ಬ್ಯಾಟರಾಯನಪುರ : ರಾಜ್ಯದ ರೈತರ ಹಿತ ಕಾಪಾಡುವಲ್ಲಿ ಸಹಕಾರ ಸಂಘಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯ ಪಟ್ಟರು.
ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ ಬ್ಯಾಟರಾಯನಪುರದ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಪ್ರಯುಕ್ತ ಜಕ್ಕೂರಿನ ಕೆಂಪೇಗೌಡ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ‘ವ್ಯವಸಾಯ ಸೇವಾ ಸಹಕಾರ ಸಂಘಗಳು ತಮ್ಮ ಅಸ್ಥಿತ್ವ ಉಳಿಸಿಕೊಳ್ಳುವುದರ ಜತೆಗೆ ರಾಜ್ಯದ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಹಲವು ರೀತಿಯಲ್ಲಿ ಸಹಕರಿಸುವ ಮೂಲಕ ಅನುಕೂಲ ಮಾಡಿಕೊಡುತ್ತಿರುವುದು ಶ್ಲಾಘನೀಯ. 6 ಕೋಟಿ ರು.ಗಳ ಠೇವಣಿಯೊಂದಿಗೆ ಪ್ರಗತಿಯ ಹಾದಿಯಲ್ಲಿ ಸಾಗುತ್ತಿರುವ ಸಂಘದ ಸಾಧನೆ ನಿಜಕ್ಕೂ ಮೆಚ್ಚುವಂತಹದ್ದು.
ರಾಜ್ಯ ಸರ್ಕಾರ ರಾಜ್ಯದ ರೈತರ ಹಿತ ಕಾಯುವ ನಿಟ್ಟಿನಲ್ಲಿ ರೈತರಿಗೆ ಸಾಲದ ಬಡ್ಡಿ ಮನ್ನಾ ಮಾಡಿದ್ದು, ಸಾಲ ಮಾತ್ರ ಕಟ್ಟುವಂತೆ ಕ್ರಮಕೈಗೊಂಡಿದೆ. ಅಲ್ಲದೆ ಡಿಸಿಸಿ ಬ್ಯಾಂಕ್ ಮೂಲಕ ರೈತರಿಗೆ ಬಡ್ಡಿ ರಹಿತ ಸಾಲ ನೀಡಲು ಯೋಜನೆ ರೂಪಿಸಿದೆ ಇದರಿಂದ ರಾಜ್ಯದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಸಮಸ್ಯೆ, ಸೂಕ್ತ ಬೆಲೆ ಸಿಗದಿರುವುದು ಮುಂತಾದ ಹಲವು ಸಮಸ್ಯೆಗಳಿಂದ ವ್ಯವಸಾಯ ಕೈಗೊಳ್ಳುವುದೇ ದುಸ್ತರವಾಗಿರುವ ಇಂದಿನ ದಿನಗಳಲ್ಲಿ ಸಹಕಾರ ಸಂಘಗಳು ರೈತರಿಗೆ ಅಗತ್ಯ ಸಹಕಾರ ನೀಡುವ ಮೂಲಕ ಅನುಕೂಲ ಮಾಡಿಕೊಡುತ್ತಿವೆ ಎಂದು ಸಹಕಾರ ಸಂಘಗಳ ಕಾರ್ಯಶ್ಲಾಘನೆ ಮಾಡಿದರು.
ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಕಾರ್ಯ ಚಟುವಟಿಕೆಗಾಗಿ ಜಕ್ಕೂರಿನಲ್ಲಿ ಗುರುತಿಸಿರುವ 10 ಗುಂಟೆ ಜಾಗವನ್ನು ಮಂಜೂರು ಮಾಡುವಂತೆ ಸಂಘದ ಸದಸ್ಯರು ಸಚಿವರಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘ ನಿ. ಬ್ಯಾಟರಾಯನಪುರದ ಅಧ್ಯಕ್ಷ ಮೋಹನ್ ರಾಜ್, ಉಪಾಧ್ಯಕ್ಷ ಎಸ್ ಸೋಮಶೇಖರ್, ನಿರ್ದೇಶಕರಾದ ರಾಜಶೇಖರ್, ನಂಜಪ್ಪ, ರತ್ನಮ್ಮ, ಸುಧಾಕರ್, ಬಸವರಾಜ್, ಕಾರ್ತೀಕ್, ಸರೋಜಮ್ಮ, ಅಶೋಕ್ ಗೌಡ,ರಾಜೇಶ್,ಮುನೇಗೌಡ, ಶ್ರೀಕಾಂತ್ ಸೇರಿದಂತೆ ಇನ್ನಿತರರಿದ್ದರು.