


ಯಲಹಂಕ : ಕೆರೆಗಳು ಗ್ರಾಮೀಣ ಬದುಕಿನ ಜೀವನಾಡಿಗಳು, ಆದ್ಯತೆಯ ಮೇರೆಗೆ ಅವುಗಳನ್ನು ಸಂರಕ್ಷಣೆ ಮಾಡಬೇಕೆಂದು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಜನತೆಗೆ ಕಿವಿಮಾತು ಹೇಳಿದರು.
ಯಲಹಂಕ ಕ್ಷೇತ್ರದ ಅರಕೆರೆ, ಮಾರಸಂದ್ರ, ಬುಡುಮನಹಳ್ಳಿ, ಚಲ್ಲಹಳ್ಳಿ ಮತ್ತು ಕೊಲವರಾಯನ ಹಳ್ಳಿ ಗ್ರಾಮಗಳಲ್ಲಿ ಸುಮಾರು 2.5. ಕೋಟಿ ರು.ಅಂದಾಜು ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಮತ್ತು ನೆಲ್ಲುಕುಂಟೆ, ಸುರಧೇನುಪುರ, ಬುಡುಮನಹಳ್ಳಿ ಗ್ರಾಮಗಳಲ್ಲಿ ಸುಮಾರು 68 ಲಕ್ಷ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿ ‘ಅಂತರ್ಜಲ ಮಟ್ಟ ಗಣನೀಯ ವಾಗಿ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಅಂತರ್ಜಲವನ್ನು ಮರುಪೂರಣ ಗೊಳಿಸಲು ಕೆರೆಗಳಿಗೆ ನೀರು ತುಂಬಿಸುವುದನ್ನು ಬಿಟ್ಟು ಅನ್ಯ ಮಾರ್ಗವಿಲ್ಲ ಇದನ್ನು ಪ್ರತಿ ಗ್ರಾಮೀಣ ಜನತೆ ಮನಗಾಣ ಬೇಕಿದೆ. ಗ್ರಾಮೀಣ ಜನರ ನೀರಿನ ಅಗತ್ಯತೆ ಪೂರೈಸುವಲ್ಲಿ ಹಿಂದಿನಿಂದಲೂ ಕೆರೆಗಳು ಮಹತ್ವದ ಪಾತ್ರ ವಹಿಸಿವೆ. ಅವುಗಳ ಸಂರಕ್ಷಣೆ, ಊಳೆತ್ತುವ ಮೂಲಕ ನೀರಿನ ಸಂಗ್ರಹಣೆಯನ್ನು ಹೆಚ್ಚಿಸುವುದು ನಮ್ಮೆಲ್ಲ ಕರ್ತವ್ಯ ಎಂಬ ಭಾವನೆಯೊಂದಿಗೆ ನಾವೆಲ್ಲರೂ ಕಾಳಜಿ ವಹಿಸಬೇಕಿದೆ.
ನೀರು ಜೀವಜಲ ಅದರ ಹೊರತಾಗಿ ಜೀವಸಂಕುಲಕ್ಕೆ ಉಳಿಗಾಲವಿಲ್ಲ ಎಂಬುದರ ಅರಿವು ಪ್ರತಿಯೊಬ್ಬ ರಿಗೂ ತಿಳಿದಿರಬೇಕು, ಈ ದಿಸೆಯಲ್ಲಿ ಕೆರೆಗಳನ್ನು ಸಂರಕ್ಷಿಸಲು ಎಲ್ಲರೂ ಸ್ವಯಂಪ್ರೇರಣೆಯಿಂದ ಕೈಜೋಡಿಸ ಬೇಕು ಎಂದು ಕೆರೆಗಳ ಮಹತ್ವದ ಬಗ್ಗೆ ಮನೋಜ್ಞವಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಹೆಚ್ ಬಿ ಹನುಮಯ್ಯ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸತೀಶ್ ಕಡತನಮಲೆ, ಅರಕೆರೆ ಗ್ರಾ.ಪಂ.ಅಧ್ಯಕ್ಷೆ ಮುನಿಲಕ್ಷ್ಮಮ್ಮ ಪರಶುರಾಮ್, ಉಪಾಧ್ಯಕ್ಷ ರಾಮಣ್ಣ, ತಾ.ಪಂ.ಮಾಜಿ ಅಧ್ಯಕ್ಷ ಮುನಿದಾಸಪ್ಪ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಕೆ ಆರ್ ತಿಮ್ಮೇಗೌಡ, ಬಿ ಸಿ ಶಶಿಕುಮಾರ್, ಎಲ್.ಎನ್. ಗೌಡ, ಗ್ರಾ.ಪಂ. ಸದಸ್ಯರಾದ ಭಾಗ್ಯಮ್ಮ, ಪವನ್ ಕುಮಾರ್, ಮಂಜುಳ, ಶಿಲ್ಪ, ಪದ್ಮ, ಚಿಕ್ಕ ಮುನಿಯಪ್ಪ, ನೇತ್ರಾವತಿ, ಮಂಜುನಾಥ್, ತಿಮ್ಮಯ್ಯ, ಎಂ.ಮುನಿರಾಜು, ಕೆರೆ ಮುನಿರಾಜು, ಪುಟ್ಟಶಾಮಾಚಾರ್, ರಾಮಯಲ್ಲಪ್ಪ, ಬೆಂ.ನಗರ, ಗ್ರಾಮಾಂತರ ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷ ಹೆಚ್ ಎನ್ ಸುರೇಶ್, ಮುಖಂಡರಾದ ಈಶ್ವರಾಚಾರ್, ಅಂಬರೀಶ್, ರಾಜಣ್ಣ ಸೇರಿದಂತೆ ಇನ್ನಿತರರಿದ್ದರು.