ನಾವು ತಿನ್ನುವ ಆನ್ನ, ನಾವು ಕುಡಿಯುವ ನೀರು ನಾವು ಉಸಿರಾಡುವ ಗಾಳಿ ನಾವು ಉಡುವ ಬಟ್ಟೆ ಎಲ್ಲವೂ ಆಕಾಶ ಮತ್ತು ಭೂಮಿಯ ಪರಸ್ಪರ ಸಮ್ಮಿಲನದಿಂದ ತಯಾರಿಸಲ್ಪಡುವ ಉತ್ಪನ್ನಗಳು. ನಮ್ಮಲ್ಲಿ ಇರುವ ಚೇತನವೂ ಸಹ ಈ ಭೂಮಿ ಮತ್ತು ಆಕಾಶಗಳ ಶಿಶುವೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಭೂಮಿಯ ಮೇಲಿನ ಸಮುದ್ರದ ನೀರು ಸೂರ್ಯನ ಶಾಖಕ್ಕೆ ಆವಿಯಾಗಿ ಮೋಡವಾಗಿ ಮಳೆಯಾಗಿ, ಧರೆಗೆ ಸುರಿದು, ಆ ಮಳೆಯ ಜೊತೆಗೆ ಈ ಭೂಮಿಯ ಮೇಲಿನ ಅನೇಕ ಜೀವರಸಗಳನ್ನೂ ಹೀರಿ ಅದನ್ನು ಮತ್ತೆ ಮಳೆಯ ಜೊತೆಗೆ ಈ ಭೂಮಿಗೆ ಸುರಿಸಿ, ಇಲ್ಲಿ ಜೀವಿಗಳಿಗೆ ಎಲ್ಲ ಅವಶ್ಯಕ ವಸ್ತುಗಳನ್ನೂ ಒದಗಿಸುವ ಈ ಭೂಮಿ ಮತ್ತು ಸೂರ್ಯನ ಪರಸ್ಪರ ಸಂಬಂಧ ಅತೀ ಅಮೋಘವಲ್ಲವೇ ವಾಚಕರೆ. ಅತೀ ಸೂಕ್ಷ್ಮವಾದ ಪ್ರಕ್ರಿಯೆ ಇದು.ನಾವು ತಿನ್ನುವ ಆಹಾರದ ವೈವಿಧ್ಯತೆಯನ್ನು ನೋಡಿ. ಎಷ್ಟೊಂದು ವಿಧದ ಕಾಳುಗಳು, ದಾನ್ಯಗಳು, ಸೊಪ್ಪುಗಳು, ಕಾಯಿಪಲ್ಲೆಗಳು, ಹಣ್ಣುಗಳು, ಗೆಡ್ಡೆ ಗೆಣಸುಗಳು, ಪ್ರಾಣಿಗಳಿಗೆ ಮೀಸಲಾದ ಹಲವಾರು ಆಹಾರಗಳು. ಮನುಷ್ಯರು ತಿನ್ನುವಂಥ ಆಹಾರಗಳೇ ಬೇರೆ ಬೇರೆ. ಈ ಎಲ್ಲ ಆಹಾರಗಳೂ ಬಿಸಿಲು, ಶಾಖ, ಮಳೆ ಭೂಮಿ ಗಿಡ ಮರಗಳು ಇವುಗಳ ಪರಸ್ಪರ ಸಂಬಂಧದಿಂದಲೇ ಸಾಧ್ಯ. ತೈತ್ತರೀಯ ಉಪನಿಷತ್ತು ಈ ವಿಷಯವನ್ನು ” ಆಕಾಶಾದ್ವಾಯು: ವಾಯೋರಗ್ನಿ: ಅಗ್ನೇರಾಪ: ಅದ್ಭ್ಯಃ ಪೃಥಿವೀ ಪೃಥಿವ್ಯಾ ಓಷದಯಃ ಓಷಧೀಭ್ಯೋನ್ನಂ ಅನ್ನಾತ್ ಪುರುಷಃ ” ಎಂದು ಈ ಕಗ್ಗದಲ್ಲಿ, ಈ ಉಪನಿಷತ್ತಿನ ವಿಷಯವನ್ನು ಸುಲಲಿತವಾಗಿ ಗುಂಡಪ್ಪನವರು ಪ್ರತಿಪಾದಿಸಿದ್ದಾರೆ.ಪ್ರಕೃತಿಯಲ್ಲಿ ಪಂಚಭೂತಗಳ ಪರಸ್ಪರ ಒಡಂಬಡಿಕೆಯಿಂದಲೇ ನಮ್ಮ ನಿಮ್ಮ ಮತ್ತು ಸಕಲ ಜೀವರಾಶಿಗಳ ಅಸ್ತಿತ್ವ. ಆಕಾಶದಲ್ಲಿರುವ ವಾಯು ಸೂರ್ಯನ ಶಾಖದಿಂದ ಉಂಟಾದ ಆವಿಯನ್ನು ಹೂವನ್ನೆತ್ತುವಂತೆ ಎತ್ತಿ ನಭಕ್ಕೆ ಒಯ್ದು, ಮೋಡವಾಗಿಸಿ, ತನ್ನ ಶಕ್ತಿಯಿಂದಲೇ ಆ ಮೋಡಗಳನ್ನು ಒಗ್ಗೂಡಿಸಿ, ಹಾಗೆ ಸತ್ವಯುತವಾದ ಮೋಡಗಳಿಂದ ಧರೆಗೆ ಮಳೆಯನ್ನೂ ಸುರಿಸುತ್ತದೆ. ಹಾಗೆ ಸುರಿಸಿದ ಮಳೆಯನ್ನ್ನು ಈ ಧರೆ ಹೀರಿ ಅದರ ಸತ್ವವನ್ನು ಕರಗಿಸಿಕೊಂಡು ತನ್ನೊಳಗಿನ ಸತ್ವಗಳನ್ನೂ ಸೇರಿಸಿ, ಗಿಡಮರಗಳ ಬೆಳವಣಿಗೆಗೆ ಕಾರಣವಾಗಿ ಆಹಾರ ಉತ್ಪತ್ತಿಗೆ ಕಾರಣವಾಗಿ ಆ ಆಹಾರ ರೂಪದಲ್ಲಿ ಶಕ್ತಿಯನ್ನು, ಜಗತ್ತಿನ ಎಲ್ಲ ಜೀವಿಗಳಿಗೆ ಒದಗಿಸುತ್ತದೆ. ಹಾಗೆ ಸಿಕ್ಕ ಶಕ್ತಿಯಿಂದ ಮತ್ತು ಸತ್ವದಿಂದಲೇ ಇಲ್ಲಿ ಜೀವಿಗಳಿಗೆ ಜೀವನ. ಇಲ್ಲದಿದ್ದರೆ ಇಲ್ಲ.ನಾವು ಇದನ್ನೆಲ್ಲಾ ಅನುಭವಿಸುತ್ತಾ, ಒಂದಿಷ್ಟೂ ಕೃತಜ್ಞತೆ ಇಲ್ಲದೆ ಇಡೀ ಭೂಮಿಯ ನಾಶಕ್ಕೆ ಎಷ್ಟು, ಏನೇನು ಅವಶ್ಯವೋ ಅದನ್ನೆಲ್ಲ ಸಿದ್ಧಪಡಿಸಿಕೊಂಡು ತನ್ನ ನಾಶಕ್ಕೆ ತಾನೇ ತಯಾರಿ ನಡೆಸಿರುವ ನಾವು ಸತ್ಯವಾಗಲೂ ಸಂಸ್ಕಾರ ವಿಲ್ಲದವರಂತೆ ವರ್ತಿಸುವುದು ಬಹಳ ಖೇದನೀಯ. ನಾವೆಲ್ಲ ಈ ಪ್ರಕೃತಿಗೆ ನಮ್ಮ ಮೇಲಿನ ಪ್ರೀತಿಗೆ ಕೃತಜ್ಞತೆಯನ್ನು ಮಾತ್ರ ತೋರಬೇಕು. ಇದನ್ನು ನಮಿಸಬೇಕು. ಇದನ್ನು ಸಂತೋಷದಿಂದ ಅನುಭವಿಸುತ್ತಾ ಇದನ್ನೆಲ್ಲಾ ಕಾಪಾಡುವ ಪ್ರಯತ್ನ ಮಾಡಬೇಕು.