ಸೇವಾ ಸಕ್ರಮಾತಿ ಮಾಡುವುದು ಸರಕಾರದ ಜವಾಬ್ದಾರಿ : ಅತಿಥಿ ಉಪನ್ಯಾಸಕರ ಹಕ್ಕಾಗಿದೆ

ಚಿಕ್ಕಬಳ್ಳಾಪುರ : ಅತಿಥಿ ಉಪನ್ಯಾಸಕರ ಬೇಡಿಕೆಯಾದ ಸೇವಾ ಸಕ್ರಮಾತಿ ಮಾಡುವುದು ಸರಕಾರದ ಆಧ್ಯತೆ ಮತ್ತು ಜವಾಬ್ದಾರಿಯಾಗಿದೆ. ಕಾಲಕಾಲಕ್ಕೆ ಸರಕಾರವನ್ನು ಒತ್ತಾಯಿಸುವುದು ಅತಿಥಿ ಉಪನ್ಯಾಸಕರಿಗಿರುವ ಸಾಂವಿಧಾನಿಕ ಹಕ್ಕಾಗಿದೆ ಎಂದು ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಮುನಿರಾಜು.ಎಂ ಅರಿಕೆರೆ ತಿಳಿಸಿದರು.

ನಗರದ ಸರಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಎದುರು ಮಂಗಳವಾರ ನಡೆದ ಜಿಲ್ಲಾ ಅತಿಥಿ ಉಪನ್ಯಾಸಕರ ಪ್ರತಿಭಟನಾ ಮುಷ್ಕರವನ್ನು ಉದ್ದೇಶಿಸಿ ಅವರು ಮಾತನಾಡಿದರು.

ನವೆಂಬರ್ ೨೩ರಿಂದ ಜಿಲ್ಲೆಯಲ್ಲಿರುವ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಹೋರಾಟ ಮಾಡುತ್ತಿದ್ದೇವೆ.ಇದರಿಂದಾಗಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ನಡೆಯದೆ ಭಾರೀ ತೊಂದರೆ ಆಗಿದೆ.ಸರಕಾರಕ್ಕೆ ಇದು ಸಮಸ್ಯೆಯಾಗಿಯೇ ಕಾಣದಿರುವುದು ಪರಮಾಶ್ಚರ್ಯ ಎಂದರು.

ಅತಿಥಿ ಉಪನ್ಯಾಸಕರ ಸೇವಾ ಸಕ್ರಮಾತಿ ವಿಚಾರ ೨ ದಶಕಗಳಿಗು ಹೆಚ್ಚಿನ ಅವಧಿಯಿಂದ ನೆನೆಗುದಿಗೆ ಬಿದ್ದಿದೆ.ಅಲ್ಲಿಂದ ಈತನಕ ೪೩೦ ಸರಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ೧೧೫೦೦ ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಡಿಮೆ ವೇತನ ಪಡೆದು, ನಾನಾ ಸಮಸ್ಯೆಗಳನ್ನು ಎದುರಿಸುತ್ತಾ ಸೇವೆ ಸಲ್ಲಿಸುತ್ತಿದ್ದೇವೆ.ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಬೇಕಾದರೆ ಬೆಳಗಾವಿ ಅಧಿವೇಶನದಲ್ಲಿ ನಮ್ಮ ಸೇವಾ ಸಕ್ರಮಾತಿ ಬಿಲ್ಲನ್ನು ಸರಕಾರ ಮಂಡಿಸಿ ಅನುಮೋಧನೆ ಪಡೆಯುವ ಮೂಲಕ ನ್ಯಾಯಕೊಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗೌರವಾಧ್ಯಕ್ಷ ಸದಾಶಿವ ಮಾತನಾಡಿ ಸರಕಾರ ಅತಿಥಿ ಉಪನ್ಯಾಸಕರ ಕೈಬಿಡುವುದಿಲ್ಲ ಎಂಬ ನಂಬಿಕೆ ನಮಗಿದೆ.ಈ ಸರಕಾರ ತನ್ನ ಪ್ರಣಾಳಿಕೆಯಲ್ಲಿ ನಮ್ಮ ಸೇವಾ ಸಕ್ರಮಾತಿ ಬಗ್ಗೆ ಪ್ರಸ್ತಾಪಿಸಿದ್ದು ಸರಿಯಷ್ಟೇ.ಆದರೆ ಈ ಬಗ್ಗೆ ಯಾವುದೇ ಸ್ಪಷ್ಟತೆ ನೀಡದೆ ಮತ್ತೂ ಹೆಚ್ಚಿನ ಕಾಲಾವಕಾಶ ಬೇಡುತ್ತಿರುವುದು ಸರಿಯಲ್ಲ.ಬೆಳಗಾವಿ ಅಧಿವೇಶನದಲ್ಲಿ ನಮ್ಮ ಮುಷ್ಕರಕ್ಕೆ ತಕ್ಕ ಪ್ರತಿಫಲ ನೀಡದೇ ಇದ್ದರೆ ನಮ್ಮ ಹೋರಾಟ ನಿರಂತರವಾಗಿರಲಿದೆ ಎನ್ನುವ ಸಂದೇಶವನ್ನು ಈಗಾಗಲೇ ಸರಕಾರಕ್ಕೆ ನೀಡಲಾಗಿದೆ ಎಂದರು.

ಮಹಿಳಾ ಉಪನ್ಯಾಸಕಿ ಗೀತಾ ಮಾತನಾಡಿ ಸೇವಾ ಸಕ್ರಮಾತಿಯನ್ನು ಮುಂದಿಟ್ಟುಕೊoಡು ೧೩ ದಿನಗಳಿಂದ ಹೋರಾಟ ಮಾಡುತ್ತಿದ್ದೇವೆ.೧೨ ತಿಂಗಳು ವೇತನ, ರಜೆ ಸೌಲಭ್ಯ,ವಿಮಾ ಸೌಲಭ್ಯ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡದ ಸರಕಾರ ಉಪನ್ಯಾಕರಲ್ಲಿಯೇ ಎರಡು ಪಂಗಡ ಮಾಡಿ ಒಡೆದು ಆಳುವ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಇದು ಇಲ್ಲಿಗೇ ನಿಲ್ಲಬೇಕು ಎಂದು ಆಗ್ರಹಿಸಿದರು.

ಹಿರಿಯ ಮುಖಂಡ ರಾಜಶೇಖರ್ ಮಾತನಾಡಿ ೧೯೯೪ರಲ್ಲಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವಾ ಸಕ್ರಮಾತಿ ಬಿಟ್ಟರೆ ಈವರೆಗೆ ಆಗಿಲ್ಲ.ಕಾಂಗ್ರೆಸ್ ಸರಕಾರ ತನ್ನ ಪ್ರಣಾಳಿಕೆಯಲ್ಲಿ ಹಾಕಿಕೊಂಡoತೆ ಇದೇ ಅವಧಿಯಲ್ಲಿ ನಮ್ಮ ಬೇಡಿಕೆ ಈಡೇರಿಸಿ ನುಡಿದಂತೆ ನಡೆದ ಸರಕಾರವಾಗಲಿ. ಇಲ್ಲದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

೧೩ನೇ ದಿನದ ತರಗತಿ ಬಹಿಷ್ಕಾರ ಚಳವಳಿಯ ಭಾಗವಾಗಿ ಕಾಲೇಜು ಆವರಣದಲ್ಲಿ ಬೆಳೆದಿದ್ದ ಹುಲ್ಲು ಕಳೆ ಗಿಡಗಂಟಿಗಳನ್ನು ತೆಗೆದು ಶ್ರಮದಾನ ಮಾಡುವ ಮೂಲಕ ಸರಕಾರದ ಕಣ್ತೆರೆಸುವ ಕೆಲಸವನ್ನು ಮಾಡಲಾಯಿತು.

ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ವೆಂಕಟರಮಣ, ಮಂಜುನಾಥ್, ಪದಾಧಿಕಾರಿಗಳಾದ ಅರುಣ,ಸೌಮ್ಯ,ಆಯಿಷಾ ,ಮಾಲಿನಿ,ಗೀತಾ,ಕಮಲ,ರಾಘವೇಂದ್ರ,
ಗoಗಾಧರ್,ರಘು, ಜಯಚಂದ್ರ, ನರಸಿಂಹಮೂರ್ತಿ, ಹರೀಶ್, ವೇಣು ಮತ್ತಿತರರು ಇದ್ದರು.

Leave a Reply

Your email address will not be published. Required fields are marked *