ಬ್ಯಾಟರಾಯನಪುರ : ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳುವ ಕಡೆಗೆ ಜನತೆ ಹೆಚ್ಚು ಗಮನ ವಹಿಸುವ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಿ ಎಂದು ಸಮಾಜ ಸೇವಕರು, ಕಂದಾಯ ಸಚಿವ ಕೃಷ್ಣಬೈರೇಗೌಡ ರವರ ಧರ್ಮಪತ್ನಿ ಮೀನಾಕ್ಷಿ ಕೃಷ್ಣಬೈರೇಗೌಡ ನಾಗರೀಕರಿಗೆ ಕಿವಿಮಾತು ಹೇಳಿದರು.
ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡ ದಿ. ಸಂತೋಷ್ ಬೆಳ್ಳೂಟಿ ರವರ ಸ್ಮರಣಾರ್ಥವಾಗಿ ಕ್ಷೇತ್ರದ ಜಾಲ ಹೋಬಳಿಯ ಮಾರೇನಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಪಾಸಣೆಗೆ ಒಳಗಾದ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆ ಮಾಡಿದ ನಂತರ ಮಾತನಾಡಿದ ಅವರು ‘ಇತ್ತೀಚಿನ ದಿನಗಳಲ್ಲಿ ಉತ್ತಮ ಆರೋಗ್ಯ ಎಂಬುದು ಜನತೆಗೆ ಸವಾಲಿನ ವಿಷಯವಾಗಿ ಪರಿಣಮಿಸಿದೆ. ಕೇವಲ ನಲವತ್ತು ವರ್ಷ ದಾಟುತ್ತಲೇ ಜನತೆ ದೃಷ್ಟಿದೋಷ, ಮಧುಮೇಹ, ರಕ್ತದೊತ್ತಡ, ಗ್ಯಾಸ್ಟ್ರಿಕ್ ನಂತಹ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿ, ಇತ್ತ ಸಂತೃಪ್ತಿಯಿಂದ ಬದುಕಲೂ ಅಗದೆ, ಅತ್ತ ಬದುಕಿನ ಜವಾಬ್ದಾರಿಗಳು ಅಪೂರ್ಣ ಗೊಂಡಿರುವ ಕಾರಣದಿಂದಾಗಿ ಸಾಯಲೂ ಆಗದೆ ತ್ರಿಶಂಕು ಸ್ಥಿತಿಯಲ್ಲಿ ಬದುಕು ನಿರ್ವಹಿಸಬೇಕಾದ ದುಸ್ಥಿಯಲ್ಲಿದ್ದಾರೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಕಡೆಗೆ ಹೆಚ್ಚು ಗಮನ ಹರಿಸುವುದೇ ಇದಕ್ಕಿರುವ ಏಕೈಕ ಪರಿಹಾರ ಮಾರ್ಗವಾಗಿದೆ ಎಂದರು.
ದಿ.ಸಂತೋಷ್ ಬೆಳ್ಳೂಟಿ ರವರು ಬ್ಯಾಟರಾಯನಪುರ ಕ್ಷೇತ್ರದಲ್ಲಿ ಸಮಾಜ ಸೇವಾ ಕಾರ್ಯಗಳು ಮತ್ತು ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಸಲ್ಲಿಸಿದ್ದ ಸೇವೆಯಿಂದಾಗಿ ನಮ್ಮ ಮನದಾಳದಲ್ಲಿ ಚಿರಸ್ಮರಣೀಯ ರಾಗಿದ್ದಾರೆ. ಅವರ ಸವಿನೆನಪಿನಲ್ಲಿ ಕೆಬಿಜಿ ಸ್ವಯಂ ಸೇವಕರು ಬ್ಯಾಟರಾಯನಪುರ ಕ್ಷೇತ್ರದ ವಿವಿದೆಡೆಗಳಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಬಡವರಿಗೆ ಉಚಿತ ಆರೋಗ್ಯ ಸೇವೆ ನೀಡುವ ಕಾರ್ಯವನ್ನು ಪ್ರಾಮಾಣಿಕವಾಗಿ ಕೈಗೊಂಡಿದೆ. ಇಂದು ಮಾರೇನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷರು, ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಆಂಜಿನಪ್ಪ(ಪುಟ್ಟು) ಮತ್ತು ಮಾರೇನಹಳ್ಳಿ ಗ್ರಾ.ಪಂ. ಹಾಲಿ ಅಧ್ಯಕ್ಷ, ಯುವ ಮುಖಂಡ ರಾಹುಲ್ ಕೆಬಿಜಿ ಸ್ವಯಂ ಸೇವಕರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುವ ಮೂಲಕ ದಿ.ಸಂತೋಷ್ ಬೆಳ್ಳೂಟಿ ರವರಿಗೆ ಗೌರವ ಸಲ್ಲಿಸುವ ಉತ್ತಮ ಕಾರ್ಯ ಕೈಗೊಂಡರುವುದು ಶ್ಲಾಘನೀಯ ಸಂಗತಿ ಎಂದರು.
ಇದೇ ಸಂದರ್ಭದಲ್ಲಿ ಮಾರೇನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷರು, ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್ ಮುಖಂಡ ಆಂಜಿನಪ್ಪ(ಪುಟ್ಟು), ತಾ.ಪಂ.ಮಾಜಿ ಅಧ್ಯಕ್ಷ ನಾಗರಾಜ್,ಮಾರೇನಹಳ್ಳಿ ಗ್ರಾ.ಪಂ. ಅಧ್ಯಕ್ಷ ಪಿ.ರಾಹುಲ್, ಮಾಜಿ ಅಧ್ಯಕ್ಷರಾದ ಚೊಕ್ಕನಹಳ್ಳಿ ನಂಜೇಗೌಡ, ಬಿ.ಎ.ಪ್ರೇಮ, ಡಿ.ಎಂ.ಚೌಡಪ್ಪ, ಆಂಜಿನಮ್ಮ ನಾಗರಾಜ್, ಶೃತಿಮೂರ್ತಿ,ಸುಮಿತ್ರಾ ಮಂಜುನಾಥ್, ಗ್ರಾ.ಪಂ. ಸದಸ್ಯರಾದ ಗೀತಾ ಆನಂದಕುಮಾರ್, ರತ್ನಮ್ಮ ವೆಂಕಟಸ್ವಾಮಿ, ಕೃಷ್ಣಪ್ಪ, ಮುನಿರಾಮಣ್ಣ, ಮಾಜಿ ಉಪಾಧ್ಯಕ್ಷೆ ಗಜಲಕ್ಷ್ಮಿ ಗೋಪಾಲ್, ಚಿಕ್ಕಪ್ಪಯ್ಯ, ಈರೇಗೌಡ, ಸತೀಶ್, ಅವಿನಾಶ್, ಮಂಜುನಾಥ್, ಜ್ಯೋತಿ ಮುನಿಯಪ್ಪ,ನಂಜಮ್ಮ ಬಲ್ಲಯ್ಯ, ಲೋಕೇಶ್, ನಂಜಪ್ಪ, ಡೈರಿ ರಾಜಣ್ಣ, ಸಿ.ಮುನಿರಾಜು, ಗಂಗಯ್ಯ(ಬಿಎಂಟಿಸಿ), ರಂಜಿತ್ ಸೇರಿದಂತೆ ಇನ್ನಿತರರಿದ್ದರು.