

ಎನ್ ಎಂ ಐ ಟಿಯಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ :
ಯಲಹಂಕ : ಜನರ ಜೀವನ ಮಟ್ಟ ಎಲ್ಲಾ ಹಂತಗಳಲ್ಲೂ ಸುಧಾರಣೆ ಯಾಗಲು ತಂತ್ರಜ್ಞಾನ ಬಹುಮುಖ್ಯ ಸಾಧನವಾಗಿದೆ ಎಂದು ಸ್ಪೇನ್ ನ ಸಾಲಮನ್ಕಾ ವಿಶ್ವವಿದ್ಯಾಲಯದ ರೆಕ್ಟರ್ ಡಾ.ಜುವಾನ್ ಕಾರ್ಚೊಡೊ ಅಭಿಪ್ರಾಯಪಟ್ಟರು.
ಐ.ಇ.ಇ.ಇ. ಸಹಯೋಗದೊಂದಿಗೆ ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಅಂತರ್ಜಾಲ, ಬಹುಮಾಧ್ಯಮ ಹಾಗೂ ಮಾಹಿತಿ ತಂತ್ರಜ್ಞಾನ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು ‘ಕೃತಕ ಬುದ್ಧಿಮತ್ತೆ ಹಾಗೂ ಮಾಹಿತಿ ತಂತ್ರಜ್ಞಾನದ ನೆರವಿನಿಂದ ಜನಸಾಮಾನ್ಯರು, ವಿಶೇಷವಾಗಿ ಕೃಷಿಕರು, ಕಾರ್ಮಿಕರು ಮತ್ತು ಶಿಕ್ಷಣ ತಜ್ಞರು ತಮ್ಮ ಕ್ಷೇತ್ರಗಳಲ್ಲಿ ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿದೆ. ನಮ್ಮೆಲ್ಲರ ಜೀವನಮಟ್ಟ ಇನ್ನಷ್ಟು ಸುಧಾರಿಸಬೇಕೆಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನ್ವೇಷಣೆಗಳ ನಿರಂತರ ವಿನಿಮಯವಾಗಬೇಕು ಎಂದರು.
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಶೈಕ್ಷಣಿಕ ಮುಖ್ಯಸ್ಥ ಡಾ.ವಿ.ಶ್ರೀಧರ್ ಮಾತನಾಡಿ ‘ಸಂಶೋಧನೆಗಳ ಪರಸ್ಪರ ವಿನಿಮಯಕ್ಕೆ ನಾವು ನಿರ್ಮಿಸಿಕೊಂಡಿರುವ ಭೌಗೋಳಿಕ ಗಡಿಗಳು ಅಡ್ಡಿಯಾಗಬಾರದು ಎಂಬ ಸದುದ್ದೇಶದಿಂದ ಸಾಕಷ್ಟು ಅಂತಾರಾಷ್ಟ್ರೀಯ ತಂತ್ರಜ್ಞಾನ ಸಮ್ಮೇಳನಗಳನ್ನು ಸಂಸ್ಥೆಯ ವತಿಯಿಂದ ಆಯೋಜಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಪಾನಿನ ವಸೇಡ ವಿ.ವಿ.ಯ ಡಾ.ಹಿರೊನೋರಿ ವಾಶಿಜಾಕಿ, ಮಾರಿಶಸ್ ನ ತಾಂತ್ರಿಕ ವಿ.ವಿ.ಯ ಮಹಾನಿರ್ದೇಶಕ ಡಾ.ದಿನೇಶ್ ಕುಮಾರ ಹರಿರಾಂ, ಇಟಲಿಯ ರೋಮ್ ವಿ.ವಿ.ಯ ಪ್ರಾಧ್ಯಾಪಕ ಡಾ.ಅಲೆಸ್ಸಾಂಡ್ರೊ ವಿಜಾರಿ, ಇಸ್ರೋ ಸಂಸ್ಥೆಯ ಯು.ಆರ್.ರಾವ್ ಉಪಗ್ರಹ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಹಿಮಾನಿ ಸೈನಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಹೊಸ ಅನ್ವೇಷಣೆಗಳನ್ನು ಕುರಿತು ಬೆಳಕು ಚೆಲ್ಲಿದರು.
ಕಾರ್ಯಕ್ರಮದಲ್ಲಿ ತಂತ್ರಜ್ಞಾನದ ಸಂಶೋಧನೆ ಹಾಗೂ ಹೊಸ ಅನ್ವೇಷಣೆಗಳ ನಿರಂತರ ವಿನಿಮಯದ ಒಪ್ಪಂದ ಪತ್ರಕ್ಕೆ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾ ಲಯದ ಪ್ರಾಂಶುಪಾಲರಾದ ಡಾ.ಎಚ್.ಸಿ. ನಾಗರಾಜ್ ಮತ್ತು ಸ್ಪೇನ್ ನ ಸಾಲಮನ್ಕಾ ವಿ.ವಿ.ಯ ರೆಕ್ಟರ್ ಡಾ.ಜುವಾನ್ ಕಾರ್ಚೊಡೊ ಅಧಿಕೃತ ಸಹಿ ಹಾಕಿದರು.
ಕಾರ್ಯಕ್ರಮದಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಸಂದೀಪ್ ಶಾಸ್ತ್ರಿ, ಸಮ್ಮೇಳನದ ಉಸ್ತುವಾರಿಗಳಾದ ಡಾ.ಪರಮೇ ಶಾಚಾರಿ, ಡಾ.ರಾಮಚಂದ್ರ ಸೇರಿದಂತೆ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಿದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ
9845085793
7349337989