

ಬ್ಯಾಟರಾಯನಪುರ : ಅಲಂಕೃತ ಗೊಂಡಿದ್ದ ಎತ್ತುಗಳು, ರಾಶಿಪೂಜೆ, ಚಿತ್ತಾರದ ರಂಗೋಲಿಗಳು, ಬಾನಂಗಳಲ್ಲಿ ಹಾರಾಡಿದ ಗಾಳಿಪಟ ಗಳು, ಹಳ್ಳಿ ಆಟಗಳು, ಜಾನಪದ ಕಲೆಗಳ ಅನಾವರಣ, ಕರಕುಶಲ ವಸ್ತುಗಳು, ಸಿರಿಧಾನ್ಯಗಳ ಉತ್ಪನ್ನಗಳು ಮತ್ತು ತಿಂಡಿ– ತಿನಿಸುಗಳ ಮಾರಾಟ, ಅಲಂಕೃತ ಗೊಂಡಿದ್ದ ಎತ್ತಿನ ಬಂಡಿಯಲ್ಲಿ ಸವಾರಿ ಮಾಡಿ ಖುಷಿಪಟ್ಟ ನಾಗರಿಕರು, ಒಟ್ಟಾರೆ ಗತ ಕಾಲದ ಗ್ರಾಮೀಣ ಸೊಗಡಿನ ಸಂಕ್ರಾಂತಿ ಹಬ್ಬದ ವಾತಾವರಣ ಅಲ್ಲಿ ಮನೆಮಾಡಿತ್ತು.
ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆ.ಬಿ.ಜಿ ಸ್ವಯಂಸೇವಕರ ತಂಡದ ವತಿಯಿಂದ ಜಕ್ಕೂರಿನ ಅರ್ಕಾವತಿ ಬಡಾವಣೆಯ ಮೈದಾನದಲ್ಲಿ ಆಯೋಜಿಸಿದ್ದ ‘ಸುಗ್ಗಿ–ಹುಗ್ಗಿ‘ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳಿವು.
ಗ್ರಾಮೀಣ ಸೊಗಡಿನ ಸಂಕ್ರಾಂತಿಯ ಸಂಕೇತವಾಗಿ ಆಚರಿಸಲಾಗುತ್ತಿರುವ ‘ಸುಗ್ಗಿ ಹುಗ್ಗಿ’ ಕಾರ್ಯಕ್ರಮಕ್ಕೆ ಕಂದಾಯ ಸಚಿವರು, ಬ್ಯಾಟರಾಯನಪುರ ಕ್ಷೇತ್ರದ ಶಾಸಕರೂ ಆದ ಕೃಷ್ಣಬೈರೇಗೌಡ ಭಾನುವಾರ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ ‘ಸಂಕ್ರಾಂತಿ ಹಬ್ಬವು ಗ್ರಾಮೀಣ ಸಂಸ್ಕೃತಿಯ ಸೊಗಡಿನ ಸಂಖೇತವಾಗಿದೆ. ಹಬ್ಬಗಳು, ನಮ್ಮ ಸಂಸ್ಕೃ ತಿ ಮತ್ತು ಜಾನಪದ ಕಲೆಗಳು ಗ್ರಾಮೀಣ ಪ್ರದೇಶದಲ್ಲಿಯೇ ಉಳಿಯುವುದು ಕಷ್ಟವಾಗುತ್ತಿದೆ, ಇನ್ನು ನಗರ ಪ್ರದೇಶಗಳ ಜನರಿಗೆ ಹಳ್ಳಿಯ ಸೊಗಡು ಮತ್ತು ದೇಸಿ ಸಂಸ್ಕೃತಿಯ ಪರಿಚಯವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ದಿಸೆಯಲ್ಲಿ ಇವೆಲ್ಲವನ್ನೂ ಪರಿಚಯಿಸುವ ಉದ್ದೇಶದಿಂದ ಕ್ಷೇತ್ರದಲ್ಲಿ ಪ್ರತಿವರ್ಷ ಈ ಕಾರ್ಯಕ್ರಮ ಆಯೋಜಿಸಲಾ ಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತೆ ಮೀನಾಕ್ಷಿ ಶೇಷಾದ್ರಿ, ಕಾಂಗ್ರೆಸ್ ಮುಖಂಡರಾದ ಎನ್.ಎನ್.ಶ್ರೀನಿವಾಸಯ್ಯ, ಎಂ.ಜಯಗೋಪಾಲ ಗೌಡ, ಎನ್.ಕೆ.ಮಹೇಶ್ಕುಮಾರ್, ಶಿವರಾಜ್, ಪಿ.ವಿ.ಮಂಜುನಾಥ ಬಾಬು, ವಿ.ವಿ.ಪಾರ್ತಿಬರಾಜನ್, ಟಿ.ಜಿ.ಚಂದ್ರು, ಎಂ.ಹನುಮಂತೇ ಗೌಡ, ಎಂ.ಆನಂದ್, ಆರ್.ಎಂ. ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ಸುಗ್ಗಿ ಹುಗ್ಗಿ ಕಾರ್ಯಕ್ರಮದ ಅಂಗವಾಗಿ ವಿವಿಧ ಜಾನಪದ ಕಲಾತಂಡಗಳಿಂದ ಡೊಳ್ಳುಕುಣಿತ, ಧ್ವಜದ ಕುಣಿತ, ವೀರಗಾಸೆ, ಚಿಲಿಪಿಲಿ ಗೊಂಬೆ, ಗೊರಗಜ್ಜ ನೃತ್ಯ ಪ್ರದರ್ಶನ ಮುಂತಾದ ಕಲಾ ಪ್ರದರ್ಶನಗಳು ಮನಸೂರೆ ಗೊಂಡವು.
ಮಕ್ಕಳಿಗಾಗಿ ಚಿತ್ರಬಿಡಿಸುವ ಮತ್ತು ಮಹಿಳೆಯರಿಗೆ ರಂಗೋಲಿ, ಜಾನಪದ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಹಳ್ಳಿ ಆಟಗಳು : ಪೋಷಕರು ತಮ್ಮ ಮಕ್ಕಳೊಂದಿಗೆ ಕುಂಟೆಬಿಲ್ಲೆ, ಗೋಲಿ, ಲಗೋರಿ, ಚಿನ್ನಿದಾಂಡು, ಹಗ್ಗ–ಜಗ್ಗಾಟ, ಕಣ್ಣುಕಟ್ಟಿ ಮಡಿಕೆ ಒಡೆಯುವ ಆಟಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಖುಷಿಪಟ್ಟರು.