ಕೋಲಾರ: ಅರಣ್ಯ ಇಲಾಖೆಯ ಒತ್ತುವರಿ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸುವ ಮೂಲಕ ಬಿಜೆಪಿ ಸಂಸದ ಎಸ್‌.ಮುನಿಸ್ವಾಮಿ ತಮ್ಮ ಹಿಂದಿನ ಪ್ರವೃತಿಯ ರೌಡಿಸಂ ಪ್ರದರ್ಶಿಸಿದ್ದಾರೆ. ಹೊಡಿಬಡಿ ಹಾಗೂ ಕಾಂಪೌಂಡ್‌ ಹಾಕುವ ಸಂಸ್ಕೃತಿ ಮುಂದುವರಿಸಿದ್ದಾರೆ ಎಂದು ಬಂಗಾರಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್‌.ಎನ್.ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.

ತಾಲೂಕಿನ ವಡಗೂರು ಗ್ರಾಮದಲ್ಲಿ ಭಾನುವಾರ ಹುತ್ತೂರು ಹೋಬಳಿ ವ್ಯಾಪ್ತಿಯ ರೇಷ್ಮೆ ಬೆಳೆಗಾರರ ಹಾಗು ರೈತರ ಸೇವಾ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ಕಛೇರಿ ಉದ್ಘಾಟನೆ ಹಾಗೂ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಶ್ರೀನಿವಾಸಪುರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಸಂಬಂಧ ಮುನಿಸ್ವಾಮಿ ನಡೆದುಕೊಂಡಿರುವ ರೀತಿ ಖಂಡನೀಯ. ಈ ವರ್ತನೆ ಸಂಸದರಿಗೆ ಶೋಭೆ ತರುವಂಥದ್ದಲ್ಲ ನ್ಯಾಯ ಎಲ್ಲರಿಗೂ ಒಂದೇ ಆಗಿರುತ್ತದೆ ರೌಡಿಸಂ ಗೂಂಡಾಗಿರಿಯಿಂದ ಅಲ್ಲ ಎಂದರು.

ಯಾವುದೇ ಅಧಿಕಾರಿಗೆ ತಮ್ಮ ಕೆಲಸ ಕಾರ್ಯ ಮಾಡಲು ಜನಪ್ರತಿನಿಧಿಗಳು ಅನುಕೂಲ ಮಾಡಿಕೊಡಬೇಕು. ಒಂದು ವೇಳೆ ಕೆಲಸದಲ್ಲಿ ಲೋಪದೋಷವಿದ್ದರೆ ಅವರನ್ನು ದಂಡಿಸಲು ಕಾನೂನು ಇದೆ ಯಾರೇ ಆಗಲಿ ಅಧಿಕಾರಿಗಳ ಮೇಲೆ ಕೈಮಾಡುವುದು, ಅವರ ಕೆಲಸಗಳಿಗೆ ಅಡ್ಡಿಪಡಿಸುವುದು ಕಾನೂನು ಬಾಹಿರ. ಹೀಗಾಗಿ, ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳ ಮೇಲೆ ಸೇಡಿನ ಕ್ರಮಕ್ಕೆ ಪ್ರಚೋದಿಸಿದರೆ ಸಂಸದರ ಮೇಲೂ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಸರ್ಕಾರ ಹಾಗೂ ಅಧಿಕಾರಿಗಳನ್ನು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.

ವಿಶೇಷ ಪ್ಯಾಕೇಜ್‌:
ಮುಖ್ಯಮಂತ್ರಿಗೆ ಭೇಟಿ ಮಾಡಿ ರೇಷ್ಮೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ ನೀಡುವಂತೆ ಮನವಿ ಮಾಡಿದ್ದೇವೆ. ಸದ್ಯದಲ್ಲೇ ಆ ಸೌಲಭ್ಯ ಸಿಗಲಿದೆ. ರೇಷ್ಮೆ ಬೆಳೆಯುವ ರೈತರಿಗೆ ಹೆಚ್ಚಿನ ಉತ್ತೇಜನ ನೀಡಬೇಕು. ಆ ಮೂಲಕ ರೈತರ ಸಬಲೀಕರಣ ಆಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದೇವೆ ರೇಷ್ಮೆ ಬೆಳೆಗಾರರ ಸಂಘಕ್ಕೆ 10 ಲಕ್ಷ ಕೊಡುವಂತೆ ಸೊಸೈಟಿ ಅಧ್ಯಕ್ಷ ಕೋಟೆ ನಾರಾಯಣಸ್ವಾಮಿ ಅವರು ಮನವಿ ಮಾಡಿದ್ದಾರೆ. ನಾನು 5 ಲಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಎಂ.ಎಲ್ ಅನಿಲ್ ಕುಮಾರ್ 5 ಲಕ್ಷ ಕೊಡುತ್ತೇವೆ. ‌ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಇಲ್ಲ‌ ಸದಾ ರೈತರ ಹಾಗೂ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ನಿಮ್ಮೊಂದಿಗೆ ಇರುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ ಜಿಲ್ಲೆಯಲ್ಲಿ ಇರುವ ಸೊಸೈಟಿಗಳಲ್ಲಿ ಅತಿ ದೊಡ್ಡ ಸೊಸೈಟಿ ಹುತ್ತೂರು ರೇಷ್ಮೆ ಬೆಳೆಗಾರರದ್ದು ಆಗಿದ್ದು ಸುಮಾರು 51 ಹಳ್ಳಿಗಳಿಂದ ಕೂಡಿದ್ದು ಇಲ್ಲಿ ಮಾದರಿ ರೈತರು ಇದ್ದಾರೆ ಸಾಕಷ್ಟು ಸವಾಲು ಸಮಸ್ಯೆಗಳ ಮಧ್ಯೆ ಸಾಲ ಕೊಡಬೇಕಾದ ಸಂದರ್ಭ ಬಂದಿತ್ತು ಹಿಂದೆ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದೆ ದಿನಗಳಲ್ಲಿ ಎಲ್ಲಾ ಸದಸ್ಯರ ಸಹಕಾರ ಹಾಗೂ ಆಡಳಿತ ಮಂಡಳಿಯ ಬದ್ದತೆಯಿಂದ ಉತ್ತಮ ರೀತಿಯಲ್ಲಿ ಕೆಲಸ ಮಾಡಿ ರೈತರ ಕಷ್ಟಗಳಿಗೆ ಸ್ಪಂದಿಸುವಂತಾಗಲಿ ಎಂದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ ಸರ್ವ ಸದಸ್ಯರು ಆಡಳಿತ ಮಂಡಳಿಯ ತಪ್ಪುಗಳನ್ನು ಗುರುತಿಸಿ ಸರಿ ಮಾಡಲಿಕ್ಕೆ ಇರುವ ವೇದಿಕೆ ವಾರ್ಷಿಕ ಮಹಾಸಭೆ ಇಂತಹ ಸಭೆಯಲ್ಲಿ ಚರ್ಚೆಗಳು ನಡೆಯುತ್ತವೆ ತಾಳ್ಮೆಯಿಂದ ಆಡಳಿತ ಮಂಡಳಿ ಎಲ್ಲವನ್ನೂ ಕೇಳಲು ಬೇಕು ಜೊತೆಗೆ ಸದಸ್ಯರು ಉತ್ತರವನ್ನು ಪಡೆಯಬೇಕು ಎಲ್ಲರ ಸಹಕಾರದಿಂದ ಮುಂದಿನ ದಿನಗಳಲ್ಲಿ ಕನಿಷ್ಠ 100 ಕೋಟಿ ಸಾಲ ನೀಡುವ ಹಂತಕ್ಕೆ ಸೊಸೈಟಿ ಬೆಳೆಯಲಿ ಎಂದು ಇದೇ ಸಂದರ್ಭದಲ್ಲಿ ಆಶಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ವಿಟ್ಟಪನಹಳ್ಳಿ ಕೋಟೆ ನಾರಾಯಣಸ್ವಾಮಿ ಮಾತನಾಡಿ ಜಿಲ್ಲೆಯಲ್ಲಿ ಬಹಳ ಪ್ರಸಿದ್ಧ ಪಡೆದ ಸೊಸೈಟಿಗಳಲ್ಲಿ ಹುತ್ತೂರು ಸೊಸೈಟಿ ಕೂಡ ಒಂದು ಹಿಂದಿನಿಂದಲೂ ರೈತರ ಹಿತ ಕಾಯುವ ನಿಟ್ಟಿನಲ್ಲಿ ಸೊಸೈಟಿಯ ಆಡಳಿತ ಮಂಡಳಿಯು ಕೆಲಸ ಮಾಡಿಕೊಂಡು ಬಂದಿದೆ ಸುಮಾರು 51 ಹಳ್ಳಿಗಳ ರೈತರಿಗೆ ಸಾಲ ನೀಡಲು ಡಿಸಿಸಿ ಬ್ಯಾಂಕ್ ಹೆಚ್ಚಿನ ಸಾಲ ನೀಡಬೇಕು ಜೊತೆಗೆ ಕಟ್ಟಡ ನಿರ್ಮಾಣ ಮಾಡಲು ಅನುದಾನ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕಡಗಟ್ಟೂರು ದಯಾನಂದ್, ಪಿಚ್ಚಹಳ್ಳಿ ಗೋವಿಂದರಾಜು, ರಾಜ್ಯ ಬೀಜ ನಿಗಮದ ನಿರ್ದೇಶಕ ವಡಗೂರು ಡಿ.ಎಲ್ ನಾಗರಾಜ್, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಸೊಸೈಟಿ ಉಪಾಧ್ಯಕ್ಷ ಕೆ.ಎಂ ಅಂಬರೀಶ್, ನಿರ್ದೇಶಕರಾದ ವಿ.ರಾಮು, ಚಂದ್ರಶೇಖರ್, ರಾಜೇಂದ್ರ ಪ್ರಸಾದ್,ರಮೇಶ್ ಕುಮಾರ್, ಶ್ರೀನಿವಾಸಪ್ಪ, ಕೃಷ್ಣಮೂರ್ತಿ, ಕೆ.ರಮೇಶ್, ಚಂದ್ರಶೇಖರ್, ನಾರಾಯಣಮ್ಮ, ಅಮರಾವತಿ, ಕಾರ್ಯದರ್ಶಿ ವೈ.ವಿ ನಾಗರಾಜ್ ಸೇರಿದಂತೆ ಗ್ರಾಪಂ ಅಧ್ಯಕ್ಷರು, ರೈತರು ಮುಖಂಡರು ಭಾಗವಹಿಸಿದ್ದರು

Leave a Reply

Your email address will not be published. Required fields are marked *