ಬ್ಯಾಟರಾಯನಪುರ : ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೊಳ್ಳೆ ಔಷಧಿ ಸಿಂಪಡಣೆ(ಫಾಗಿಂಗ್) ಕಾರ್ಮಿಕರ (ಎಂ.ಸಿ.ಗ್ಯಾಂಗ್ ಮೆನ್) ಬಾಕಿ ವೇತನ ತಕ್ಷಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ, ಬ್ಯಾಟರಾಯನಪುರ ದಲ್ಲಿರುವ ಬಿಬಿಎಂಪಿ ಯಲಹಂಕ ವಲಯ ಕಚೇರಿಗೆ ಆಗಮಿಸಿದ ಕಾರ್ಮಿಕರು, ದಲಿತ ಸಂಘರ್ಷ ಸಮಿತಿಯ (ಕೆಂಪುಸೇನೆ) ರಾಜ್ಯ ಕಾರ್ಯದರ್ಶಿ ಡಿ.ವಿ.ವೀರಭದ್ರೇಗೌಡ ನೇತೃತ್ವದಲ್ಲಿ ಜಂಟಿ ಆಯುಕ್ತರನ್ನು ಭೇಟಿ ಮಾಡಿ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಡಿ.ವಿ.ವೀರಭದ್ರೇಗೌಡ ‘ಬಿಬಿಎಂಪಿ ಯಲಹಂಕ ವಲಯ ಕಚೇರಿ ವ್ಯಾಪ್ತಿಯ ವಿವಿಧ ವಾರ್ಡ್ ಗಳಲ್ಲಿ ಒಟ್ಟು 24 ಮಂದಿ ಸೊಳ್ಳೆ ಔಷಧಿ ಸಿಂಪಡಣೆ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, ಪ್ರಸಾದ್ ಮತ್ತು ಇತರರು 2 ವರ್ಷಗಳ ಅವಧಿಗೆ ಬಿಬಿಎಂಪಿಯಿಂದ ಔಷಧಿ ಸಿಂಪಡಣೆ ಕಾರ್ಯದ ಗುತ್ತಿಗೆ ಪಡೆದಿದ್ದಾರೆ. ಆದರೆ ಕಾರ್ಮಿಕರಿಗೆ ತಿಂಗಳಿಗೆ ಸರಿಯಾಗಿ ವೇತನ ಪಾವತಿಸದ ಕಾರಣ, ಮಕ್ಕಳ ಶಾಲಾ ಶುಲ್ಕ, ಮನೆ ಬಾಡಿಗೆ ಮತ್ತು ಜೀವನ ನಿರ್ವಹಣೆಗೆ ಹಣವಿಲ್ಲದೆ, ಬಡ ಕಾರ್ಮಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.

ಕಾರ್ಮಿಕರು ಪ್ರತಿ 6-8 ತಿಂಗಳಿಗೊಮ್ಮೆ ಬಾಕಿ ವೇತನ ಬಿಡುಗಡೆಯ ಸಂಬಂಧ ಪ್ರಶ್ನಿಸಿದಾಗ ಮಾತ್ರ 2-3 ತಿಂಗಳ ವೇತನ ಪಾವತಿಸುವ ಗುತ್ತಿಗೆದಾರರು, ಪೂರ್ತಿ ವೇತನ ನೀಡದೆ, ಸತಾಯಿಸುತ್ತಿದ್ದು, ಕಳೆದ 11 ತಿಂಗಳಿನಿಂದ ವೇತನ ನೀಡಿಲ್ಲ; ಅಲ್ಲದೇ ಗುತ್ತಿಗೆದಾರರು ಇಎಸ್ಐ ಕಚೇರಿಗೆ ಹಣ ಪಾವತಿಸದ ಕಾರಣ ಅಲ್ಲಿಯೂ ಕಾರ್ಮಿಕರಿಗೆ ಚಿಕಿತ್ಸೆ ದೊರೆಯದಂತಾಗಿದೆ. ಇತ್ತೀಚೆಗೆ ಕಾರ್ಮಿಕರೊಬ್ಬರು ಚರಂಡಿಗೆ ಗಾಯಗೊಂಡು ಚಿಕಿತ್ಸೆಗೆ ಇಎಸ್ಐ ಆಸ್ಪತ್ರೆಗೆ ಹೋದಾಗ, ಇಎಸ್ಐ ನಲ್ಲಿ ಚಿಕಿತ್ಸೆ ನೀಡದೆ ವಾಪಸ್ ಕಳಿಸಿದ್ದಾರೆ. ಇಎಸ್ಐ ಕಚೇರಿಗೆ ಗುತ್ತಿಗೆದಾರ ಹಣ ಕಟ್ಟಿರುವ ದಾಖಲೆಯಿದ್ದರೆ ಮಾತ್ರ ಬಿಬಿಎಂಪಿ ಯಿಂದ ಗುತ್ತಿಗೆ ಹಣದ ಬಿಲ್ ಬಿಡುಗಡೆಯಾಗಬೇಕು; ಆದರೆ ದಾಖಲೆಯಿಲ್ಲದೆ ಗುತ್ತಿಗೆದಾರರು ಬಿಬಿಎಂಪಿ ಯಿಂದ ಬಿಲ್ ಮಂಜೂರು ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಕಾರ್ಮಿಕರ ಕನಿಷ್ಠ ವೇತನ ನಿಯಮದ ಅಡಿಯಲ್ಲಿ ನಮಗೆ ತಿಂಗಳಿಗೆ ರು.18 ಸಾವಿರ ವೇತನ ನೀಡಬೇಕು ಆದರೆ ಕೇವಲ ರು.12 ಸಾವಿರ ಮಾತ್ರ ನೀಡುತ್ತಿದ್ದು, ಅದನ್ನು ಸಹ ಸರಿಯಾಗಿ ನೀಡದೆ ಸತಾಯಿಸುತ್ತಿದ್ದಾರೆ.

ಔಷಧಿ ಸಿಂಪಡಣೆ ಮಾಡಲು ಮಾಸ್ಕ್, ಗ್ಲೌಸ್, ಸಮವಸ್ತ್ರ, ಶೂ ಸೇರಿದಂತೆ ಸಂರಕ್ಷಣಾ ಸೌಕರ್ಯಗಳನ್ನು ಒದಗಿಸಿಲ್ಲ; ಅಲ್ಲದೆ ಯಾವುದೇ ಭದ್ರತೆಯೂ ಇಲ್ಲದಂತಾಗಿದೆ. ಈ ಬಗ್ಗೆ ಆರೋಗ್ಯ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುತ್ತೇವೆ ಎಂದು ಕಳೆದ ಒಂದು ವರ್ಷದಿಂದಲೂ ಸಬೂಬು ಹೇಳುತ್ತಾ ಬಂದಿದ್ದು, ಇದುವರೆಗೂ ಸಮಸ್ಯೆ ಬಗೆ ಹರಿಯದೆ ನಮಗೆ ದಿಕ್ಕು ತೋಚದಂತಾಗಿದೆ ಎಂದು ಕಾರ್ಮಿಕರು ತಮ್ಮ ಅಳಲು ತೋಡಿಕೊಂಡರು.

ಒಂದು ವಾರದೊಳಗಾಗಿ ಬಾಕಿ ಇರುವ ವೇತನ ಪಾವತಿಸುವುದರ ಜತೆಗೆ ಪಿಎಫ್ ಮತ್ತು ಇಎಸ್ಐ ಸೌಲಭ್ಯ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸದಿದ್ದರೆ ಬ್ಯಾಟರಾಯನಪುರದ ಬಿಬಿಎಂಪಿ ವಲಯ ಕಚೇರಿಯ ಮುಂಭಾಗದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಭರವಸೆ : ಕಾರ್ಮಿಕರ ಮನವಿ ಆಲಿಸಿ ಪ್ರತಿಕ್ರಿಯಿಸಿರುವ ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತ ಮೊಹಮದ್ ನಯೀಮ್ ಮೋಮಿನ್, ಗುತ್ತಿಗೆದಾರರು ಪಿಎಫ್ ಮತ್ತು ಇಎಸ್ಐ ಹಣವನ್ನು ಸಂಬಂಧ ಪಟ್ಟ ಕಚೇರಿಗೆ ಪಾವತಿ ಮಾಡದ ಹಿನ್ನೆಲೆಯಲ್ಲಿ ಬಿಲ್ ತಡೆ ಹಿಡಿಯಲಾಗಿದೆ. ಮೊದಲು ಬಿಲ್ ಮಂಜೂರು ಮಾಡಿ, ನಂತರ ಹಣವನ್ನು ಕಚೇರಿಗೆ ಪಾವತಿಸುತ್ತೇವೆ ಎಂದು ಗುತ್ತಿಗೆದಾರರು ಹೇಳುತ್ತಿದ್ದು, ನಿಯಮದ ಪ್ರಕಾರ ಈ ರೀತಿ ಮಾಡಲು ಅವಕಾಶವಿಲ್ಲ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎರಡು ದಿನಗಳೊಳಗಾಗಿ ಸಮಸ್ಯೆ ಬಗೆಹರಿಸಿ, ಕಾರ್ಮಿಕರ ವೇತನ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ(ಕೆಂಪುಸೇನೆ)ಯ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಕೆ.ಎಂ.ಮುರಳಿ ಸೇರಿದಂತೆ ಕಾರ್ಮಿಕರಿದ್ದರು.

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

Public power

R Hanumanthu.

Kogilu layout Yelahanka

9845085793

7349337989

Leave a Reply

Your email address will not be published. Required fields are marked *