



‘ಜಯ ಕರ್ನಾಟಕ ಜನಪರ ವೇದಿಕೆ’ಯ ರಾಜ್ಯ ಕಾರ್ಯಾಧ್ಯಕ್ಷರಾಗಿ ಹೆಚ್.ರಾಮಚಂದ್ರಯ್ಯ ನೇಮಕ :
ಬೆಂಗಳೂರು : ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷರಾಗಿ ಹೆಚ್.ರಾಮಚಂದ್ರಯ್ಯ ನೇಮಕಗೊಂಡಿದ್ದಾರೆ.
ನಗರದಲ್ಲಿನ ಕೇಂದ್ರ ಕಛೇರಿ ಆವರಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿ ಅವರು ಹಿರಿಯ ಕನ್ನಡಪರ ಹೋರಾಟಗಾರ ಹೆಚ್.ರಾಮಚಂದ್ರಯ್ಯ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದರು.
ಈ ವೇಳೆ ನೂತನ ಕಾರ್ಯಾಧ್ಯಕ್ಷ ಹೆಚ್.ರಾಮಚಂದ್ರಯ್ಯ ಮಾತನಾಡಿ ‘ಪರಿಸರವಾದಿಗಳು, ಕನ್ನಡ ಪರ ಹೋರಾಟಗಾರರು ಮತ್ತು ಸಂಸ್ಥಾಪಕ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿಯವರ ನೇತೃತ್ವದ ಜಯಕರ್ನಾಟಕ ಜನಪರ ವೇದಿಕೆಯು ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ, ಶಿಕ್ಷಣ, ರೈತರ, ಯೋಧರ, ಮಹಿಳೆಯರ, ಕಾರ್ಮಿಕರ, ದೀನದಲಿತರ ಪರವಾಗಿ ಕಳೆದ ಕೆಲವು ದಶಕಗಳಿಂದ ಚಳುವಳಿಗಳನ್ನು ರೂಪಿಸಿ, ಅನುಭವಿಗಳು, ಬುದ್ದಿಜೀವಿಗಳು, ಪರಿಸರವಾದಿಗಳು, ಸಾಹಿತಿಗಳು ಹೀಗೆ ಎಲ್ಲಾ ವರ್ಗದ ಹೋರಾಟಗಾರರ ಮತ್ತು ಸ್ವಾಭಿಮಾನಿ ಕಾರ್ಯಕರ್ತರ ಜೊತೆಯಲ್ಲಿ ಪರಿಸರ ಸಂರಕ್ಷಣೆಯ ಧ್ಯೇಯದೊಂದಿಗೆ, ಸಂವಿಧಾನಾತ್ಮಕವಾಗಿ ಕರ್ನಾಟಕದಲ್ಲಿ ಸೇವಾ ಕೈಂಕರ್ಯದಲ್ಲಿ ತೊಡಗಿರುವುದು ಹೆಮ್ಮೆಯ ವಿಷಯ. ರಾಜ್ಯಾಧ್ಯಕ್ಷರಾದ ಜೆ.ಶ್ರೀನಿವಾಸ್ ಅವರೊಂದಿಗೆ ರಾಜ್ಯದಲ್ಲಿ ಸಂಘವನ್ನು ಇನ್ನೂ ಹೆಚ್ಚು ಬಲಗೊಳಿಸುವ ನಿಟ್ಟಿನಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕರೆದೊಯ್ಯುವುದರ ಜೊತೆಗೆ ಸಂಘದ ಗೌರವ, ಘನತೆಗೆ ಕುತ್ತು ಬಾರದಂತೆ ನಡೆದುಕೊಳ್ಳುವುದಾಗಿ ತಿಳಿಸಿದರು.
ಇದೇ ವೇಳೆ ನೂತನ ಕಾರ್ಯಾಧ್ಯಕ್ಷ ಹೆಚ್.ರಾಮಚಂದ್ರಯ್ಯ ಅವರನ್ನು ಸಂಸ್ಥಾಪಕ ಅಧ್ಯಕ್ಷರು, ರಾಜ್ಯಾಧ್ಯಕ್ಷರು ಸೇರಿದಂತೆ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು, ಮಹಿಳಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸನ್ಮಾನಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಸಂಘದ ಪ್ರಧಾನ ಸಂಚಾಲಕ ಟಿ.ಪ್ರಕಾಶ್ ಗೌಡ, ರಾಜ್ಯ ಉಪಾಧ್ಯಕ್ಷ ಬಾಲಚಂದರ್, ಹಾಲಪ್ಪ ವರವಿ, ಸಲಹೆಗಾರ ಕುಮಾರಸ್ವಾಮಿ, ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಗೋಪಿ, ಕಿರಣ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಜಿ.ಎಸ್.ಪುಷ್ಪಲತಾ, ಬೆಂ. ಜಿಲ್ಲಾಧ್ಯಕ್ಷ ಪಿ.ಲೋಕೇಶ್, ಮಹಿಳಾ ಘಟಕದ ಅಧ್ಯಕ್ಷೆ ಸುನಂದಾ ರೆಡ್ಡಿ, ಬೆಂ.ಜಿಲ್ಲಾ ಪದಾಧಿಕಾರಿಗಳು, ಕ್ಷೇತ್ರಾಧ್ಯಕ್ಷರು ಸೇರಿದಂತೆ ಇನ್ನಿತರರಿದ್ದರು.
