್ಯಕ್ಷ ಮಾವಳಿಪುರ ಶ್ರೀನಿವಾಸ್ ಮಾತನಾಡಿ ‘ಕಳೆದ ಬಾರಿ ಆಯ್ಕೆಯಾಗಿದ್ದ ಈ ಭಾಗದ ನಿರ್ದೇಶಕರ ಬಗ್ಗೆ ಹಲವು ದೋಷಾರೋಪಣೆಗಳಿದ್ದು, ಹಾಲು ಉತ್ಪಾದಕ ರೈತರಿಗೆ ಸ್ಪಂದಿಸಿಲ್ಲ ಮತ್ತು ರೈತರ ಮಕ್ಕಳಿಗೆ ಉದ್ಯೋಗ ದೊರಕಿಸಿ ಕೊಡುವಲ್ಲಿ ವಿಫಲರಾಗಿದ್ದಾರೆಂಬ ಹಲವು ಆರೋಪಗಳು ಕೇಳಿ ಬಂದಿವೆ. ಹಾಲು ಉತ್ಪಾದಕ ರೈತರ ಬಗ್ಗೆ ಕಿಂಚಿತ್ತಾದರ ಕಾಳಜಿಯಿಲ್ಲದ ಇಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನಂತರ ಪರಿತಪಿಸುವುದಕ್ಕಿಂತ ರೈತ ಪರ ಹೋರಾಟಗಾರರು, ಸ್ವತಃ ರೈತರು, ಹಾಲು ಉತ್ಪಾದಕರು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಸತತ ಇಪ್ಪತ್ತು ವರ್ಷಗಳ ಅಪಾರ ಅನುಭವ ಹೊಂದಿರುವ ಎಂ.ಸತೀಶ್ ರಂತಹ ಸಜ್ಜನರನ್ನು ಆಯ್ಕೆ ಮಾಡಿದರೆ, ಪಾರದರ್ಶಕ ಆಡಳಿತದ ಜೊತೆಗೆ ಹಾಲು ಉತ್ಪಾದಕ ರೈತರ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯುತ್ತದೆ, ಈ ಕಾರಣಕ್ಕಾಗಿ ಪಿಆರ್ ಆರ್ ರೈತ ಸಂಘ ಎಂ.ಸತೀಶ್ ಅವರನ್ನು ಬೆಂಬಲಿಸುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅರಕೆರೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಸುರಧೇನುಪುರ ರಾಜಣ್ಣ, ರೈತ ಮುಂಖಂಡ ಈಶ್ವರರೆಡ್ಡಿ ಉಪಸ್ಥಿತರಿದ್ದರು.