
ಬ್ಯಾಟರಾಯನಪುರ : ಕ್ಷೇತ್ರದ ಜಾಲ ಹೋಬಳಿಯ ಮಾರೇನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಚೊಕ್ಕನಹಳ್ಳಿ ಗ್ರಾಮದಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಚೊಕ್ಕನಹಳ್ಳಿ ನಂಜೇಗೌಡ ರವರ ಸಹಕಾರದೊಂದಿಗೆ ಏರ್ಪಡಿಸಿದ್ದ ಮಹಿಳಾ ಕ್ರಿಕೆಟ್ ಪಂದ್ಯಾವಳಿಯನ್ನು ಸಮಾಜ ಸೇವಕರು, ಕಂದಾಯ ಸಚಿವ ಕೃಷ್ಣಬೈರೇಗೌಡ ರವರ ಧರ್ಮಪತ್ನಿ ಮೀನಾಕ್ಷಿ ಕೃಷ್ಣಬೈರೇಗೌಡ ರವರು ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿದರು.
ಈ ವೇಳೆ ಮೀನಾಕ್ಷಿ ಕೃಷ್ಣಬೈರೇಗೌಡ ರವರು ಮಾತನಾಡಿ ‘ಮಹಿಳೆಯರು ಕೇವಲ ಮನೆಯ ಅಡುಗೆ ಕೋಣೆಗಷ್ಟೇ ಸೀಮಿತವಾಗಿರದೆ ಸಮಾಜದ ವಿವಿಧ ಕಾರ್ಯ ಕ್ಷೇತ್ರಗಳಲ್ಲಿ ಪಾಲ್ಗೊಳ್ಳಬೇಕು. ನಮ್ಮ ಮಹಿಳೆಯರು ಎಡೆಬಿಡದ ಮನೆಯ ಕೆಲಸಗಳು, ಮಕ್ಕಳ ಪೋಷಣೆ ಮಾಡುತ್ತಾ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸದೆ, ನಿರ್ಲಕ್ಷ್ಯ ವಹಿಸುತ್ತಾರೆ. ಯಾವ ಕಾರಣಕ್ಕೂ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರದೆ, ನಿಯಮಿತ ವ್ಯಾಯಾಮ, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಸ್ಥಿರವಾಗಿ ಇಟ್ಟುಕೊಳ್ಳಬೇಕು. ತಮ್ಮ ಗ್ರಾಮದ ಮಹಿಳೆಯರಿಗಾಗಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವ ನಂಜೇಗೌಡ ರವರ ಕ್ರಮ ಪ್ರಶಂಸನೀಯವಾದುದು ಈ ಅತ್ಯಮೂಲ್ಯ ಕಾರ್ಯಕ್ಕಾಗಿ ನಂಜೇಗೌಡ ಅವರಿಗೆ ಮತ್ತು ಈ ಕ್ರಿಕೆಟ್ ಪಂದ್ಯಾವಳಿ ಆಯೋಜನೆಯಲ್ಲಿ ಸಹಕಾರ ನೀಡಿರುವ ಯುವಕರಿಗೆ ಅನಂತ ಧನ್ಯವಾದಗಳು ಎಂದರು.
ಕ್ರಿಕೆಟ್ ಪಂದ್ಯಾವಳಿಯ ಆಯೋಜಕರು, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಚೊಕ್ಕನಹಳ್ಳಿ ನಂಜೇಗೌಡ ರವರು ಮಾತನಾಡಿ ‘ಇಂದಿನ ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು ನಾಲ್ಕು ತಂಡಗಳಿದ್ದು, ಕ್ರಮವಾಗಿ ನಾನು ಸೇರಿದಂತೆ ಮುರಳಿ ಆರ್., ಮೋಹನ್, ವಿನಯ್ ತಂಡಗಳ ಮಾಲೀಕರಾಗಿದ್ದು, ಪ್ರತಿ ಪಂದ್ಯ ನಾಲ್ಕು ಓವರ್ ಗಳ ಅವಧಿ ಹೊಂದಿರುತ್ತದೆ. ಪಂದ್ಯಾವಳಿಯಲ್ಲಿ ಪಾಲ್ಗೊಂಡು ಮೊದಲ ಮತ್ತು ಎರಡನೆಯ ಸ್ಥಾನ ಪಡೆದ ತಂಡಗಳಿಗೆ ಟ್ರೋಫಿ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಲಾಗುವುದು. ನಮ್ಮ ಹೆಮ್ಮೆಯ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸುವ ಮೂಲಕ ಸ್ಪೂರ್ತಿ ನೀಡಿರುವ ನಮ್ಮ ನೆಚ್ಚಿನ ಸಮಾಜ ಸೇವಕರಾದ ಮೀನಾಕ್ಷಿ ಕೃಷ್ಣಬೈರೇಗೌಡ ರವರಿಗೆ ಅನಂತ ಧನ್ಯವಾದಗಳು ಎಂದರು.
ಇದೇ ಸಂದರ್ಭದಲ್ಲಿ ಮಾರೇನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ, ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಆಂಜಿನಪ್ಪ(ಪುಟ್ಟು), ತಾ.ಪಂ.ಮಾಜಿ ಅಧ್ಯಕ್ಷ ನಾಗರಾಜ್, ಗ್ರಾ.ಪಂ.ಅಧ್ಯಕ್ಷ ಪಿ.ರಾಹುಲ್, ಮಾರೇನಹಳ್ಳಿ ವಿಎಸ್ ಎಸ್ ಎನ್ ಮಾಜಿ ಅಧ್ಯಕ್ಷರಾದ ಡಿ.ಎಂ.ಚೌಡಪ್ಪ, ಸಿ.ಮುನಿರಾಜು, ಚೊಕ್ಕನಹಳ್ಳಿ ಗ್ರಾಮದ ಯುವ ಮುಖಂಡರಾದ ಮುರಳಿ ಆರ್., ಮೋಹನ್, ವಿನಯ್, ಸುಹಾಸ್ ಗೌಡ, ರಾಜೇಶ್ ವಿ., ಮಂಜುನಾಥ್ ಎನ್., ಮಧು ಆರ್., ಸಂದೀಪ್ ಗೌಡ, ಲೋಕೇಶ್, ಪ್ರವೀಣ್, ವಸಂತ್ ಸೇರಿದಂತೆ ಇನ್ನಿತರರಿದ್ದರು.