ಈರಣ್ಣನಿಗೆ ಮದುವೆಯಾಗಿ ಪತ್ನಿ ಮೃತಪಟ್ಟಿದ್ದಾಳೆ. ಆದರೆ ಒಂದು ಹೆಣ್ಣು ಮತ್ತು ಒಂದು ಗಂಡು ಮಕ್ಕಳಿದ್ದಾರೆ. ಹೆಣ್ಣು ಮಗಳನ್ನು ಸ್ಥಿತಿವಂತ ಕುಟುಂಬಕ್ಕೆ ಕೊಟ್ಟು ಮದುವೆ ಮಾಡಿದ್ದಾರೆ. ಮಗನೂ ಸಹಾ ಆರ್ಥಿಕವಾಗಿ, ಸಾಮಾಜಿಕವಾಗಿ ಚನ್ನಾಗಿದ್ದಾನೆ. ಕಳೆದ 5-6 ವರ್ಷಗಳಿಂದ ಈರಣ್ಣ ಒಬ್ಬೊಂಟಿಯಾಗಿ ಜೀವನ ಸಾಗಿಸುತ್ತಿದ್ದಾನೆ. ಮಗಳು, ಮಗ ಹಾಗೂ ಬಂಧು-ಬಳಗ ಯಾರೂ ಸಹಾ ಈರಣ್ಣನನ್ನು ನೋಡಿಕೊಳ್ಳುತ್ತಿಲ್ಲ.
ಇನ್ನು ಈರಣ್ಣನಿಗೆ 1 ಎಕರೆ ಬೆಲೆಬಾಳುವ ಜಮೀನಿದ್ದು, ಮಕ್ಕಳ ಹೆಸರಿಗೆ ವಿಲ್ ಮಾಡಿದ್ದಾನೆ. ಸುಮಾರು 25 ಲಕ್ಷ ರೂಪಾಯಿಗಳನ್ನು ಮಗಳಿಗೆ ಧಾರೆ ಎರೆದಿದ್ದಾನೆ. ಆದರೂ ಮಗಳು ತಂದೆಯ ಮೇಲೆ ಗಲಾಟೆ ಮಾಡಿ, ಇರೋ ಆಸ್ತಿಯನ್ನು ತನಗೆ ಬರೆದುಕೊಡುವಂತೆ ಕಿರುಕುಳ ನೀಡಿ, ಗಲಾಟೆ ಮಾಡಿದ್ದಾಳಂತೆ. ಇನ್ನು ಈರಣ್ಣನಿಗೆ ಹೃದಯ ಸಮಸ್ಯೆ, ಬಿಪಿ, ಶುಗರ್ ಇದ್ದು, ಲಾಲನೆ, ಪಾಲನೆ, ಪೋಷಣೆ ಮಾಡಲು ಯಾರೂ ಇಲ್ಲ. ಇದರಿಂದ ಮತ್ತೊಂದು ಮದುವೆ ಮಾಡಿಕೊಳ್ಳಲು ನಿರ್ಧಾರ ಮಾಡಿ, ನಿನ್ನೆ ಅನುಶ್ರೀಯನ್ನು ಮದುವೆ ಮಾಡಿಕೊಂಡಿದ್ದಾನೆ.

ಇನ್ನು ಸೊಲ್ಲಾಪುರ ಮೂಲದ ಅನುಶ್ರೀಗೆ ಅಪ್ಪ, ಅಮ್ಮ, ಬಂಧು-ಬಳಗ ಯಾರೂ ಇಲ್ಲವಂತೆ. ಆದರೆ ಪ್ರೀತಿಸಿದ ವ್ಯಕ್ತಿಯೊಬ್ಬನನ್ನು ನಂಬಿ, ಆತನ ಜೊತೆ ಪ್ರೇಮ ವಿವಾಹ ಮಾಡಿಕೊಂಡಿದ್ದಳು. ಅನುಶ್ರೀಗೆ 6 ವರ್ಷದ ಒಬ್ಬ ಮಗನಿದ್ದಾನೆ. ಆದರೆ ನಂಬಿ ಮದುವೆ ಮಾಡಿಕೊಂಡವ ಅನುಶ್ರೀಯನ್ನು ಬಿಟ್ಟು ಹೊರಟು ಹೋಗಿದ್ದಾನೆ. ಇದರಿಂದ ತಂದೆ, ತಾಯಿ, ಬಂಧು-ಬಳಗ, ಗಂಡನಿಲ್ಲದೇ ಅನಾಥಳಾಗಿದ್ದ ಅನುಶ್ರೀಗೆ ಚಿಕ್ಕಬಳ್ಳಾಪುರದ ಕೋಟೆ ನಿವಾಸಿ ನರ್ಸ್ ಒಬ್ಬರು ಆಶ್ರಯ ನೀಡಿ ಸಂತೈಸಿದ್ದಾರೆ.

ಮಗ, ಮಗಳು, ಬಂಧು-ಬಳಗ ಇದ್ದರೂ ಒಬ್ಬೊಂಟಿಯಾಗಿ ಜೀವನ ಸಾಗಿಸುತ್ತಿದ್ದ ಈರಣ್ಣ ಕೊನೆಗಾಲದಲ್ಲಿ ಲಾಲನೆ, ಪಾಲನೆ, ಪೋಷಣೆಗಾಗಿ ಬೇರೆ ಮದುವೆ ಮಾಡಿಕೊಳ್ಳಲು ಆಸೆ ವ್ಯಕ್ತಪಡಿಸಿದ್ದ. ತನ್ನ ಆಸೆಯನ್ನು ಈಡೇರಿಸುವಂತೆ ಕೆಲವು ಮದುವೆ ಬ್ರೋಕರ್‌ಗಳಿಗೆ ಮನವಿ ಮಾಡಿದ್ದ. ತನ್ನ ಹೆಸರಿನಲ್ಲಿ 4 ಗುಂಟೆ ಜಮೀನು, ಮನೆ ಇದೆ ಅದನ್ನು ತನ್ನ ನೂತನ ಪತ್ನಿಗೆ ಬರೆಯುವುದಾಗಿ ಮಾತು ಕೊಟ್ಟಿದ್ದ. ಇದರಿಂದ ನಾಲ್ಕು ಜನ ಮಧ್ಯಸ್ಥಿಕರು ಸೇರಿ ಅನುಶ್ರೀ ಹಾಗೂ ಈರಣ್ಣನಿಗೆ ಮದುವೆ ಮಾಡಿ ಹನಿಮೂನ್‌ಗೆ ಕಳುಹಿಸಿದ್ದಾರೆ.

Leave a Reply

Your email address will not be published. Required fields are marked *