ಕೋಲಾರ : ವಿದ್ಯಾರ್ಥಿಗಳಿಗೆ ಸಿಗುವ ಪುರಸ್ಕಾರ ಅವರ ಜವಾಬ್ದಾರಿ ಹೆಚ್ಚು ಮಾಡುತ್ತದೆ. ಮಕ್ಕಳಲ್ಲಿ ವಿದ್ಯಾಭ್ಯಾಸ ಮಾಡುವಾಗ ಬದ್ದತೆ, ಶಿಸ್ತು, ಶ್ರಮ ಇರಬೇಕು. ಯಾರಿಗೆ ಗೌರವ ನೀಡಬೇಕು ಎಂಬುದನ್ನು ಮೊದಲು ಅರಿಯಬೇಕು. ಸಮಾಜಮುಖಿಯಾಗಿ ಬೆಳೆಯಬೇಕು ಎಂದು ಕಾಗಿನೆಲೆ ಗುರುಪೀಠ ಮೈಸೂರಿನ ಶ್ರೀ ಶಿವಾನಂದಪುರಿ ಸ್ವಾಮೀಜಿಗಳು ಆಶ್ರೀವರ್ಚನ ನೀಡಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ ಜಿಲ್ಲಾ ಕನಕ ನೌಕರರ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕುರುಬ ಸಮಾಜದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿದ ಅವರು ಜೀವನ ಪರ್ಯಂತ ನಮ್ಮ ತಂದೆ-ತಾಯಿಯನ್ನು, ಕುಟುಂಬವನ್ನು ಜವಾಬ್ದಾರಿಯಿಂದ ನೋಡಿ ಕೊಳ್ಳಬೇಕು ದೇವರಲ್ಲಿ ಭಕ್ತಿ, ನಮ್ಮ ಪೂರ್ವಿಕರ ಹಾಗೂ ಯೋಗಿಗಳ ಬಗ್ಗೆ ಅರಿತು ಗೌರವಿಸಬೇಕು ಎಂದು ಕರೆ ನೀಡಿದರು.

ಪೋಷಕರು ಕೇವಲ ಅಂಕಗಳ ಬಗ್ಗೆ ಚಿಂತನೆ ಮಾಡಿ ಕೇವಲ ಓದು ಓದು ಎಂದು ಒತ್ತಡ ಹೇರದೆ ಶಿಸ್ತಿನ ದಾರಿಯಲ್ಲಿ ಕರೆದು ಕೊಂಡು ಹೋಗಿ ನಮ್ಮ ಸಮಾಜದ ಬಗ್ಗೆ ಅರಿವು ಮೂಡಿಸಿ ನಮ್ಮ ಜಾತಿ, ಧರ್ಮದ ಅಭಿಮಾನ ಬೆಳಸಿ ಎಂದು ನುಡಿದರು.

ಮಾಜಿ ಸಚಿವ ವರ್ತೂರ್ ಪ್ರಕಾಶ್ ಮಾತನಾಡಿ ಪ್ರತಿಭೆಯನ್ನು ಗುರುತಿಸುವ ಕೆಲಸವನ್ನು ಕನಕ ನೌಕರ ಸಂಘ ಮಾಡುತ್ತಿರುವುದು ಶ್ಲಾಘನೀಯ. ನಾನು ನಿರೀಕ್ಷೆ ಮಾಡಿದಷ್ಟು ಕೆಲಸ ಮಾಡಲು ಆಗಲಿಲ್ಲ, ನಾನು ಅಧಿಕಾರದಲ್ಲಿ ಇದ್ದಾಗ ನಮ್ಮ ಸಮುದಾಯದವರನ್ನೇ ಜಿಲ್ಲಾ ಮಟ್ಟದ ಅಧಿಕಾರಿಗಳನ್ನಾಗಿ ನೇಮಿಸಿದ್ದೆ ಎಂದರು.

ಕನಕ ಭವನ ಹಾಗೂ ವಿದ್ಯಾರ್ಥಿಗಳ ವಸತಿ ನಿಲಯವನ್ನು ಇನ್ನೂ ಎರಡು ತಿಂಗಳಲ್ಲಿ ಲೋಕಾರ್ಪಣೆ ಮಾಡುವ ಕೆಲಸದಲ್ಲಿ ಮುಂದಾಗಿದ್ದೇನೆ. ಬಿ.ಜೆ.ಪಿ. ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿಯ ಬಳಿ ಹೇಳಿ ಒಂದು ಕೋಟಿ ಹಣ ಅನುಮೋದನೆ ಮಾಡಿಸಿದ್ದು, ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡಿಸುವಂತೆ ಹಾಗೂ ನಮ್ಮ ಸಮಾಜದ ಅಧಿಕಾರಿಗಳನ್ನು ಕೋಲಾರ ಜಿಲ್ಲೆಗೆ ವರ್ಗಾವಣೆ ಮಾಡುವಂತೆ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ರವರಲ್ಲಿ ಮನವಿ ಮಾಡಿದರು.

ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ ಸಮಾಜದಲ್ಲಿ ಹಿಂದುಳಿದ ವರ್ಗಗಳಲ್ಲಿಯೇ ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯ ನಮ್ಮದಾಗಿದ್ದು, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಅವಕಾಶಗಳನ್ನು ಪಡೆದಿದ್ದೇವೆ. ಅವಕಾಶ ವಂಚಿತ ಸಮುದಾಯಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು. ಅವಕಾಶಗಳು ಸಿಗದೆ ಇರುವ ಕ್ಷೇತ್ರಗಳನ್ನು ಗುರುತಿಸಿಕೊಂಡು ಅವಕಾಶಗಳನ್ನು ಪಡೆಯಬೇಕು. ಬಡವರ ಕಣ್ಣೀರು ವರೆಸುವ ಮೂಲಕ ಸಮಸಮಾಜ ಕನಸು ಕಾಣಬೇಕು ಎಂದರು.

ಶಿಕ್ಷಣ ನಮಗೆ ಸ್ವಾಭಿಮಾನ, ಗೌರವ ನೀಡುತ್ತದೆ. ಪೋಷಕರ ಕನಸು ನನಸು ಮಾಡುವುದು ನಮ್ಮ ಕರ್ತವ್ಯ. ನಮಗೆ ಭಕ್ತ ಕನಕದಾಸ, ಸಂಗೊಳ್ಳಿ ರಾಯಣ್ಣ ಹಾಗೂ ವೀರವನಿತೆ ಅಹಲ್ಯ ಬಾಯಿ ಹೋಳ್ಕರ್ ರೋಲ್ ಮಾಡೆಲ್ ಗಳಾಗಬೇಕು. ಬಡವರ ಕಣ್ಣೀರು ಒರೆಸುವ ನಾಯಕರಾಗಿ, ಸಮಾಜವನ್ನು ಕಾಪಾಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಕನಕ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ.ನಾರಾಯಣಸ್ವಾಮಿ ಮಾತನಾಡಿ, 1998 ರಲ್ಲಿ ಸಂಘ ಪ್ರಾರಂಭವಾಗಿ ಅವತ್ತಿನಿಂದ ಸಮಾಜಕ್ಕೆ ಏನು ಮಾಡಬೇಕು ಜೊತೆಗೆ ಇತರೆ ಸಮುದಾಯಗಳೊಂದಿಗೆ ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಅಂತ ಅನೇಕರು ತಿಳಿಸಿಕೊಟ್ಟಿದ್ದಾರೆ. ಪ್ರತಿ ವರ್ಷ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೇವೆ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದೇವೆ.

32 ಇಲಾಖೆಗಳ ನೌಕರರ ಒಳಗೊಂಡಂತೆ ಕಾರ್ಯಕ್ರಮ ಮಾಡುತ್ತಿದ್ದೇವೆ. 200 ಮಕ್ಕಳನ್ನು ಗುರುತಿಸಿ ಪೋತ್ಸಾಹಿಸಲಾಗುತ್ತಿದೆ ಎಂದರು. ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ಅಪ್ಪಯ್ಯಗೌಡ, ಸರಸ್ವತಿ, ಕುರುಬರ ಸಂಘದ ಜಿಲ್ಲಾಧ್ಯಕ್ಷ ತಂಬಳ್ಳಿ ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ನಡುಪಳ್ಳಿ ಕೃಷ್ಣಮೂರ್ತಿ, ವೃತ್ತ ನಿರೀಕ್ಷಕ ಸಂಜೀವರಾಯಪ್ಪ, ನಗರಸಭೆ ಸದಸ್ಯ ವಿ.ಮಂಜುನಾಥ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಎನ್.ಮಂಜುನಾಥ್, ಮುಖಂಡರಾದ ಕೆ.ಎಸ್.ಆರ್.ಟಿ.ಸಿ ಮುನಿಯಪ್ಪ, ಸಿ.ಸೋಮಶೇಖರ್, ಜನಾರ್ಧನ್, ತ್ಯಾಗರಾಜ್, ರಾಮಚಂದ್ರ , ಜಿಲ್ಲಾ ಕನಕ ನೌಕರರ ಸಂಘದ ಖಜಾಂಚಿ ಬಿ.ಹರೀಶ್, ಕಾರ್ಯಧ್ಯಕ್ಷ ಎಂ.ಎA.ನಾರಾಯಣಸ್ವಾಮಿ, ಟಿಎಂ.ಸುರೇಶ್, ಬಿ.ಪಿ.ಸತೀಶ್, ಅಶ್ವಥ್‌ಗೌಡ, ಹಾಗೂ ಸದಸ್ಯರು ಸಮಾಜದ ಜನಪ್ರತಿನಿಧಿಗಳು, ಮುಖಂಡರು ರಾಜೇಶ್, ವಿಶ್ವ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಮಾ ರವರು ಪ್ರಾರ್ಥಿಸಿ, ಡಿ.ಆರ್.ಶ್ರೀರಾಮೇಗೌಡ ಸ್ವಾಗತಿಸಿ ಕೊಂಡರಾಜನಹಳ್ಳಿ ಮಂಜುಳ ನಿರೂಪಿಸಿ, ಚಂದನವಾಹಿಸಿ ಗಾಯಕ ಹರ್ಷಿತ್ ಹಾಡುಗಳನ್ನು ಹಾಡಿದರು, ವಾಗ್ದೇವಿ ನಾಟ್ಯ ಶಾಲಾ ವಿದ್ಯಾರ್ಥಿಗಳು ಭರತನಾಟ್ಯ ನಡೆಸಿಕೊಟ್ಟರು.

Leave a Reply

Your email address will not be published. Required fields are marked *