ದೇವನಹಳ್ಳಿ: ತಾಲೂಕಿನ ರಾಮನಾಥಪುರ ಗ್ರಾಮದ ಪರಿಶಿಷ್ಟರ ಬಡಾವಣೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಾಮ ಫಲಕಕ್ಕೆ ಹಾನಿ ಉಂಟು ಮಾಡಲಾಗಿದೆ ಎಂದು ರಾಮನಾಥಪುರ ಗ್ರಾಮದ ಅರುಣಾ ಎಂಬುವವರು ವಿಶ್ವನಾಥಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.
ರಾಮನಾಥಪುರದಲ್ಲಿ ಸೆಪ್ಟೆಂಬರ್15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿತ್ತು ಆದರೆ ಸೆಪ್ಟೆಂಬರ್14 ರ ಸಂಜೆಯೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಾಮ ಫಲಕವನ್ನು ಹರಿದು ಹಾಕಿ ನಾಮ ಫಲಕಕ್ಕೆ ಹಾನಿ ಎಸಗಿರುವುದು ಕಂಡು ಬಂದಿದ್ದು ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ದೃಷ್ಟಿಯಿಂದ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಘಟನೆಯ ಬಗ್ಗೆ ಪ್ರಜಾ ವಿಮೋಚನಾ ಚಳುವಳಿ (ಸ್ವಾಭಿಮಾನ) ಮತ್ತು ದಲಿತ ಸಂಘರ್ಷಕ ಸಮಿತಿ (ಭೀಮಶಕ್ತಿ) ಸಂಘಟನೆಗಳು ಘಟನೆಯನ್ನು ಖಂಡಿಸಿದ್ದು ರಾಮನಾಥಪುರದಲ್ಲಿ ಈ ಹಿಂದೆಯು ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದಿದ್ದು ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಸಂಘಟಿತ ಹೋರಾಟ ರೂಪಿಸಲಾಗುವುದು ಎಂದು ಉಭಯ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಈ ಸಂದರ್ಭದಲ್ಲಿ ಪ್ರಜಾ ವಿಮೋಚನ ಚಳುವಳಿ (ಸ್ವಾಭಿಮಾನ) ಯ ರಾಜ್ಯ ಅಧ್ಯಕ್ಷ ಮುನಿಆಂಜಿನಪ್ಪ, ದೇವನಹಳ್ಳಿ ತಾಲೂಕು ಅಧ್ಯಕ್ಷ ಸೋಲೂರು ನಾಗರಾಜ್, ಅನುಪಮಾ, ನಾಗವೇಣಿ, ದಲಿತ ಸಂಘರ್ಷ ಸಮಿತಿ (ಭೀಮಶಕ್ತಿ)ಯ ರಾಜ್ಯ ಸಹ ಕಾರ್ಯದರ್ಶಿ ದಾಸರಬೀದಿ ಮುರುಳಿ ಮತ್ತು ಸಂಘಟನೆಗಳ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಇದ್ದರು.
