







ಬೆಂಗಳೂರು ಉತ್ತರ ಸಹಕಾರ ಹಾಲು ಒಕ್ಕೂಟದ ಕಚೇರಿ ಪೂಜೆ :
ಯಲಹಂಕ : ಬಮೂಲ್ ನಿರ್ದೇಶಕರಾಗಿ ವಿವಿಧ ಕ್ಷೇತ್ರಗಳಿಂದ ಆಯ್ಕೆಯಾಗಿರುವ ನೂತನ ನಿರ್ದೇಶಕರು ಅತ್ಯಂತ ಶ್ರದ್ಧೆ, ಪ್ರಾಮಾಣಿಕತೆಯಿಂದ ಹಾಲು ಉತ್ಪಾದಕರ ಸೇವೆ ಮಾಡುವಂತಾಗಬೇಕು, ಹಾಲು ಉತ್ಪಾದಕರ ಸಮಸ್ಯೆಗಳಿಗೆ ಪರಿಹಾರ ಮತ್ತು ಅವರಿಗೆ ದೊರೆಯಬೇಕಾದ ಸವಲತ್ತುಗಳನ್ನು ಶೀಘ್ರಗತಿಯಲ್ಲಿ ಕೊಡಿಸುವ ಕೆಲಸ ಮಾಡುವಂತಾಗಬೇಕು ಎಂದು ಶಾಸಕ ಎಸ್ ಆರ್ ವಿಶ್ವನಾಥ್ ನೂತನ ನಿರ್ದೇಶಕರಿಗೆ ಸಲಹೆ ನೀಡಿದರು.
ರಾಜಾನುಕುಂಟೆಯಲ್ಲಿ ಶುಕ್ರವಾರ ಬೆಂಗಳೂರು ಉತ್ತರ ಸಹಕಾರ ಹಾಲು ಒಕ್ಕೂಟದ ಕಚೇರಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಬೆಂಗಳೂರು ಉತ್ತರ ಸಹಕಾರ ಹಾಲು ಒಕ್ಕೂಟದ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ಸತೀಶ್ ಕಡತನಮಲೆ ಅವರು ರೈತ ಹೋರಾಟದ ಹಿನ್ನೆಲೆಯಿಂದ ಬಂದಿರುವ ಉತ್ಸಾಹಿ ಯುವಕರಾಗಿದ್ದು, ಹಾಲು ಉತ್ಪಾದಕ ರೈತರ ಸಮಸ್ಯೆಗಳ ಬಗ್ಗೆ ಅವರಿಗೆ ಸಮಗ್ರವಾದ ಮಾಹಿತಿಯಿದೆ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿಗಳೂ ಅಗಿರುವ ಅವರಿಂದ ಹಾಲು ಉತ್ಪಾದಕ ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ, ಸವಲತ್ತುಗಳು ದೊರೆಯಲಿವೆ ಎಂಬ ವಿಶ್ವಾಸವಿದೆ ಎಂದರು.
ಅರ್ಕಾವತಿ ಪುನಶ್ಚೇತನಕ್ಕೆ ಅಗತ್ಯ ಸಹಕಾರ ನೀಡುವೆ :
ಅರ್ಕಾವತಿ ನದಿ ಪುನಶ್ಚೇತನಕ್ಕಾಗಿ 2009ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಅರ್ಕಾವತಿ ನದಿಯ ಉಗಮ ಸ್ಥಾನದಿಂದ ಹೆಸರಘಟ್ಟ, ಐವರಕಂಡಪುರ, ಹೆಸರಘಟ್ಟ ಜಲಾಶಯದ ಮಾರ್ಗವಾಗಿ ತಿಪ್ಪಗೊಂಡನಹಳ್ಳಿಯವರೆಗೆ ಸಹಸ್ರಾರು ರೈತರೊಟ್ಟಿಗೆ ಬೃಹತ್ ಪಾದಯಾತ್ರೆಯ ಮೂಲಕ ಜನಾಂದೋಲನ ಮಾಡಿ, ಈ ಕುರಿತು ಜನಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದೆವು. ಅದೇ ವೇಳೆಯಲ್ಲಿ ಅಂದಿನ ಬಿಜೆಪಿ ಸರ್ಕಾರ 25 ಕೋಟಿ ರು.ಗಳ ಅನುದಾನ ನೀಡಿತ್ತು, ಅದರಲ್ಲಿ ಅರ್ಕಾವತಿ ನದಿ ಹರಿಯುವ ಮಾರ್ಗವನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿದ್ದರ ಪರಿಣಾಮವಾಗಿ ಬತ್ತಿ ಹೋಗಿದ್ದ ಹೆಸರಘಟ್ಟ ಜಲಾಶಯಕ್ಕೆ ಅಂದಿನಿಂದ ಇಂದಿನವರೆಗೂ ಪ್ರತಿವರ್ಷ ನೀರು ಹರಿಯುತ್ತಿದ್ದು, ಸದಾ ನೀರು ಸಂಗ್ರಹವಾಗುತ್ತಿದೆ. ಇದೀಗ ರಾಜ್ಯ ಸರ್ಕಾರ ಅರ್ಕಾವತಿ ನದಿ ಪುನಶ್ಚೇತನಕ್ಕೆ ಮುಂದಾಗಿದ್ದು, ಈ ಕುರಿತಂತೆ ತಜ್ಞರ ಸಮಿತಿ ರಚಿಸಿರುವುದು ಸ್ವಾಗತಾರ್ಹ, ಬತ್ತಿ ಹೋದ ಹಲವು ನದಿಗಳನ್ನು ಪುನಶ್ಚೇತನ ಗೊಳಿಸುವ ಮೂಲಕ ನದಿಗಳನ್ನು ಪುನರುಜ್ಜೀವನ ಗೊಳಿಸಿರುವ ಹಲವು ನಿದರ್ಶನಗಳು ನಮ್ಮ ದೇಶದಲ್ಲಿವೆ. ಅರ್ಕಾವತಿ ನದಿ ಪುನಶ್ಚೇತನಕ್ಕೆ ನಮ್ಮ ಭಾಗದ ರೈತರು ಮತ್ತು ನನ್ನ ಅಗತ್ಯ ಸಹಕಾರ ಇರಲಿದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಬಮೂಲ್ ಬೆಂಗಳೂರು ಉತ್ತರ ಮತ ಕ್ಷೇತ್ರದ ನೂತನ ನಿರ್ದೇಶಕ ಸತೀಶ್ ಕಡತನಮಲೆ ಮಾತನಾಡಿ ‘ಬೆಂ.ಉತ್ತರ ಮತ ಕ್ಷೇತ್ರ ವ್ಯಾಪ್ತಿಯಲ್ಲಿ 181 ಹಾಲು ಉತ್ಪಾದಕರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ 16 ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಬೆಂ. ಉತ್ತರ ಮತ ಕ್ಷೇತ್ರ ವ್ಯಾಪ್ತಿಗೆ ಯಲಹಂಕ ಕ್ಷೇತ್ರ, ದೊಡ್ಡಬಳ್ಳಾಪುರ ಕ್ಷೇತ್ರದ ಮಧುರೆ ಹೋಬಳಿ, ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿ ಮತ್ತು ದಾಸರಹಳ್ಳಿ ಕ್ಷೇತ್ರದ ಕೆಲವು ಹಾಲು ಉತ್ಪಾದಕರ ಸಹಕಾರ ಸಂಘಗಳು ಬರುತ್ತವೆ. ಈ ಭಾಗದಿಂದ ಪ್ರತಿದಿನ ಸರಾಸರಿ 1,12,150 ಲೀಟರ್ ಹಾಲು ಸಂಗ್ರವಾಗುತ್ತಿದ್ದು, ಬಮೂಲ್ ನಿಂದ ಒಟ್ಟು 18.5 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತದೆ. ಇದರಲ್ಲಿ ಮೊಸರು, ಬೆಣ್ಣೆ, ತುಪ್ಪ, ಮೈಸೂರು ಪಾಕ್, ಪೇಡಾ ಸೇರಿದಂತೆ ಹಲವು ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಬೆಂ.ಉತ್ತರ ಮತ ಕ್ಷೇತ್ರದಿಂದ ಹಾಲು ಉತ್ಪಾದಕ ರೈತರಿಗೆ 199 ಕ್ವಿಂಟಾಲ್ ಮೇವಿನ ಮುಸುಕಿನ ಜೋಳ, 29.6 ಕ್ವಿಂಟಾಲ್ ಬಹು ಕಟಾವು ಮೇವಿನ ಜೋಳವನ್ನು ಉಚಿತವಾಗಿ ವಿತರಿಸಿದ್ದೇವೆ. ಪ್ರತಿ ತಿಂಗಳು 750 ಟನ್ ನಂದಿನಿ ಪಶು ಆಹಾರ, 75 ಟನ್ ನಂದಿನಿ ಖನಿಜ ಮಿಶ್ರಣ ವಿತರಿಸಲಾಗುತ್ತಿದೆ. ಪ್ರತಿ ಸಂಘಗಳಲ್ಲಿ ಗಣಕಯಂತ್ರ ಅಳವಡಿಸಿದ್ದು, ಸ್ವಯಂಚಾಲಿತ ಹಾಲು ಶೇಖರಣೆ ಯಂತ್ರ ನೀಡಲಾಗಿದೆ. ಹಾಲು ಉತ್ಪಾದಕರು ಸಂಘಕ್ಕೆ ಪೂರೈಸುವ ಹಾಲು ಮತ್ತು ಹಾಲಿನ ಗುಣಮಟ್ಟವನ್ನು ಏಕರೂಪ ತಂತ್ರಾಂಶದಲ್ಲಿ ದಾಖಲಿಸಿ, ಅದೇ ವೇಳೆ ಹಾಲು ಉತ್ಪಾದಕರಿಗೆ ಎ.ಎಂ.ಸಿ.ಎಸ್. ಫಾರ್ಮರ್ಸ್ ಆಫ್ ಮುಖಾಂತರ ಮಾಹಿತಿ ನೀಡಲಾಗುತ್ತದೆ. ನೂತನ ನಿರ್ದೇಶಕನಾಗಿ ಮಾರುಕಟ್ಟೆಯಲ್ಲಿ ನಂದಿನಿ ಉತ್ಪನ್ನಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ನಂದಿನಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಕಲ್ಪಿಸಲು ಒತ್ತು ನೀಡಿ, ತನ್ಮೂಲಕ ರೈತರಿಗೆ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಮಾತನಾಡಿದರು.
ಕಾರ್ಯಕ್ರಮವನ್ನು ಗೋಪೂಜೆ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಅಹಮದಾಬಾದ್ ವಿಮಾನ ದುರಂತದಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆಯ ಮೂಲಕ ಸಂತಾಪ ಸೂಚಿಸಲಾಯಿತು. ಹಾಲು ಉತ್ಪಾದಕ ರೈತರಿಗೆ ಮೇವಿನ ಮುಸುಕಿನ ಜೋಳದ ಪ್ಯಾಕೆಟ್ ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರು ಡೈರಿ ಮಾಜಿ ಅಧ್ಯಕ್ಷ ದಿಬ್ಬೂರು ಜಯಣ್ಣ, ಹಿರಿಯ ಬಿಜೆಪಿ ಮುಖಂಡರಾದ ಎಸ್.ಎನ್. ರಾಜಣ್ಣ, ಡಿ.ಜಿ.ಅಪ್ಪಯ್ಯಣ್ಣ, ದೊಡ್ಡ ಬಸವರಾಜು, ದೊಡ್ಡಜಾಲ ಶ್ರೀನಿವಾಸಯ್ಯ, ಬೆಂ.ಉತ್ತರ ಶಿಬಿರದ ಮುಖ್ಯಸ್ಥರಾದ ಪ್ರಸನ್ನ ವಿ.ಪಿ., ಬಿಜೆಪಿ ಮುಖಂಡರಾದ ವಿಜಯಕುಮಾರ್, ಚೊಕ್ಕನಹಳ್ಳಿ ವೆಂಕಟೇಶ್, ಕೊಳಗಾನಹಳ್ಳಿ ವೆಂಕಟೇಶ್, ಆನಂದ್ ಮೂರ್ತಿ, ಕೆ.ಆರ್.ತಿಮ್ಮೇಗೌಡ, ಜಿ.ಜೆ. ಮೂರ್ತಿ, ಎಚ್.ಸಿ.ರಾಜೇಶ್, ಅದ್ದೆವಿಶ್ವನಾಥಪುರ ಮಂಜುನಾಥ್, ನಾಗರಾಜ್(ಬಾಬು), ಟಿ.ಮುನಿರೆಡ್ಡಿ, ಎಸ್.ಜಿ.ನರಸಿಂಹಮೂರ್ತಿ, ಮುನಿದಾಸಪ್ಪ, ಬಿ.ಶ್ರೀನಿವಾಸಯ್ಯ, ಅನಿಲ್ ಬೈರಾಪುರ, ರಾಜೇಂದ್ರ ಬೈರಾಪುರ, ಸೇರಿದಂತೆ ಬೆಂಗಳೂರು ಉತ್ತರ ಮತಕ್ಷೇತ್ರ ವ್ಯಾಪ್ತಿಯ ಹಾಲು ಉತ್ಪಾದಕರ ಸಹ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಬಮೂಲ್ ಸಿಬ್ಬಂದಿಗಳಿದ್ದರು.