ಹಾದಿ ತಪ್ಪುತ್ತಿರುವ ಹರೆಯದ ಯುವಬಾಳಿಗೆ ವಿವೇಕಾನಂದರ ವಿದ್ಯುತ್ ವಾಣಿಗಳು ದಾರಿ ದೀಪವಿದ್ದಂತೆ, ವಜ್ರದ ಹೊಳಪಿದಂತೆ
ಹದಿಹರೆಯದ ಮದಗಜಗಳ ಮದವಡಗಿಸಲು ವೀವೇಕಾಮೃತ ವಾಣಿಯೇ ಮದ್ದುವಿವೇಕ ನುಡಿಯೇ ಮುದ್ದು* ಎಲ್ಲಿ ಮಾಯವಾಯ್ತು? ಏನಾಯ್ತು ? ಆ ಯುವಕರ ದೇಶಪ್ರೇಮ, ಆ ಯುವತಿಯರ ನಾಡ ಭಕ್ತಿ, ಸ್ವಾತಂತ್ರ್ಯ, ಸ್ವಾಭಿಮಾನ, ಸ್ವಾವಲಂಬನೆ, ಪರಾಕ್ರಮ, ಕೆಚ್ಚೆದೆಯ ಕಲಿತನ, ನಾಡುನ್ನತಿಯ ಹೋರಾಟ, ಬಾಳು ಸಾರ್ಥಕತೆಯ ತುಡಿತ - ಮಿಡಿತ, ಆತ್ಮಶಕ್ತಿಯ ಸೆಳೆತ ಎಲ್ಲಿ ಅಡಗಿತು? ಭಗವಾನ ಬುದ್ಧ, ಬಸವಣ್ಣ, ವೀರ ಭಗತ್ ಸಿಂಗ್, ರಾಜಗುರು, ಸುಖದೇವ, ಚಂದ್ರಶೇಖರ ಆಜಾದ್, ಮಂಗಲ್ ಪಾಂಡೆ, ಸುಭಾಷ್ ಚಂದ್ರ ಬೋಸ್, ಅರವಿಂದ, ಸ್ವಾಮಿ ವಿವೇಕಾನಂದ, ಬಾಬಾ ಸಾಹೇಬ ಅಂಬೇಡ್ಕರ್, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ, ಮೈಲಾರ ಮಹಾದೇವ, ವೀರ ಸಿಂಧೂರ ಲಕ್ಷ್ಮಣ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಚನ್ನ ಭೈರಾದೇವಿ, ಒನಕೆ ಓಬವ್ವ ಮುಂತಾದ ಮುತ್ತು, ರತ್ನ, ಹವಳ, ವಜ್ರ ಸದೃಶ, ಸದೃಢ ವ್ಯಕ್ತಿಗಳ ಜೀವನಾದರ್ಶ ಎಲ್ಲಿ ಮರೆಯಾಯ್ತು. !? ೨೧ ನೇ ಶತಮಾನದಲ್ಲಿ ಬೆರಳೆಣಿಕೆಯಷ್ಟು ಯುವಜನತೆಯು ಸಂಸ್ಕಾರಯುತ - ಸೌಜನ್ಯಶೀಲ ಪರೋಪಕಾರಿ ಬದುಕು ನಡೆಸುತ್ತಿದ್ದು; ಇನ್ನುಳಿದ ಬಹುತೇಕ ಯುವ ಜನೋಸ್ತಮ ನೋಡಿದಲೆಲ್ಲ ಸಾರಾಯಿ, ಬೀರು, ಬ್ರ್ಯಾಂಡಿ ಕುಡಿದು ಓಲಾಡುತ, ಚರಂಡಿಯ ಪಕ್ಕದಲ್ಲಿ ಬಿದ್ದು ಒದ್ದಾಡುತ, ಪಬ್ಬು - ಮಬ್ಬಿನ, ಮಟಕಾ - ಗುಟಕಾ, ಜೂಜು - ಮೋಜಿನ ಅಮಲಿನಲ್ಲಿ ತೇಲಾಡುತ, ತಂದೆ - ತಾಯಿಯರನ್ನು ಅನಾಥಶ್ರಮಕ್ಕೆ ಅಟ್ಟುವ, ಬಂಧು - ಬಳಗ, ಗುರು - ಹಿರಿಯರಿಗೆ ಗುರಾಯಿಸುವ ನೀಚ ಹೇಡಿಗಳ ದಂಡು ನಿದ್ದೆಗೆಡಿಸಿದೆ, ಕೊಲೆ - ಸುಲಿಗೆ, ಮೋಸ - ವಂಚನೆ, ಅತ್ಯಾಚಾರ - ಅನಾಚಾರಗಳು ಮರ್ಯಾದಸ್ಥ ಜನತೆಯು ತಕೆತಗ್ಗಿಸುವಂತೆ ಮಾಡಿದೆ, ಭ್ರಷ್ಟಾಚಾರ - ಹತ್ಯಾಚಾರ ಸಾಮಾಜಿಕ ಪಿಡುಗುಗಳಾಗಿ ದೇಶವನ್ನು ಕಿತ್ತು ತಿನ್ನುತ್ತಿವೆ. ಜನ ಸಾಮಾನ್ಯರ ಜೀವನ ಅಧೋಗತಿಗೆ ತಗ್ಗಿದೆ. ಜಾತಿ - ವಿಜಾತಿ, ಧರ್ಮ - ಅಧರ್ಮ, ಮೇಲು - ಕೀಳು, ವರ್ಣ - ಲಿಂಗ ಭೇದ ಮುಸುಕು ಹಾಕಿ ಸವಾರಿ ಮಾಡುತಿದೆ. ಧರ್ಮ - ಧರ್ಮಗಳ ಪೀಕಲಾಟದಲ್ಲಿ ಆಧ್ಯಾತ್ಮ ಮಸಕಾಗಿದೆ. ರಾಜಕೀಯ ಅರಾಜಕತೆಗೆ ಇಂದಿನ ಯುವ ಜನಾಂಗ ದಾಳವಾಗುತ್ತಿದೆ. "ಅನಕ್ಷರಸ್ಥ ಯುವ ಜನಾಂಗ - ಪ್ರಜ್ಞಾವಂತ ಪ್ರಜಾಪ್ರಭುತ್ವಕ್ಕೆ ಹೆಗ್ಗುರುತು" ಎಂಬುದನ್ನು ತಲೆಕೆಳಗಾಗಿಸಿದೆ. ಅಜ್ಞಾನ - ಮೌಢ್ಯ - ಅಂಧಶ್ರದ್ಧೆಗಳು ಪರಾಕಾಷ್ಠೆಗೆ ತಲುಪಿವೆ. ಬಡವರ - ದೀನರ - ದರಿದ್ರರ ಕಷ್ಟ, ಸಂಕಟ, ನೋವು ಬಾಧೆಯ ನೋಗವನು ಇಳಿಸದೆ ಸ್ವಾರ್ಥ ಯುವ ಜನತೆ ಅಟ್ಟಹಾಸದಿ ನಗುತಿದೆ. ಮಾನವೀಯ ಮೌಲ್ಯಗಳನ್ನು ಮೂರು ಕಾಸಿಗೆ ಹರಾಜು ಹಾಕಿರುವ, ಕೆಲವು ತಿಳಿಗೇಡಿ ಯುವಜನತೆ ಸ್ವಾಸ್ಥ್ಯ ಸಮಾಜಕ್ಕೆ ಅಂಟುರೋಗವಾಗಿ, ಮಹಾನುಭಾರವ ತತ್ವ ಸಿದ್ಧಾಂತಕ್ಕೆ ಮಸಿ ಬಳೆಯುವಂತಾಗಿದೆ. ಈ ಸಂದಿಗ್ಧ ಸಂದರ್ಭದಲ್ಲಿ ಯುವ ಜನಾಂಗಕ್ಕೆ ಸರಿದಾರಿ ತೋರುವ, ಆತ್ಮ ವಿಶ್ವಾಸ ಹೆಚ್ಚಿಸುವ, ಧೈರ್ಯ ಸ್ಪೂರಿಸುವ ಸದ್ಗುರು ಸ್ವಾಮಿ ವಿವೇಕಾನಂದರ ಸಿಡಿಲು - ಮಿಂಚಿಗೂ ವೇಗವಾದ ಫಲಶೃತಿ ನೀಡುವ ಯುವ ಜಾಗೃತ ವಾಣಿಯ ಅನುಷ್ಠಾನದ ಚಿಂತನ - ಮಂಥನ ಮಾಡೋಣ. ಭಾರತದ ಅತ್ಯಂತ ಪ್ರಸಿದ್ದ ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಸ್ವಾಮಿ ವಿವೇಕಾನಂದರು ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿದ್ದರು. ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಪ್ರತಿವರ್ಷ ಜನವರಿ ೧೨ರಂದು "ರಾಷ್ಟ್ರೀಯ ಯುವ ದಿನ"ವೆಂದು ಆಚರಣೆ ಮಾಡಲಾಗುತ್ತಿದೆ. ಸ್ವಾಮಿ ವಿವೇಕಾನಂದರ ಮೂಲ ಹೆಸರು ನರೇಂದ್ರನಾಥ ದತ್ತ. ಇವರು 1863, ಜನವರಿ 12ರಂದು ಕೊಲ್ಕತ್ತಾದಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ, ತಾಯಿ ಭುವನೇಶ್ವರಿ ದೇವಿ. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ 'ವಿವೇಕಾನಂದ' ಎಂಬ ಹೆಸರನ್ನು ಪಡೆದರು. ವಿವೇಕ ಎಂದರೆ ಜ್ಞಾನ - ಗ್ರಹಣಶಕ್ತಿ. ಜ್ಞಾನದಿಂದುಂಟಾಗುವ ಸಂತೋಷವೇ ಆನಂದ. ಅದೇ ವಿವೇಕಾನಂದ. ನಾವು ಗ್ರಹಿಸುವುದು ಮಾತ್ರವೇ ನಮ್ಮ ಪಾಲಿಗೆ ಅಸ್ತಿತ್ವದಲ್ಲಿದೆ ಎಂದರ್ಥ. ಕೇವಲ ೩೯ ವರ್ಷಗಳು ಬದುಕಿದ್ದ ವಜ್ರಕಾಯ ಸ್ವಾಮಿ ವಿವೇಕಾನಂದರು ಹರೆಯ ಎಂಬ ಮಾಂತ್ರಿಕ ಶಕ್ತಿ ಕುಗ್ಗುವ ಮುನ್ನವೇ ಮಾನವ ಜನಾಂಗ ಎಂದು ಮರೆಯದ ಅತ್ಯಮೂಲ್ಯ ಸಾಧನೆ ಮಾಡಿದರು. ಸಂಘದೋಷದ ನಾನಾ ಕಾರಣದಿಂದ ಹಾದಿ ತಪ್ಪಿ ಹದಗೆಟ್ಟಿರುವ ಹದಿಹರೆಯದ ಮದಗಜಗಳ ಮದವಡಗಿಸಲು ವೀವೇಕಾಮೃತ ವಾಣಿಯೇ ಮದ್ದು, ವಿವೇಕ ನುಡಿಯೇ ಮುದ್ದು. ಭಾರತ ದೇಶದ ಸರಾಸರಿ ಜನಸಂಖ್ಯೆಯಲ್ಲಿ ೪೦ ಪ್ರತಿಶತ ಯುವಕ ಯುವತಿರಿದ್ದು; ಅವರ ಶಕ್ತಿ ಕವಲು ದಾರಿಯಲ್ಲಿ ಸೋರಿ, ಸೊರಗುತಿದೆ. ವಿಶ್ವದ ಬಹುಪಾಲು ಯುವಜನತೆಯು ನಮ್ಮ ದೇಶದಲ್ಲಿ ಇರುವುದು ದೇಶಾಭಿವೃದ್ದಿಗೆ ಮಹಾಭಾಗ್ಯವೇ ಆದರೆ ಸಂಗವಲ್ಲದವರ ಸಂಗದಲ್ಲಿ ಸಿಲುಕಿ ದೌರ್ಜನ್ಯ ಮತ್ತು ಅಶ್ಲೀಲ ಕಾರ್ಯದಲ್ಲಿ ಮಗ್ನರಾಗಿರುವುದು ದೌರ್ಭಾಗ್ಯವೇ ಸರಿ. "ಯುವಶಕ್ತಿ ಚುಲುಮೆ ಯಾವ ದೇಶಕ್ಕು, ಯಾವ ಕಾಲಕ್ಕೂ ಜಗಕಾಸಿ ಬಡಿದ ಕುಲುಮೆ" ಎಂಬ ವಿವೇಕಾನಂದರ ನುಡಿ ದರ್ಶನದ ಫಲ ಕಾಣಲು ಯುವಜನಾಂಗ ಕಾರ್ಯೋನ್ಮುಖರಾಗಬೇಕು. ಬದುಕನ್ನು ಹಾಳುಗೇಡುವ, ಅಲ್ಪ ಸುಖದ ಜಾಲದಿಂದ, ಆಕರ್ಷಣೆಯಿಂದ ಹೊರಬಂದು ವಿದ್ಯೆ ಎಂಬ ಸಂಜೀವಿನಿಯಿಂದ ಅಸಾಧ್ಯವಾದುದನ್ನು ಸಾಧಿಸಬೇಕು. ಸರಿದಾರಿಯಲ್ಲಿ ಯುವತ್ವವನ್ನು ದುಡಿಸಿ ಜಗತ್ತಿಗೆ ಆದರ್ಶವಾಗಬೇಕು. ಚತುರ್ವರ್ಣಗಳಲ್ಲಿ ಸಮನ್ವಯತೆ ತರಬೇಕು. ಅದು ಯುವಶಕ್ತಿಯಿಂದ ಸಾಧ್ಯವಿದೆ. "ನನಗೆ ಬೇಕಾದುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು ಮತ್ತು ಸಿಡಿಲಿನಂಥ ಮನಸ್ಸುಗಳು. ಅಂತಹ ಕೆಲವೇ ತರುಣರಿಂದ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲೇ". ಎಂದು ಯುವಜನಾಂಗದ ಬಗ್ಗೆ ಅಪಾರ ನಂಬಿಕೆ ಇರಿಸಿದ್ದ ಸಂತ ಮಹಾಂತ ನರೇಂದ್ರರು. ವಿಶ್ವ ಕವಿ ಕುವೆಂಪುರವರಿಗೆ ಸ್ಪೂರ್ತಿಯಾಗಿ ವಿಶ್ವ ಮಾನವ ತತ್ತ್ವ ಪ್ರಣಾಳಿಕೆ ಸಂದೇಶ ಬರೆಸಲು ಮೂಲಧಾತು ಆದವರು. ಸ್ವಾಮಿ ವಿವೇಕಾನಂದರ ಹಂಬಲದಂತೆ ಜಾತಿ ರೋಗದ ಭೀತಿಯನ್ನು ಸುಟ್ಟುಹಾಕಿ ವಿಶ್ವಮಾನವರಾಗಬೇಕು ಎಂಬುದು ಈ ಲೇಖನದ ಕಳಕಳಿಯು ಸಹ ಹೌದು. ಗಾಂಜಾ, ಡ್ರಗ್ಸ, ಖೈನಿ, ಜರ್ದಾ ನಸೆಯ ನಿಷೆಯಲ್ಲಿ ಯೌವನವನ್ನು ನಶಿಸಿಕೊಳ್ಳುತ್ತಿರುವ ಯುವಜನಾಂಗಕ್ಕೆ ವಿವೇಕ ನುಡಿ ಜ್ಯೋತಿ ಉಷೆಯಾಗಿ ಬಾಳ ಬೆಳಗಲು ಕೈ ಬಿಸಿ ಕರೆಯುತಿದೆ. ಅಜಾಕರುಕತೆಯ ಅತೀಯಾದ ತಂತ್ರಜಾಲ ಬಳಕೆ, ವೆಗದ ವಾಹನ ಚಲಾವಣೆಯ ಹಯಚ್ಚಾಟದಿಂದ ಎಷ್ಟು ಯುವಕರು ತಮ್ಮ ಅಮೂಲ್ಯ ಜೀವವನ್ನು ಕಲೆದುಕೊಂಡು ಪಾಲಕರನ್ನು ಚಿಂತೆಯೆಂಬ ಚಿತೆಯಲ್ಲಿ ದೂಡಿದ್ದಾರೆ. ಜಾಗೃತರಾಗಿ ನಷೆಯ ದಾಸ್ಯದಿಂದ ಹೊರ ಬನ್ನಿ. ದುಷ್ಚಟಗಳ ಕಬಂದ ಬಾಹುವಿನಿಂದ ಬಿಡಿಸಿಕೊಂಡು ವಿವೇಕ ವಿದ್ಯುತ್ ವಾಣಿಯ ಸೆಳೆತದಲ್ಲಿ ಸರ್ವ ದುಷ್ಟಗುಣಗಳನ್ನು ದಹಿಸಿ ಚಾರಿತ್ರ್ಯಿಕ ವಂತರಾಗಿ. ಭೋರ್ಗರೆಯುತ ಕಲ್ಮಶಗಳನ್ನು ತಟಕ್ಕೆ ಹಾಕುವ ಜಲಧಿ ತರಂಗಗಳಂತೆ ಅವಗುಣಗಳನ್ನು ಸಮಾಧಿ ಮಾಡ ಬನ್ನಿ ಯುವ ಮಿಯ್ರರೇ. ವಜ್ರಾಯುಧ ಎಂಬ ಯೌವನದಲ್ಲಿ ಅಂಧಕಾರ ಸೀಳಿ ಸುಜ್ಞಾನ ಸುಧೆಯನ್ನು ಹರಿಸೋಣ. ಅಸಾಧಾರಣವಾದುದನ್ನು ಸಾಧಿಸೋಣ. ಪರಹಿತ ಚಿಂತನೆ, ಪರೋಪಕಾರ ಸೇವೆಯಲ್ಲಿ ವಿಶ್ವ ಬಂಧುಗಳಾಗೋಣ. ವಿಶ್ವ ಮಾನವ್ಯದ ಸೇತುವೆ ಕಟ್ಟೊಣ. "ಹಳೆಯ ಧರ್ಮಗಳು ಹೇಳಿದವು, ದೇವರನ್ನು ನಂಬದವನು ನಾಸ್ತಿಕ ಎಂದು. ಹೊಸ ಧರ್ಮವು ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆ ಇಲ್ಲವೋ ಅವನು ನಾಸ್ತಿ"ಕ ಎಂದು ಹೇಳುತ್ತ ನವ ಭಾಷ್ಯ ಬರೆದ ವಿವೇಕರು ತಮ್ಮ ಹರೆಯದ ವಯದಲ್ಲೇ ಭಾರತದ ಹಿರಿಮೆಯನ್ನು ಜಗತ್ತಿಗೆ ಸಾರಿದರು. ಹಾಗಾಗಿ ಹರೆಯವನ್ನು ಪೋಲು ಮಾಡದೆ ಹಿರಿಯ ಸಾಧನೆ ಮಾಡಬೇಕು. "ಪರ್ವತವನ್ನೇ ಪುಡಿಗಟ್ಟಬಲ್ಲೇ, ಸಮುದ್ರವನ್ನೇ ಪಾನಮಾಡಬಲ್ಲೇ" ಎಂಬ ಅಚಲ ಆತ್ಮವಿಶ್ವಾಸ ಮೈಗೂಡಿಸಿಕೊಂಡು ಯೋಗ್ಯ ಜೀವನ ನಡೆಸಬೇಕೆಂಬುದಕ್ಕೆ ಕಡಲಾಳದಲ್ಲಿ ಜ್ಞಾನ ನಿರತ ವೀರ ಯೋಗಿವರ್ಯ ವಿವೇಕಾನಂದರೆ ಮಹಾ ನಿದರ್ಶನ. ಹೇಡಿತನದ ಹೆಂಟೆ ಒಡೆದು ಧೀರರಾಗಿ. ವೀರರಾಗಿ ಬಡವರಿಗೆ ನೆರವಾಗಿ, ಕ್ರಿಯಾ ಶಕ್ತಿ, ಜ್ಞಾನ ಶಕ್ತಿ, ಆತ್ಮಶಕ್ತಿ ಒಂದುಗೂಡಿಸಿ ಮಹತ್ಸದಾನೆ ಮಾಡಿ ಎಂಬುವುದೇ ವಿವೇಕರ ನುಡಿಯ ತಾತ್ಪರ್ಯವಾಗಿದೆ. ಮಾರ್ಗದರ್ಶನವು ಆಗಿದೆ. "ಶೈಶವಾವಸ್ಥೆಯಿಂದಲೇ ಮಕ್ಕಳು ಶಕ್ತಿ ಶಾಲಿಗಳಾಗುವಂತೆ ಮಾಡಿ. ಅವರಿಗೆ ದುರ್ಬಲತೆಯನ್ನಾಗಲಿ, ಮೂಢ ಆಚರಣೆಗಳನ್ನಾಗಲಿ ಬೋಧಿಸಬೇಡಿ. ಅವರನ್ನು ಶಕ್ತಿವಂತರನ್ನಾಗಿ ಮಾಡಿ". ವಿದ್ಯಾರ್ಥಿಗಳು ಬತ್ತ ತುಂಬುವ ಚೀಲಗಳಾಗದೆ. ಸದಾ ಫಸಲನ್ನು ನಿಡುವ ಬತ್ತದ ಗದ್ದೆಗಳಾಗಲಿ ಎಂದು ಹಂಬಲಿಸಿದ ಯುವನಿಧಿ ಕ್ಷಾತ್ರತೇಜ ವಿವೇಕರು. ಮಹಾನ ಸಾಧಕ ವಿವೇಕಾನಂದರ ಜಯಂತಿ ನಿಮಿತ್ತ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸುವ ಯುವ ಜನೋತ್ಸವ, ಯುವಜನ ಮೇಳ, ಯುವೋತ್ಸವದಲ್ಲಿ ಏರ್ಪಡಿಸುವ ಸಾಂಸ್ಕೃತಿಕ ಸ್ಪರ್ಧೆಗಳಾದ ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ, ನಾಟಕ, ರೂಪಕ, ಕ್ವಿಜ್, ಗಾಯನ, ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಯುವಕ - ಯುವತಿಯರು ತಮ್ಮ ಬಾಳನ್ನು ವಿಕಸಿಸಿಕೊಂಡು, ಸಮೂದಾಯದ ವಿಕಾಸಕ್ಕೆ ಕೈಜೋಡಿಸಬೇಕು. ಜಗತ್ತಿಗೆ ನಿಮ್ಮ ಪ್ರತಿಭಾಶಕ್ತಿ ಪ್ರದರ್ಶಿಸಬೇಕು. "ಕಷ್ಟದಿಂದ ಪಾರಾಗುವ ದಾರಿಯನ್ನು ತೋರಿಸುವವನೇ ಮಾನವಕೋಟಿಯ ಸ್ನೇಹಿತ" ಎಂದು ಹೇಳಿದ ವಿವೇಕರು ಭಾರತ ದೇಶದ ದಲಿತರು, ಅವಕಾಶ ವಂಚಿತರು, ಬಡವರನ್ನು ಮೇಲೆತ್ತಲು ಹಾಗೂ ಅವರಿಗೆ ಸುಖ ಸಂತೋಷ ನೀಡಲು ತಮ್ಮ ಬದುಕನ್ನೇ ಸಮರ್ಪಿಸಿಕೊಂಡರು. ಮೇಣದಂತೆ ಉರಿದು ಬೆಳಕಾಗಿ ಬೆಂದವರ - ನೊಂದವರ ಬಾಳಿಗೆ ದನಿಯಾದರು. ಸರ್ವ ಜನಾಂಗದ ಮಾನವ ಕೋಟಿಯ ಸ್ನೇಹಿತರಾದವರು. ತಮಗೆ ಎಷ್ಟೇ ಕಷ್ಟಗಳಿದ್ದರು ಅದನ್ನು ತೊಡಿಕೊಳ್ಳದೆ, "ವಿಕಾಸವೇ ಜೀವನ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ; ಸ್ವಾರ್ಥವೆಲ್ಲಾ ಸಂಕೋಚ; ಆದುದರಿಂದ ಪ್ರೇಮವೇ ಬದುಕಿನ ಧರ್ಮ". ಎಂದು ನಿಸ್ವಾರ್ಥತೆಯ ಮಹತ್ತವನ್ನು, ಅದರ ಘನತೆಯನ್ನು ಯುವಜನತೆಗೆ ಅರ್ಥೈಸಿದವರು. "ಸ್ವಾರ್ಥವೇ ಅಧರ್ಮ; ನಿ:ಸ್ವಾರ್ಥವೇ ಧರ್ಮ. ಸ್ವಾರ್ಥತೆಯೇ ಪ್ರತಿಯೊಬ್ಬನಲ್ಲಿಯೂ ಇರುವ ಪ್ರತ್ಯಕ್ಷ ರಾಕ್ಷಸ. ಪ್ರತಿಯೊಂದು ಬಗೆಯ ಸ್ವಾರ್ಥವೂ ಸೈತಾನನೇ. ಎಂದು ಹೇಳುತ್ತ ಭೋಗ ಜೀವನದ ಅನರ್ಥತೆ ಮತ್ತು ವೈಭೋಗದ ಜೀವನದ ನಶ್ವರತೆಯನ್ನು ತಿಳಿಸಿ ಸಮಾಜ ಸೇವೆಗೆ ತಮ್ಮನ್ನೆ ಸಮರ್ಪಣೆ ಮಾಡಿಕೊಂಡ ಮಹಾಂತರು. "ಹಿಂತಿರುಗಿ ನೋಡಬೇಡಿ. ಯಾವಾಗಲೂ ಮುನ್ನಡೆಯಿರಿ. ಅನಂತಶಕ್ತಿ, ಅನಂತ ಉತ್ಸಾಹ, ಅನಂತ ಸಾಹಸ ಮತ್ತು ಅನಂತ ತಾಳ್ಮೆ ಇವುಗಳಿದ್ದರೆ ಮಾತ್ರ ಮಹತ್ಕಾರ್ಯಗಳನ್ನು ಸಾಧಿಸಲು ಸಾಧ್ಯ". ಎಂಬುದಕ್ಕೆ ವಿವೇಕಾನಂದರು ಅಮೇರಿಕದ ಷಿಕಾಗೋದಲ್ಲಿ ೧೮೯೩ ಸಪ್ಟೆಂಬರ್ ೧೧ರಲ್ಲಿ ಜಾತಿ ದ್ವೇಷ ಹೊಗಲಾಡಿಸಲು ಆಯೋಜಿಸಿದ್ದ ಸರ್ವ ಧರ್ಮ ಜಾಗತಿಕ ಸಮ್ಮೇಳನದಲ್ಲಿ ನನ್ನ ಸಹೋದರ ಸಹೋದರಿಯರೇ ಎಂಬ ನುಡಿ ಆಪತ್ತತೆಯಿಂದ ವಿಶ್ವ ಪ್ರತಿನಿಧಿಗಳ ಹೃದಯ ಸಿಂಹಾಸನದಲ್ಲಿ ವಿರಾಜಮಾನರಾಗುವುದರ ಮೂಲಕ ದಿಗ್ವಿಜಯ ಸಾಧಿಸಿದ ಭಾರತದ ಮೊದಲ ಸಂತನ ಸಾಧನೆ ಅಮೋಘ. ಅನಂತಾನಂತ ಶಕ್ತಿ ಇರುವುದು ಹದಿ ಹರೆಯದ ವಯೋಮಾನದಲ್ಲಿ. ಚೆಂಡಿನಂತೆ ಪುಟಿದೇಳುವ ಉತ್ಸಾಹ ಶಕ್ತಿಯನ್ನು ನಾಡುನ್ನತಿಗೆ ಅಡಿಗಲ್ಲಾಗಿಸಬೇಕು. "ನಿಮ್ಮ ನಂಬಿಕೆಯಂತೆ ನೀವಾಗುತ್ತೀರಿ. ನಿಮ್ಮನ್ನು ನೀವು ಋಷಿಗಳೆಂದು ನಂಬಿದರೆ ನೀವು ನಾಳೆ ಋಷಿಗಳೇ ಆಗುತ್ತೀರಿ". ಎಂದು ಹೇಳಿದ ವಿವೇಕರು ಋಷಿಗಳೇ ಆದರು. ಮಾನವ ಜನಾಂಗಕ್ಕೆ ಅಪರಿಮಿತ ಖುಷಿಯ ವೃಷ್ಟಿಯನ್ನೆ ಸುರಿದರು.
ಯುವ ಜನಾಂಗದಲ್ಲಿ ಸ್ವಾಭಿಮಾನ ಆತ್ಮಾಭಿಮಾನದ ಪ್ರಚಂಡ ಶಕ್ತಿಯನ್ನು ಬಡಿದೆಬ್ಬಿಸುವ ಭೈರಾಗಿ ಸ್ವಾಮಿ ವಿವೇಕಾನಂದರ ವಜ್ರ ಸದೃಶ ದಿವ್ಯ ಸಂದೇಶಗಳು
*ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ.
*ಜೀವನ ಎಂಬುದು ಕಠಿಣ ಸತ್ಯ, ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು.
*ನಮ್ಮ ಹಾಗೂ ದೇವರ ಬಗ್ಗೆ ನಮಗಿರುವ ನಂಬಿಕೆಯೇ ಹಿರಿಮೆಗೆ ಸ್ಪೂರ್ತಿ.
- ಶತಮೂರ್ಖ ಕೂಡ ತನ್ನ ಹೃದಯಕ್ಕೆ ಹತ್ತಿರವಾದ ಕೆಲಸವನ್ನು ಸಾಧಿಸಬಲ್ಲ. ಆದರೆ ಕೆಲಸವನ್ನು ತನ್ನ ಅಭಿರುಚಿಗೆ ತಕ್ಕಂತೆ ರೂಪಿಸುವವನು ಮಾತ್ರ ಬುದ್ಧಿವಂತ.
*ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಆದ್ದರಿಂದ ಏನನ್ನು ಯೋಚಿಸುತ್ತೀರೋ ಅದರ ಬಗ್ಗೆ ಎಚ್ಚರದಿಂದಿರಿ.
*ದಿನದಲ್ಲಿ ಒಮ್ಮೆಯಾದರು ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ.
*ಅದೃಷ್ಟ ಎಂದರೆ ಅವಕಾಶವನ್ನು ಪಡೆಯುವವನು, ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು.
*ನಿಮಗಾಗಿ ಏನನ್ನೂ ಬಯಸಬೇಡಿ, ಎಲ್ಲವನ್ನೂ ಇತರರಿಗಾಗಿ ಮಾಡಿ, ಭಗವಂತನಲ್ಲೇ ಇರುವುದು ಅವನಲ್ಲೇ ಬಾಳುವುದು, ಚಲಿಸುವುದು ಎಂದರೆ ಇದೇ.
*ಶಕ್ತಿಯಲ್ಲ ನಿಮ್ಮೋಳಗೇ ಇದೆ, ನೀವು ಏನು ಬೇಕಾದರೂ ಮಾಡಬಲ್ಲಿರಿ ಎಲ್ಲವನ್ನೂ ಮಾಡಬಲ್ಲಿರಿ.
*ಸ್ವಾರ್ಥವೇ ಅಧರ್ಮ, ನಿಸ್ವಾರ್ಥವೇ ಧರ್ಮ. ಹೆಚ್ಚು ನಿಸ್ವಾರ್ಥಿಯಾದವನೇ ಧರ್ಮಿಷ್ಟ ಮತ್ತು ಶಿವನಿಗೆ ಹತ್ತಿರ. ನಿಜವಾಗಿಯೂ ಜೀವನ ಸೇವೆಯೇ ಶಿವನ ಸೇವೆ.
*ನಿಮ್ಮ ಮೇಲೆ ನೀವು ನಂಬಿಕೆ ಇಡಿ ಆಗ ಜಗತ್ತು ನಿಮ್ಮ ಪಾದದಡಿಯಲ್ಲಿರುತ್ತದೆ.
*ನಿಮ್ಮನ್ನು ನೀವು ಜಯಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.
*ಉನ್ನತ ಆಲೋಚನೆಗಳಿಂದ, ಅತ್ಯುನ್ನತ ಆದರ್ಶಗಳಿಂದ ನಿಮ್ಮ ಮೆದುಳನ್ನು ತುಂಬಿ; ಅವುಗಳನ್ನು ಹಗಲಿರುಳು ನಿಮ್ಮ ಮುಂದಿರಿಸಿಕೊಳ್ಳಿ. ಇದರಿಂದ ಮಹತ್ಕಾರ್ಯ ಉದಗಭವಿಸುತ್ತದೆ. - ಹೇಡಿಗಳು ಮತ್ತು ಬಲಹೀನರು ಮಾತ್ರ ಪಾಪವನ್ನು ಮಾಡುವುದು ಮತ್ತು ಸುಳ್ಳನ್ನು ಹೇಳುವುದು. ಧೀರರು ಯಾವಾಗಲೂ ನೀತಿವಂತರಾಗಿರುತ್ತಾರೆ. ಧೀರರಾಗಿ, ನೀತಿವಂತರಾಗಿ, ಸಹಾನುಭೂತಿಯುಳ್ಳವರಾಗಿ.
*ಒಂದು ಸಾಮಾನ್ಯ ಕೆಲಸವನ್ನು ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರಕುತ್ತದೆ. ಇನ್ನೂ ಸಹಸ್ರಾರು ನುಡಿ ಮುತ್ತುಗಳನ್ನು ನುಡಿದು ನಡೆದು ದಾರಿ ತೋರಿದ ವಿಶ್ವ ದಿಗ್ವಿಜಯಿ ವಿಶ್ವ ಭುವನೇಶ್ವರಿಯ ಗರ್ಭ ಸಂಭೂತ, ಗುರು ಪರಮಹಂಸರ ಪರಮ ಶಿಷ್ಯ, ಶಾರದಾಂಬೆಯ ಮಾನಸಪುತ್ರ ಕನ್ಯಾಕುಮಾರಿಯ ವೀರ – ವೀರಾಗಿಯ ಬಲಿಷ್ಠ ಭಾರತ ನಿರ್ಮಾಣಕ್ಕೆ ಯುವಶಕ್ತಿ ಮೆಟ್ಟಿಲಾಗಲಿ."ಯಾವುದನ್ನು ಬಯಸಬೇಡಿ. ನಮ್ಮನ್ನು ದುಃಖಕ್ಕೊಳಪಡಿಸುವ ಎಲ್ಲ ಕಷ್ಟಗಳಿಗೂ ಆಸೆಯೇ ಕಾರಣ" ಎಂದು ಸಾರಿದ ವೇದಾಂತ ಶಿರೋಮಣಿ ವಿವೇಕರ ನುಡಿ ಸತ್ಯವಾದದ್ದು; ಲೋಕದಲ್ಲಿ ನಡೆದಿರುವ ಸಾಂಸಾರಿಕ ಒಡಕುಗಳು, ಸಂಬಂಧಗಳ ಬಿರುಕುಗಳಳಿಗೆ ಆಸೆಯೇ ಕಾರಣವಾಗಿದೆ. ಆದಿಯಲ್ಲಿ ಭಗವಾನ ಬುದ್ಧರು ಸಾರಿದ ಜಗತ್ತು ದುಃಖದಿಂದ ಕೂಡಿದೆ, ದುಃಖಕ್ಕೆ ಕಾರಣ ಆಸೆ. ಆಸೆಯನ್ನು ತ್ಯಜಿಸಿದರೆ ದುಃಖದಿಂದ ಪಾರಾಗಬಹುದು.ಆಸೆಎಂಬ ದುಃಖದಿಂದ ಹೊರಬರಲು ಅಷ್ಟಾಂಗ ಮಾರ್ಗಗಳನ್ನು ಅನುಸರಿಸಬೇಂಬ ಆರ್ಯ ಸತ್ಯಗಳನ್ನು ಅರಿತರೆ ಸಾಕು ಖಂಡಿತವಾಗಿ ಇಂದಿನ ಯುವ ಜನಾಂಗ ತಮ್ಮ ಕಾರ್ಯವೈಖರಿಯಿಂದ, ಮಾಸದ ಸತ್ಕಾರ್ಯಗಳ ನೆನಪುಗಳೊಂದಿಗೆ ವಿವೇಕರಂತೆ ಅಜರಾಮರರಾಗಬಹುದು. ಇನ್ನೂ ಮುಂದೊರೆದು ಹೇಳುವುದಾದರೆ "ಕಾಯಕವೇ ಕೈಲಾಸ" ಎಂಬ ಸರ್ವಕಾಲಿಕ ಸತ್ಯ ನುಡಿದ ಸಾಮರಸ್ಯ ಜ್ಯೋತಿ ಬಸವಣ್ಣನವರ "ಹುಸಿಯ ನುಡಿಯಲು ಬೇಡ... ವಚನೋಕ್ತಿಗಳನ್ನು ಅಳವಡಿಸಿಕೊಂಡರೆ ದೇಹವೆ ದೇಗುಲವಾಗಿ, ಕಾಯ - ಕಾಯಕವೇ ಕೈಲಾಸವಾಗಿ ಸರ್ವರ ಕಲ್ಯಾಣವಾಗುತ್ತದೆ. ಇದರತ್ತ ಯುವ ಸಮೂಹ ಶ್ರಮಿಸಿದಾಗ ವಿವೇಕ ಯುವದಿನದ ಫಲಶೃತಿಯಿಂದ ಆನಂದಭರಿತರಾಗಬಹುದು.
ಅನರ್ಥ ವಿಲಾಸ ಜೀವನದಿಂದ ವಿಶಾಲಾರ್ಥದ ವಿಕಾಸ ಜೀವನದೆಡೆಗೆ
ಮೌಢ್ಯ – ಕಂದಾಚಾರದಿಂದ ಜ್ಞಾನ – ಸದಾಚಾರ – ವಿಜ್ಞಾನ ಪಥದೆಡೆಗೆ
ಅಯೋಗ್ಯ ಭೋಗ ಸಂಗದಿಂದ ಯೋಗ – ಸುಯೋಗ – ಸತ್ಸಂಗದೆಡೆಗೆ
ತಾಮಸ – ವಿರಸದಿಂದ ಸಮರಸ – ಸಾಮರಸ್ಯದೆಡೆಗೆ
ಶತೃತ್ವ – ವೈರತ್ವದಿಂದ ಮಿತೃತ್ವ – ಭಾತೃತ್ವ – ಸೋದರತ್ವ, – ಸ್ನೇಹತ್ವ – ಪ್ರೇಮತ್ವದೆಡೆಗೆ
ಭಯೋತ್ಪಾದನೆ – ಯುದ್ಧ – ಹಿಂಸೆಯಿಂದ ಶಾಂತಿ – ಸತ್ಯ – ಪ್ರಗತಿಪಥದ – ಪ್ರಬುದ್ಧತೆಯೆಡೆಗೆ ಸಾಗಿದಾಗ ಯುವ ಹೃದಗಳು ಮಾಗಿ ಬಡತನ, ರೋಗ, ವ್ಯಾಧಿಯಲ್ಲಿ ಬಳಲುವವರಿಗೆ ಸಾಂತ್ವಾನ ನೀಡಲು ಸಾಧ್ಯ. "ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಶಿಕ್ಷಣ". ಎಂಬ ವಿವೇಕರ ಈ ನುಡಿ ವಿವೇಕಪೂರ್ಣವಾಗಿದ್ದು; ಪರಿಪೂರ್ಣತೆಯು ಮನುಷ್ಯರು ಪಡೆಯುವ ಶಿಕ್ಷಣ ಕ್ರಮದಿಂದ ಸಾಧ್ಯವಾಗುತ್ತದೆ. ಹಾಗಾಗಿ ಮೌಲ್ಯವರ್ಧಿತ, ಕೌಶಲ್ಯಪೂರ್ಣ ಶಿಕ್ಷಣ ಪಡೆದು ಧನ್ಯರಾಗಬೇಕು.
“ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ” . ಇದೆಲ್ಲ ಗುರುವೆಂಬ ಸಾರಥಿಯಿಂದ ಸಾಧ್ಯವಿದೆ. ಹಾಗೇ ನೋಡಿದರೆ “ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ದವೇ ಗುರು”. ಆ ಗುರುವಿನ ಸೆಳತಕ್ಕೊಳಗಾಗಿ ಎಲ್ಲ ಯುವಕ – ಯುವತಿಯರು ಎಲ್ಲಾ ಬಗೆಯ ದ್ವೇಷ, ಅಸೂಯೆ, ಮತ್ಸರ, ವೈಷಮ್ಯ, ಹಗೆ ವಿರೋಧವನ್ನು ಬದಿಗಿರಿಸಿ ನಿಷ್ಕಲ್ಮಶ, ನಿಷ್ಕಪಟ, ನಿಷ್ಪಕ್ಷಪಾತ ಮಗು ಸ್ವಭಾವದ ಜೊತೆ ಜೊತೆಗೆ ಪ್ರಬುದ್ಧ ವಿಚಾರ, ಸ್ಪಷ್ಟ ನಿರ್ಧಾರ ಶ್ರೇಷ್ಠ ಗುರಿಯೊಂದಿಗೆ ಮುನ್ನಡೆದಾಗ “ದರಿದ್ರ ದೇವೋಭವ” ನುಡಿ ಜೀವತಾಳಿ ಕಲ್ಯಾಣ ಸಾಧ್ಯ ಉದ್ಧಾರ ಸಾಧ್ಯ. ಸಾಕ್ಷಾತ್ಕಾರ ಸಾಧ್ಯ. ವಿವೇಕಪೂರ್ಣ ಭಾರತ ನಿರ್ಮಾಣ, ವಿಶ್ವ ಗುರು ಭಾರತ ಕನಸು ನನಸಾದೀತು.!?
ಜೈ ವಿವೇಕಾನಂದ, ಜೈ ಪ್ರಬುದ್ಧ ಭಾರತ, ಜೈ ವಿವೇಕ ವಿದ್ಯುತ್ ವಾಣಿ
ಸುಹೇಚ ಪರಮವಾಡಿ
ಸುಭಾಷ್ ಹೇಮಣ್ಣಾ ಚವ್ಹಾಣ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಜುನಾಥ ನಗರ, ಹುಬ್ಬಳ್ಳಿ ಶಹರ, ೭೯೭೫೦ ೨೬೭೨೪
