

ಬಿಬಿಎಂಪಿ ಮಾಜಿ ಸದಸ್ಯ ಜಯಪ್ಪರೆಡ್ಡಿ ನೇತೃತ್ವದಲ್ಲಿ ನಿವಾಸಿಗಳಿಂದ ವಲಯ ಆಯುಕ್ತರ ಭೇಟಿ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಹೆಬ್ಬಾಳ ಕೆಂಪಾಪುರದ ಕಾಫಿ ಬೋರ್ಡ್ ಬಡಾವಣೆಯ ಜೈನ್ ಹೆರಿಟೇಜ್ ಶಾಲೆಯ ಪಕ್ಕದ ರಸ್ತೆ ಭೂಮಾಫಿಯಾ ಗಳಿಂದ ಒತ್ತುವರಿಗೆ ಒಳಗಾಗಿ, ಹಲವು ವರ್ಷಗಳಿಂದ ಸಾರ್ವಜನಿಕ ಓಟಾಟಕ್ಕೆ ಬಂದ್ ಆಗಿದ್ದು ಸದರಿ ರಸ್ತೆಯನ್ನು ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಬೇಕು ಮತ್ತು ಅಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚಿಸುವ ಮೂಲಕ ನಿತ್ಯ ಸಂಭವಿಸುತ್ತಿರುವ ಅಪಘಾತಗಳು ಮತ್ತು ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸುವಂತೆ ಕಾಫಿ ಬೋರ್ಡ್ ಬಡಾವಣೆ ಮತ್ತು ಸುತ್ತಮುತ್ತಲಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಮುಖಂಡರು ಮಾಜಿ ಬಿಬಿಎಂಪಿ ಸದಸ್ಯ ಜಯಪ್ಪರೆಡ್ಡಿ ನೇತೃತ್ವದಲ್ಲಿ ಬುಧವಾರ ಸಂಜೆ ಬಿಬಿಎಂಪಿ ಯಲಹಂಕ ವಲಯ ಆಯುಕ್ತರಾದ ಕರಿಗೌಡರವನ್ನು ಭೇಟಿ ಮಾಡಿ ಮನವಿ ಮಾಡಿಕೊಂಡರು.
ನಾಗರೀಕರ ಮನವಿ ಕುರಿತು ಬಿಬಿಎಂಪಿ ಯಲಹಂಕ ವಲಯ ಆಯುಕ್ತ ಕರಿಗೌಡ ಮಾತನಾಡಿ ‘ಸದರಿ ರಸ್ತೆ ಒತ್ತುವರಿ ಕುರಿತು ಈಗಾಗಲೇ ವಲಯ ಕಚೇರಿಗೆ ದೂರು ಸಲ್ಲಿಕೆಯಾಗಿದ್ದು, ಬಿಬಿಎಂಪಿ ಕಾಯ್ದೆ 313ರ ಅಡಿಯಲ್ಲಿ ವಲಯ ಕಚೇರಿಯಿಂದ ನೋಟೀಸ್ ನೀಡಲಾಗಿದೆ. ಕಾಲಾವಕಾಶ ಕೇಳಿರುವ ಹಿನ್ನೆಲೆಯಲ್ಲಿ ಕಾದು ನೋಡುತ್ತಿದ್ದೇವೆ. ಕಾಲಾವಕಾಶ ಮುಗಿದ ತಕ್ಷಣ ದಾಖಲೆಗಳನ್ನು ಪರಿಶೀಲಿಸಿ, ರಸ್ತೆ ಒತ್ತುವರಿ ಯಾಗಿದ್ದರೆ ನಿಯಮಾನುಸಾರ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.
ಮಾಜಿ ಬಿಬಿಎಂಪಿ ಸದಸ್ಯೆ ಮಾರಿಮುತ್ತು ಇಲ್ಲಿನ ರಸ್ತೆ ಜಾಗವನ್ನು ತಮ್ಮದೆಂದು ಹೇಳಿಕೊಂಡು, ಕಾಂಪೌಂಡ್ ನಿರ್ಮಿಸಲು ಆರಂಭಿಸಿದ್ದ ಹಿನ್ನೆಲೆಯಲ್ಲಿ, ಇತ್ತೀಚಿಗೆ ಕಾಫಿ ಬೋರ್ಡ್ ಬಡಾವಣೆಯ ನಿವಾಸಿಗಳು ಉದ್ಯಾನವನ ಒಂದರಲ್ಲಿ ಸಭೆ ಸೇರಿ, ಸದರಿ ರಸ್ತೆ ತೆರವು ಗೊಳಿಸುವ ವಿಚಾರವಾಗಿ ಚರ್ಚೆ ನಡೆಸಿದ್ದರು ಎಂಬುದು ಗಮನಾರ್ಹ ಸಂಗತಿ.