3 ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ :
ಯಲಹಂಕ : ದೇಶದ ಆರ್ಥಿಕ ಪ್ರಗತಿಯಲ್ಲಿ ತೋಟಗಾರಿಕಾ ಕ್ಷೇತ್ರದ ಕೊಡುಗೆ ಅಪಾರ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯ ಪಟ್ಟರು.
ಭಾರತೀಯ ಕೃಷಿ ಅನುಸಂದಾನ ಪರಿಷತ್ ಹಾಗೂ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಇವರ ಸಹಯೋಗದೊಂದಿಗೆ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ‘ವಿದೇಶಿ ಮತ್ತು ಕಡಿಮೆ ಬಳಕೆಯಲ್ಲಿರುವ ತೋಟಗಾರಿಕಾ ಬೆಳಗಳ ಆಧ್ಯತೆ ಮತ್ತು ಪ್ರವೃತ್ತಿ’ ಕುರಿತ 3 ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿ ‘1951ರಲ್ಲಿ ದೇಶದಲ್ಲಿ 25 ಮಿಲಿಯನ್ ಟನ್ ಗಳಿಷ್ಟಿದ್ದ ತೋಟಗಾರಿಕಾ ಬೆಳೆಗಳ ಉತ್ಪಾದನೆ ಇದೀಗ 350 ಮಿಲಿಯನ್ ಟನ್ ಗಳನ್ನು ತಲುಪಿದ್ದು, ಸರಾಸರಿ ಉತ್ಪಾದನೆಯಲ್ಲಿ 14 ಪಟ್ಟು ಹೆಚ್ಚಾಗಿದೆ. ಕೃಷಿ ಭೂಮಿಯಲ್ಲಿ ಶೇ.18% ರಷ್ಟು ಪ್ರದೇಶವನ್ನು ಮಾತ್ರ ಒಳಗೊಂಡಿರುವ ತೋಟಗಾರಿಕಾ ಬೆಳೆಗಳು, ಕೃಷಿ ಆಂತರಿಕ ಉತ್ಪಾದನೆಯಲ್ಲಿ ಶೇ. 35% ರಷ್ಟು ಕೊಡುಗೆ ನೀಡುತ್ತಿರುವುದು ಸಂತೋಷದ ಸಂಗತಿ. ಇದರಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮತ್ತು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಕೊಡುಗೆ ಸಿಂಹಪಾಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಂಜಯ್ ಸಿಂಗ್, ಅಲಯನ್ಸ್ ಆಫ್ ಬಯೋಡೈವರ್ಸಿಟಿ ಇಂಟರ್ನ್ಯಾಷನಲ್ ನ ಭಾರತದ ಪ್ರತಿನಿಧಿ ಡಾ.ಜೆ.ಸಿ.ರಾಣಾ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ನ ಹಣ್ಣುಗಳು ಮತ್ತು ತೋಟದ ಬೆಳೆಗಳ ವಿಭಾಗದ ಸಹಾಯಕ ನಿರ್ದೇಶಕ ಡಾ.ವಿ.ಬಿ.ಪಾಟೀಲ್ ಸೇರಿದಂತೆ ಅಮೇರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ಇಸ್ರೇಲ್, ಮಲೇಷ್ಯಾ, ಮೆಕ್ಸಿಕೊ, ಕೊರಿಯಾ ಮತ್ತು ಜಾಂಬಿಯಾ ದೇಶಗಳಿಂದ ಆಗಮಿಸಿರುವ 400ಕ್ಕೂ ಹೆಚ್ಚು ಪ್ರತಿನಿಧಿಗಳಿದ್ದರು.
