


ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಬೆಟ್ಟಹಲಸೂರು ಗ್ರಾಮದ ತಾ.ಪಂ.ಮಾಜಿ ಸದಸ್ಯರು, ಬಿಜೆಪಿ ಮುಖಂಡರು ಹಾಗೂ ಯಲಹಂಕದ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಗಳಾದ ನಾಗರಾಜ್(ಬಾಬು) ರವರು ಹುತ್ತನಹಳ್ಳಿಯ ವೃದ್ಧಾಶ್ರಮಕ್ಕೆ ಕಂಬಳಿ ಮತ್ತು ಸಿಹಿ ವಿತರಣೆ, ಕುದುರಗೆರೆ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಜ್ಯಾಮಿಟ್ರಿ ಬಾಕ್ಸ್ ಗಳ ವಿತರಣೆ, ಕಾರ್ಮಿಕರಿಗೆ ಅನ್ನದಾನ ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ತಮ್ಮ ಜನ್ಮದಿನಾಚರಣೆ ಯನ್ನು ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಈ ವೇಳೆ ಮಾತನಾಡಿದ ಅವರು ಜನ್ಮದಿನ ಎಂಬುದು ಪ್ರತಿಯೊಬ್ಬರ ಬದುಕಿನಲ್ಲಿ ಪ್ರತಿವರ್ಷ ಬರುವ ವಿಶೇಷ ದಿನವಾಗಿದ್ದು, ಅದನ್ನು ಆಡಂಬರಕ್ಕಾಗಿ ಆಚರಿಸಿಕೊಳ್ಳದೆ ವಿವಿಧ ಸೇವಾ ಕಾರ್ಯಗಳ ಮೂಲಕ ಆಚರಸಿಕೊಂಡರೆ ಮಾತ್ರ ಅದು ಅರ್ಥಪೂರ್ಣ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.
ಕಳೆದ ಹಲವು ವರ್ಷಗಳಿಂದ ಶಾಲಾ ಮಕ್ಜಳಿಗೆ ನೋಟ್ ಪುಸ್ತಕ, ಲೇಖನ ಪರಿಕರಗಳ ವಿತರಣೆ, ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳಿಗೆ ಕೈಲಾದ ನೆರವು, ಬಡ ಶ್ರಮಿಕ ವರ್ಗದ ಜನತೆಗೆ ಅನ್ನಸಂತರ್ಪಣೆಯಂಥ ಸೇವಾ ಕಾರ್ಯಗಳ ಮೂಲಕವೇ ಆಚರಿಸಿಕೊಂಡು ಬಂದಿದ್ದೇನೆ. ಮುಂದೆಯೂ ಸಹ ಅದೇ ರೀತಿ ಆಚರಿಸಿಕೊಳ್ಳುತ್ತೇನೆ, ಇದಕ್ಕಾಗಿ ಅನಗತ್ಯ ಪ್ರಚಾರದ ಅವಶ್ಯಕತೆಯಿಲ್ಲ. ಬದುಕಿನಲ್ಲಿ ಹಂಚಿ ತಿನ್ನುವುದರಲ್ಲಿ ಇರುವ ಪರಮಸುಖ ಬೇರೆ ಇನ್ಯಾವುದರಲ್ಲೂ ಸಿಗುವುದಿಲ್ಲ. ಒಂದು ವೇಳೆ ಭಗವಂತ ಸ್ವಾರ್ಥಿಯಾದರೆ ಭೂಮಿಯ ಮೇಲೆ ಸಿರಿವಂತರೇ ಇರುವುದಿಲ್ಲ, ಇದನ್ನು ಮನಗಂಡು ‘ಕೆರೆಯ ನೀರಿನು ಕೆರೆಗೆ ಚೆಲ್ಲಿ ವರವ ಪಡೆಯಿರೋ’ ಎಂಬ ದಾಸವಾಣಿಯಂತೆ ಭಗವಂತ ನಮಗೆ ನೀಡಿರುವ ಸಂಪತ್ತು, ಸಮೃದ್ಧಿ ಮತ್ತು ಸಂತೋಷವನ್ನು ಹಂಚುತ್ತಲೇ ಬದುಕಿನ ಈ ಸದವಕಾಶವನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಬೆಟ್ಟಹಲಸೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಬಿ.ಎಸ್.ಅನಿಲ್ ಕುಮಾರ್, ಗ್ರಾ.ಪಂ.ಸದಸ್ಯರಾದ ಬಿ.ಆರ್.ರಾಮಾಂಜಿನಿ, ಸಾವಿತ್ರಮ್ಮ ಮುನಿರಾಜು, ಮಮತಾ ಪ್ರಶಾಂತ್, ಮುಖಂಡರಾದ ಮುನಿಕೃಷ್ಣ, ಗುರುಪ್ರಸಾದ್, ನಾರಾಯಣ ಸ್ವಾಮಿ, ಉಮೇಶ್, ಪ್ರವೀಣ್, ಹಸಿರೇ ಉಸಿರು ಸಂಘಟನೆಯ ಸಂಸ್ಥಾಪಕ ಬಿ.ಎಂ.ಶ್ರೀನಿವಾಸ ಮೂರ್ತಿ ಸೇರಿದಂತೆ ಇನ್ನಿತರರಿದ್ದರು.