ಯಲಹಂಕ : ಯಲಹಂಕ ತಾಲ್ಲೂಕು ಆಡಳಿತದ ವತಿಯಿಂದ. ಯಲಹಂಕ ಉಪನಗರದ ಹೊಯ್ಸಳ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 75ನೇ ಗಣ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಧ್ವಜಾರೋಹಣ  ನೆರವೇರಿಸಿ, ಧ್ವಜ ನಮನ ಸಲ್ಲಿಸಿದರು.

ನಂತರ ಅವರು ಮಾತನಾಡಿ ‘ವಿವಿಧ ಸಂಸ್ಥಾನಗಳಲ್ಲಿ ಹಂಚಿ ಹೋಗಿದ್ದ ಭಾರತವನ್ನು ಒಗ್ಗೂಡಿಸಿ, ಒಕ್ಕೂಟದ ಅಡಿಯಲ್ಲಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತವನ್ನು ಘೋಷಣೆ ಮಾಡಿದ ಸುದಿನವಿದು. ವಿಶ್ವದ ಹಲವು  ರಾಷ್ಟ್ರಗಳ ಸಂವಿಧಾನ ಅಧ್ಯಯನ ಮಾಡಿ, ಭಾರತಕ್ಕೆ ವಿಶ್ವದ ಅತಿದೊಡ್ಡ ಸಂವಿಧಾನ ಸಮರ್ಪಿಸಿ, ಅದರ ಅಡಿಯಲ್ಲಿ ನಡೆಯಲು ಮುನ್ನುಡಿ ಬರೆದ ಈ ದಿನವನ್ನು ದೇಶದೆಲ್ಲೆಡೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ನಗರದ ಮಣಿಕ್ ಷಾ ಪೆರೇಡ್ ಮೈದಾನದಲ್ಲಿ ಆಚರಿಸುವ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಬಿಟ್ಟರೆ ಯಲಹಂಕದಲ್ಲೇ ಅತಿ ಹೆಚ್ಚು ವಿಜೃಂಭಣೆಯಿಂದ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ.

ಯಲಹಂಕ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾದ ಮೇಲೆ ಆಚರಿಸಲಾಗುತ್ತಿರುವ 5ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಇದಾಗಿದ್ದು, ವಿವಿಧ ಶಾಲೆಗಳ ಮಕ್ಕಳಿಂದ ದೇಶದ ಭಾವೈಕ್ಯತೆ ಸಾರುವ ದೇಶಭಕ್ತಿ ಗೀತೆಗಳ ಗಾಯನ, ನೃತ್ಯ ರೂಪಕಗಳು, ಪೋಲಿಸ್ ಇಲಾಖೆ, ಎನ್ ಸಿಸಿ, ಶಾಲಾ ಮಕ್ಕಳ ಆಕರ್ಷಕ ಪಥಸಂಚಲನ ಸೇರಿದಂತೆ ಕಣ್ತಣಿಸುವ ಹಲವು ಕಾರ್ಯಕ್ರಮಗಳಿಂದ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನೆರವೇರುತ್ತಿದ್ದು,ತಾಲ್ಲೂಕು ಆಡಳಿತದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳುವ ಮೂಲಕ 75ನೇ ಗಣರಾಜ್ಯೋತ್ಸವಕ್ಕೆ ಹೆಚ್ಚಿನ ಮೆರಗು ತಂದುಕೊಟ್ಟಿದ್ದಾರೆ ಎಂದರು.

ಗಣರಾಜ್ಯೋತ್ಸವದ ಪ್ರಯುಕ್ತ ಪೋಲಿಸ್ ಇಲಾಖೆ, ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ, ದೇಶಭಕ್ತಿ ಗೀತೆಗಳ ಗಾಯನ, ನೃತ್ಯ ರೂಪಕಗಳು, ವಿವಿಧ ಸಾಂಸ್ಕೃತಿಕ ಕಾರ್ಯಗಳನ್ನು ಆಯೋಜಿಸಿದ್ದು ಶಾಲಾ ಮಕ್ಕಳು ಅತ್ಯಂತ ಉತ್ಸುಕತೆಯಿಂದ ತಮ್ಮ ಸಾಂಸ್ಕೃತಿಕ ಪ್ರತಿಭೆ ಅನಾವರಣಗೊಳಿಸಿದರು. 

ಇದೇ ಸಂದರ್ಭದಲ್ಲಿ ಯಲಹಂಕ ತಾಲ್ಲೂಕು ದಂಡಾಧಿಕಾರಿ ಅನಿಲ್ ಕುಮಾರ್ ಅರೋಲಿಕರ್, ಯಲಹಂಕ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಅಪೂರ್ವ ಕುಲಕರ್ಣಿ, ಬೆಂ.ಉತ್ತರ ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿ ಡಿ.ಓ.ರಮೇಶ್, ಯಲಹಂಕ ಎನ್-4 ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವತ್ಥ್ ನಾರಾಯಣ, ಉಪ ತಹಸೀಲ್ದಾರ್ ರಮೇಶ್ ಬಾಬು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಶಿಧರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

Leave a Reply

Your email address will not be published. Required fields are marked *