ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯ ಕೊಡುಗೆಯೂ ಇದೆ ಸಚಿವ ಸುಧಾಕರ್

ಚಿಕ್ಕಬಳ್ಳಾಪುರ : ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದು, ಇದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೊಡುಗೆಯೂ ಇದ್ದು, ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಖ್ಯಾತಿಯ ವಿಧುರಾಶ್ವತ್ಥವೂ ಇರುವುದು ಹೆಮ್ಮೆಯ ಸಂಗತಿ ಎಂದು ಉನ್ನತ ಶಿಕ್ಷಣ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಜಿಲ್ಲಾ ಕೇಂದ್ರದ ಸರ್.ಎಂ.ವಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 77 ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಅರ್ಥಪೂರ್ಣವಾಗಿ ನಡೆಯಿತು. ದ್ವಾಜಾರೋಹಣ ನಡೆಸಿಕೊಟ್ಟು ಪಥಸಂಚಲನ ಸ್ವೀಕರಿಸಿದ ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಹಾಗು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್
ಪರರ ಆಳ್ವಿಕೆಯಿಂದ ದೇಶವನ್ನು ಬ್ರಿಟೀಶರಿಂದ ಮುಕ್ತಮಾಡಲು ಲಕ್ಷಾಂತರ ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರರು ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ. ಇದನ್ನು ವಿದ್ಯಾರ್ಥಿ ಯುವ ಜನರು ಅರಿತು ದೇಶಭಕ್ತಿ, ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು. ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಖ್ಯಾತಿಯ ವಿಧುರಾಶ್ವತ್ಥದ ಪಾತ್ರವೂ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಮಹತ್ವ ಮತ್ತು ಗಮನಾರ್ಹವಾಗಿದ್ದು, ವಿಧುರಾಶ್ವತ್ಥದ ಇತಿಹಾಸವನ್ನು ಮಕ್ಕಳಿಗೆ ಶಿಕ್ಷಕರು ಮನದಟ್ಟು ಮಾಡಬೇಕು,ಅಲ್ಲಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಸ್ವಾತಂತ್ರ್ಯ ಸಂಗ್ರಾಮದ ಮಜಲುಗಳನ್ನು ತಿಳಿಸಿಕೊಡಬೇಕು. ವಿಧುರಾಶ್ವತ್ಥವು ಪ್ರತಿಯೊಬ್ಬರೂ ನೋಡಲೇಬೇಕಾದ ಐತಿಹಾಸಿಕ ಕ್ಷೇತ್ರ ಎಂದು ಬಣ್ಣಿಸಿದರು.
ಭಾರತದ ದೇಶದ ಶಕ್ತಿ ಮಹಾತ್ಮ ಗಾಂಧಿಜಿ ಅವರು ನಮಗೆ ಹಾಕಿ ಕೊಟ್ಟಿರುವ ಅಹಿಂಸೆ ಎಂಬ ‘ಶಾಂತಿ’ ಮಂತ್ರ.1857 ರಿಂದ 1947 ರವರೆಗೆ ವಿವಿಧ ಹಂತದ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ರಾಜಮಹಾರಾಜರು, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ದೇವಿ ಸೇರಿದಂತೆ ಹಲವರು ವೀರ ವನಿತೆಯರ ಬಲಿದಾನವು ಸ್ವಾತಂತ್ರ್ಯ ಹೋರಾಟದಲ್ಲಿ ಸೇರಿದೆ.
ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡ ನಂತರ ಭಾರತ ಹಲವಾರು ಮೈಲಿಗಲ್ಲನ್ನು ಕಂಡಿದೆ. ಆರ್ಥಿಕತೆ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಮೂಲ ಸೌಕರ್ಯ ಸೇರಿದಂತೆ ಸಾಮಾಜಿಕ ನ್ಯಾಯದತ್ತ ದೇಶ ಹೆಜ್ಜೆಯಿಟ್ಟಿದೆ.ಭಾರತದ ಇಂದಿನ ಸಾಧನೆಗೆ ಬರಲು ಇದು, ಇಂದು-ನಿನ್ನೆ ನಡೆದ ಜಾದೂವಲ್ಲ. ಇದಕ್ಕೊಂದು ಇತಿಹಾಸವಿದೆ. ಮಹಾತ್ಮ ಗಾಂಧಿ ಯವರ ಆದರ್ಶ, ಅಂಬೇಡ್ಕರ್ ಅವರ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಭಾರತ ಇಂದು ಭವ್ಯತೆಯನ್ನು ಗಳಿಸಿದೆ ಎಂದು ತಿಳಿಸಿದರು.ಚಿಕ್ಕಬಳ್ಳಾಪುರ ಜಿಲ್ಲೆಯು ಅನೇಕ ಧೀಮಂತ ವ್ಯಕ್ತಿಗಳಿಗೆ ಜನ್ಮ ನೀಡಿದ್ದು, ಈ ಪೈಕಿ ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಡಾ. ಸಿಎನ್ಆರ್ ರಾವ್ ಅವರುಗಳು ಭಾರತರತ್ನ ಪ್ರಶಸ್ತಿಗೆ ಭಾಜನರಾಗಿರುವುದು ಜಿಲ್ಲೆಯೇ ಹೆಮ್ಮೆ ಪಡುವಂತಹ ಸಂಗತಿ. ಇದಲ್ಲದೆ ಕೈವಾರದ ಯೋಗಿ ನಾರೇಯಣ ಯತೀಂದ್ರರು ಜನಪರ ಸಂತರಾಗಿದ್ದರು. ವಿಶ್ವವಿಖ್ಯಾತ ಎಂಜಿನಿಯರ್ ಸರ್. ಎಂ ವಿಶ್ವೇಶ್ವರಯ್ಯ, ಖ್ಯಾತ ಶ್ರೇಷ್ಠ ರಸಾಯನಶಾಸ್ತ್ರ ವಿಜ್ಞಾನಿ ಡಾ. ಸಿ.ಎನ್.ಆರ್.ರಾವ್ ನಮ್ಮ ಜಿಲ್ಲೆಯ ಪ್ರತಿಭೆಗಳಾಗಿದ್ದಾರೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಇನ್ನು ಸ್ವಾತಂತ್ರ್ಯ ದಿನದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮುನ್ನ ವಿವಿಧ ಶಾಲೆಗಳ, ಇಲಾಖೆಯ ತಂಡಗಳು ನಡೆಸಿದ ಪಥ ಸಂಚಲನ ವೀಕ್ಷಿಸಿದರು.
ವಿವಿಧ ಪೋಲಿಸ್ ಉಪಾಧೀಕ್ಷಕ ಮಂಜುನಾಥ್ ಪಥ ಸಂಚಲನದ ಸೂಚನೆಗಳನ್ನು ಅಪ್ಪಟ ಕನ್ನಡದಲ್ಲಿಯೇ ನೀಡುವ ಮೂಲಕ ಗಮನ ಸೆಳೆದರು. ಚಿಕ್ಕಬಳ್ಳಾಪುರ ನಗರದ ಸರ್.ಎಂ.ವಿ ಶಾಲೆ,ಪಂಚಗಿರಿ ಬೋದನಾ ಶಾಲೆ,ಬ್ರೈಟ್ ಶಾಲೆ,ಸರ್ಕಾರಿ ಬಾಲಕಿಯರ ಶಾಲೆ,ಕೆ.ವಿ ಶಿಕ್ಷಣ ಕಾಲೇಜು,ಪೂರ್ಣ ಪ್ರಜ್ಞ ಪ್ರೌಢ ಶಾಲೆ,ನ್ಯೂಟನ್ ಗ್ರಾಮರ್ ಪ್ರೌಢ ಶಾಲೆ,ಸಂತ ಜಾನ್ಸ್ ಪ್ರೌಢ ಶಾಲೆ, ನ್ಯು ಹೊರೈಜನ್ ಪ್ರೌಢ ಶಾಲೆ,ಸರ್ಕಾರಿ ಪ್ರೌಢ ಶಾಲೆ,ಪ್ರಸಿಡೆನ್ಸಿ ಪ್ರೌಢ ಶಾಲೆ, ಮತ್ತು ಇಂಡಿಯನ್ ಪಬ್ಲಿಕ್ ಶಾಲೆಯ ಮಕ್ಕಳು ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆ,ಅಗ್ನಿಶಾಮಕ ದಳ, ಮಹಿಳಾ ಪೊಲೀಸ್ ಪಡೆ, ಅರಣ್ಯ,ಗೃಹ ರಕ್ಷಕ ದಳ, ಅಗ್ನಿಶಾಮಕ ದಳ ಹಾಗೂ ಸ್ಕೌಟ್ ಅಂಡ್ ಗೈಡ್, ಎನ್.ಸಿ.ಸಿ ತಂಡದವರು ಪಥ ಸಂಚಲನ ನಡೆಸಿದರು. ಸಂತ ಜೋಸೆಫ್ ಕಾನ್ವೆಂಟ್,ನ್ಯೂ ಕ್ವಯಟ್ ಕಾರ್ನರ್ ಪ್ರೌಢ ಶಾಲೆ, ಹೊರೈಜನ್ ಪ್ರೌಢ ಶಾಲೆ,ಪ್ರಶಾಂತಿ ಬಾಲ ಮಂದಿರ ಮಕ್ಕಳು ಹಾಗೂ ಹೊಸ ಹುಡ್ಯದ ವಿಷ್ಣು ಪ್ರಿಯ ಶಾಲೆಗಳ ವಿದ್ಯಾರ್ಥಿಗಳು ರಾಷ್ಟ್ರಭಕ್ತಿ ಮತ್ತು ರಾಷ್ಟ್ರಭಕ್ತಿಯನ್ನು ಬಿಂಬಿಸುವ ಸಾಮೂಹಿಕ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಇದೇ ಮೊದಲ ಬಾರಿಗೆ ಚಿಂತಾಮಣಿ ಯೋಗ ಕೇಂದ್ರದ ಯೋಗ ಪಟುಗಳಾದ ಎಂ.ನವನೀತ್,ಕೆ.ಯಾಶಿಕಾ ಬಂದಿತಾ ಮತ್ತು ಎಸ್,ಆರ್ ಕಾರುಣ್ಯ ಅವರಿಂದ ಮೂಡಿಬಂದ ಯೋಗ ಪ್ರದರ್ಶನ ಸಾರ್ವಜನಿಕರು ಮತ್ತು ಗಣ್ಯರನ್ನು ನಿಬ್ಬೆರಗುಗೊಳಿಸಿತು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಾಯಿತು. ಸಾಹಿತಿ ಗೋಪಾಲ ಗೌಡ ಕಲ್ವಮಂಜಲಿ, ಮಂಜುನಾಥ್, ಚಿರಂತ್ ಎಂ ಕಶ್ಯಪ್ ವಲಿಪಾಷ ಮತ್ತು ವೈ.ಎನ್ ರಾಮಚಂದ್ರ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು
ಆಯುಷ್ಮಾನ್ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡಿದ ನಕ್ಕಲಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಶ್ರೀ ಸರಳ ಮೆಮೋರಿಯಲ್ ಆಸ್ಪತ್ರೆ ಮುದ್ದೇನಹಳ್ಳಿ ಮುಖ್ಯಸ್ಥರಿಗೆ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು.
ಎಸ್.ಎಸ್,ಎಲ್.ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಜಿಲ್ಲೆಯ ವಿದ್ಯಾರ್ಥಿಗಳಾದ ಅಗಲಗುರ್ಕಿಯ ಬಿ,ಜಿ.ಎಸ್ ಶಾಲೆಯ ಜಿ.ಚೈತ್ರ, ಎನ್ ಯಶಸ್ ಗೌಡ ಮತ್ತು ಎ.ಎಂ ಯಶ್ವಂತ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಬದಲ್ಲಿ ಶಾಸಕ ಪ್ರದೀಪ್ ಈಶ್ವರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿ.ಪಂ ಸಿಇಒ ಪ್ರಕಾಶ್.ಜಿ. ನಿಟ್ಟಾಲಿ, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಡಿ.ಎಲ್.ನಾಗೇಶ್.ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಡಿ.ಹೆಚ್ ಅಶ್ವಿನ್, ಜಿ.ಪಂ.ಉಪಕಾರ್ಯದರ್ಶಿ ಡಾ.ಎನ್.ಬಾಸ್ಕರ್, ಡಿವೈಎಸ್ ಪಿ ಶಿವಕುಮಾರ್, ಮತ್ತು ಇತರರು ಇದ್ದರು.

Leave a Reply

Your email address will not be published. Required fields are marked *