ಬಳ್ಳಾರಿ,ಸೆ.1
ಭಾರತ ಸಂವಿಧಾನವು ನಮ್ಮ ಧರ್ಮಗ್ರಂಥವಿದ್ದಂತೆ, ಅದನ್ನು ಪವಿತ್ರವಾಗಿ ಕಾಣಬೇಕು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವರಾದ ರುದ್ರೇಶ ಎಸ್.ಎನ್ ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆ ಅಂಗವಾಗಿ ಸಂವಿಧಾನ ಓದು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಿಧಾನದ ಮೂಲವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮೊದಲು ನಾವು ಭಾರತದ ಇತಿಹಾಸವನ್ನು ಓದಬೇಕು. ಸಂವಿಧಾನದ ಚೌಕಟ್ಟಿನಡಿ ಎಲ್ಲರೂ ಸಮಾನರು ಎಂಬ ತತ್ವ ಸಾರಿದವರು ಡಾ.ಅಂಬೇಡ್ಕರ್ ಅವರು. ಸಂವಿಧಾನ 42 ಮತ್ತು 44ನೇ ಕಲಂಗಳನ್ನು ಓದಿದಾಗ ಕಾನೂನಾತ್ಮಕ ನೆಲೆಗಟ್ಟಿನಲ್ಲಿ ನಮ್ಮ ಸಂವಿಧಾನ ರೂಪುಗೊಂಡಿರುವುದನ್ನು ತಿಳಿಯಬಹುದು ಎಂದರು.
ರಾಷ್ಟ್ರಪತಿ ಭವನದಲ್ಲಿರುವ ಸಂವಿಧಾನದ ಮೂಲಪ್ರತಿಯನ್ನು ಪ್ರತಿಯೊಬ್ಬ ಭಾರತೀಯನು ಒಮ್ಮೆ ನೋಡಿ ಪಾವನರಾಗಬೇಕು ಎಂದು ಹೇಳಿದರು. ಸಾಮಾನ್ಯ ಪ್ರಜೆಯಾದ ಡಾ. ಎ ಪಿ ಜೆ ಅಬ್ದುಲ್ ಕಲಾಂ, ಪ್ರಧಾನಿ ಮೋದಿಯವರು ದೇಶದ ಅತ್ಯುನ್ನತ ಸ್ಥಾನ ಅಲಂಕರಿಸಲು ಸಂವಿಧಾನವೇ ಕಾರಣ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಸಾಹೇಬ್ ಅಲಿ ಹೆಚ್ ನಿರಗುಡಿ ಅವರು ಮಾತನಾಡಿ, ಸಂವಿಧಾನದ ಮೂಲಭೂತ ಹಕ್ಕುಗಳು ದೇಶದ ನಾಗರಿಕರ ಹಿತ ಕಾಯುತ್ತಿವೆ. ಸ್ವಾತಂತ್ರ್ಯ ನಂತರ ಜಾರಿಗೆ ಬಂದಿರುವ ಸಂವಿಧಾನದ ಅರಿವು ಮೂಡಿಸುವ ಕಾರ್ಯ ದೇಶದೆಲ್ಲೆಡೆ ನಡೆಯಬೇಕಿದೆ. ವಿವಿಧತೆಯಲ್ಲಿ ಏಕತೆ ಎಂಬ ಘೋಷವಾಕ್ಯ ನಮ್ಮ ದೇಶಕ್ಕೆ ಅನ್ವಯವಾಗಿಸಿರುವುದು ಸಂವಿಧಾನ ಎಂದರು.
ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಮೋಹನದಾಸ್ ಅವರು ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯದ ನಂತರದ ಘಟನಾವಳಿಗಳನ್ನು ಹಾಗೂ ಸಂವಿಧಾನ ರಚನೆಯ ಹಿನ್ನೆಲೆಯ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರಿಗೆ ಸಂವಿಧಾನದ ಪೀಠಿಕೆಯ ಪ್ರತಿಜ್ಞಾ ವಿಧಿಯನ್ನು ಸಾಮೂಹಿಕವಾಗಿ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ್ ಓಲೇಕಾರ್, ವಿತ್ತಾಧಿಕಾರಿ ಪ್ರೊ.ಸದ್ಯೋಜಾತಪ್ಪ, ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *