



ಸಚಿವ ಜಮೀರ್ ವಿರುದ್ಧ ಹರಿಹಾಯ್ದ ಬಿಜೆಪಿ ನಾಯಕರು :
ಯಲಹಂಕ : ಅಲ್ಪಸಂಖ್ಯಾತರ ಓಲೈಕೆಗಾಗಿ ರೈತರ ಮತ್ತು ಜನಸಾಮಾನ್ಯರ ಭೂಮಿಯನ್ನು ವಕ್ಫ್ ಬೋರ್ಡ್ಗೆ ವರ್ಗಾವಣೆ ಮಾಡಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ ಯಲಹಂಕ ಮತ್ತು ಬ್ಯಾಟರಾಯನಪುರ ಕ್ಷೇತ್ರಗಳ ಬಿಜೆಪಿ ಮುಖಂಡರು, ಕಾರ್ಯಕರ್ತರು ಯಲಹಂಕ ಮಿನಿ ವಿಧಾನಸೌಧದ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಪ್ರಯುಕ್ತ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಯಲಹಂಕ ಉಪನಗರದ ಶೇಷಾದ್ರಿಪುರ ಕಾಲೇಜು ಸಮೀಪದಿಂದ ಪಾದಯಾತ್ರೆ ಮೂಲಕ ಯಲಹಂಕ ಮಿನಿ ವಿಧಾನಸೌಧದ ವರೆಗೆ ಸಾಗಿದ ಸಹಸ್ರಾರು ಸಂಖ್ಯೆಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಮಿನಿ ವಿಧಾನಸೌಧದ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಮಾತನಾಡಿ ‘ರಾಜ್ಯದ ಸಹಸ್ರಾರು ರೈತರ ಭೂಮಿಯನ್ನು ವಕ್ಛ್ ಬೋರ್ಡ್ ಗೆ ವರ್ಗಾವಣೆ ಮಾಡಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮ ನಾಚಿಕೆಗೇಡಿನ ಸಂಗತಿ. ಅಲ್ಪಸಂಖ್ಯಾತರ ಓಲೈಕೆಗಾಗಿ ರಾಜ್ಯದ ರೈತರ ಹಿತವನ್ನೇ ಬಲಿಕೊಡಲು ಹೊರಟಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಬಿಜೆಪಿ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಸಿ.ಎಂ.ಸಿದ್ಧರಾಮಯ್ಯ ವಕ್ಛ್ ಬೋರ್ಡ್ ಗೆ ಭೂಮಿ ವರ್ಗಾವಣೆಯ ವಿಚಾರವನ್ನು ಕೈಬಿಡುವ ಮಾತನಾಡುತ್ತಿದ್ದಾರೆ. ಆದರೆ ನಿಮ್ಮ ಬಾಯಿಮಾತಿನ ಆಶ್ವಾಸನೆಗಳು ನಮಗೆ ಬೇಕಿಲ್ಲ ನಿಮ್ಮ ನಡೆ ಸತ್ಯವಾಗಿದ್ದರೆ ವಕ್ಛ್ ಬೋರ್ಡ್ ಗೆ ರೈತರ ಭೂಮಿ ವರ್ಗಾವಣೆ ಕೈಬಿಡುವ ವಿಷಯ ಕುರಿತು ಗೆಜೆಟ್ ನೋಟಿಫಿಕೇಶನ್ ಹೊರಡಿಸಿ. ಕೇವಲ ಬಾಯಿ ಮಾತಿನ ನಿಮ್ಮ ಆಶ್ವಾಸನೆಗಳ ಮೇಲೆ ನಮಗೆ ವಿಶ್ವಾಸವಿಲ್ಲ. ಮುಂದೊಂದು ದಿನ ಅಲ್ಪಸಂಖ್ಯಾತರ ಓಲೈಕೆಗಾಗಿ ನೀವು ಪುನಃ ರೈತರ ಭೂಮಿ ವರ್ಗಾವಣೆ ಮಾಡಲು ಮುಂದಾಗುವುದಿಲ್ಲ ಎಂಬುದಕ್ಕೆ ಯಾವ ಗ್ಯಾರೆಂಟಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ‘ವಕ್ಛ್ ಬೋರ್ಡ್ ಗೆ ರಾಜ್ಯದ ರೈತರ ಲಕ್ಷಾಂತರ ಎಕರೆ ಭೂಮಿಯನ್ನು ವರ್ಗಾವಣೆ ಮಾಡಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ಖಂಡನೀಯ. ನೆಹರೂ ಅವರು ತಮ್ಮ ಅಧಿಕಾರ ದಾಹಕ್ಕಾಗಿ ಅಖಂಡ ಭಾರತವನ್ನು ಒಡೆದು ಪಾಕಿಸ್ಥಾನ, ಬಾಂಗ್ಲಾದೇಶ ನಿರ್ಮಾಣ ಮಾಡಿದರು. ಆ ವೇಳೆ ಭಾರದಿಂದ ಮುಸ್ಲಿಮರು ಸುರಕ್ಷಿತವಾಗಿ ಪಾಕಿಸ್ಥಾನಕ್ಕೆ ತೆರಳಿದರು, ಆದರೆ ಅಲ್ಲಿಂದ ಭಾರತಕ್ಕೆ ಬರಬೇಕಿದ್ದ ಲಕ್ಷಾಂತರ ಹಿಂದೂಗಳನ್ನು ಮಾರಣ ಹೋಮ ಮಾಡಲಾಯಿತು. ಇದೀಗ ರಾಜ್ಯದ ರೈತರ 1 ಲಕ್ಷ 20 ಸಾವಿರ ಎಕರೆ ಭೂಮಿಯನ್ನು ವಕ್ಛ್ ಬೋರ್ಡ್ ಗೆ ವರ್ಗಾವಣೆ ಮಾಡಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ಕ್ರಮದ ಹಿಂದೆ ಹಿಂದೂಗಳನ್ನು ದುರ್ಬಲಗೊಳಿಸುವ ಹುನ್ನಾರವಿದೆ. ಸರ್ಕಾರಕ್ಕೆ ಭೂಮಿ ಉಳಿಸುವ ಸತ್ ಚಿಂತನೆಯೇ ಇದ್ದರೆ, ವಕ್ಫ್ ಆಸ್ತಿ ಕಬಳಿಕೆ ಪ್ರಕರಣ ಕುರಿತು ಅನ್ವರ್ ಮಾನಪ್ಪಾಡಿ ಸಲ್ಲಿಸಿರುವ ವರದಿಯನ್ನು ಜಾರಿಗೆ ತರಲಿ, ವಕ್ಛ್ ಬೋರ್ಡ್ ನ ಆಸ್ತಿಯನ್ನು ಮುಸ್ಲಿಂ ಸಮುದಾಯದವರೇ ಕಬಳಿಸಿ, ನುಂಗಿ ನೀರು ಕುಡಿದಿದ್ದಾರೆ, ಮೊದಲು ಅವರಿಂದ ಭೂಮಿಯನ್ನು ವಶಪಡಿಸಿಕೊಳ್ಳಲಿ, ಈ ಕುರಿತು ಕಾಂಗ್ರೆಸ್ ಪಕ್ಷದ ಶಾಸಕರೇ ಸದನದಲ್ಲಿ ಒತ್ತಾಯಿಸಿದ್ದಾರೆ. ಅದನ್ನು ಮಾಡುವ ಬದಲಿಗೆ ಹಿಂದೂ ರೈತರ ಭೂಮಿಯನ್ನು ವಕ್ಛ್ ಬೋರ್ಡ್ ಗೆ ವರ್ಗಾವಣೆ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಹಿಂದೂ ವಿರೋಧಿ ನೀತಿಯಲ್ಲದೇ ಮತ್ತಿನ್ನೇನು ಎಂದು ಪ್ರಶ್ನಿಸಿದ ಶಾಸಕರು, ಸಚಿವ ಜಮೀರ್ ಅಹಮದ್ ಖಾನ್ ರವರು ಪಾಕಿಸ್ಥಾನದ ಸಚಿವರಂತೆ ಮಾತನಾಡುವುದನ್ನು ನಿಲ್ಲಿಸಬೇಕು, ಅಧಿಕಾರ ಶಾಶ್ವತವಲ್ಲ, ಅಧಿಕಾರದಲ್ಲದ್ದೇನೆ ಎಂಬುದನ್ನು ತಲೆಗೇರಿಸಿಕೊಂಡು ಬಾಯಿಗೆ ಬಂದಂತೆ ಹಿಂದೂಗಳ ಬಗ್ಗೆ ಮಾತನಾಡಬೇಡಿ, ಇಲ್ಲಿಯವರೆಗೆ ಎಲ್ಲಾ ಪಕ್ಷಗಳನ್ನು ಸುತ್ತಿ ಬಂದಿದ್ದೀರಿ, ಸದ್ಯಕ್ಕೆ ಕಾಂಗ್ರೆಸ್ ಪಕ್ಷದಲ್ಲಿದ್ದೀರಿ, ಮುಂದೆ ನಿಮ್ಮ ರಾಜಕೀಯದ ಜಟಕಾ ಬಂಡಿ ಇನ್ನೆಲ್ಲಿಗೆ ಸಾಗಲಿದೆಯೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಪ್ರತಿಭಟನೆಯಲ್ಲಿ ದಾಸರಹಳ್ಳಿ ಶಾಸಕ ಎಸ್.ಮುನಿರಾಜು, ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಮುಖಂಡ ಎಚ್.ಸಿ.ತಮ್ಮೇಶ್ ಗೌಡ ಮಾತನಾಡಿದರು.
ಪ್ರತಿಭಟನೆಯಲ್ಲಿ ಆರ್ ಎಸ್ ಎಸ್ ನ ಪ್ರಮುಖ್ ದತ್ತಾತ್ರೆಯ ಹೊಸಬಾಳೆ, ಯಲಹಂಕ ಕ್ಷೇತ್ರದ ಹಿರಿಯ ಬಿಜೆಪಿ ಮುಖಂಡರಾದ ಎಸ್ ಎನ್ ರಾಜಣ್ಣ, ದಿಬ್ಬೂರು ಜಯಣ್ಣ, ಎಚ್.ಬಿ.ಹನುಮಯ್ಯ, ಚೊಕ್ಕನಹಳ್ಳಿ ವೆಂಕಟೇಶ್, ಯಲಹಂಕ ನಗರ ಮಂಡಲ ಬಿಜೆಪಿ ಅಧ್ಯಕ್ಷ ಎಂ.ಸತೀಶ್, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ರಾಮಮೂರ್ತಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜಿ.ಜೆ.ಮೂರ್ತಿ, ದಾಸರಹಳ್ಳಿ ಮಂಡಲ ಅಧ್ಯಕ್ಷ ಸೋಮಶೇಖರ್, ಬ್ಯಾಟರಾಯನಪುರ ಗ್ರಾ.ಮಂಡಲ ಬಿಜೆಪಿ ಅಧ್ಯಕ್ಷ ಹನುಮಂತುಗೌಡ, ಬ್ಯಾಟರಾಯನಪುರ ನಗರ ಮಂಡಲ ಬಿಜೆಪಿ ಅಧ್ಯಕ್ಷ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್, ವಿ.ಪವನ್ ಕುಮಾರ್, ಯಲಹಂಕ ಗ್ರಾ.ಮಂಡಲ ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ರಾಜೇಶ್, ಉಪಾಧ್ಯಕ್ಷ ಪಿ.ಕೆ.ರಾಜಣ್ಣ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ, ಬಿಜೆಪಿ ಮುಖಂಡರಾದ ಟಿ.ಮುನಿರೆಡ್ಡಿ, ಕಟ್ಟಿಗೇನಹಳ್ಳಿ ಅನಿಲ್, ಎಸ್ ಜಿ ಪ್ರಶಾಂತ್ ರೆಡ್ಡಿ, ಕಸಘಟ್ಟಪುರ ಗ್ರಾ.ಪಂ.ಅಧ್ಯಕ್ಷ ಕಿರಣ್, ಆವಲಹಳ್ಳಿ ಕೇಶವಮೂರ್ತಿ, ಮುನಿಕೃಷ್ಣ, ಕೆ.ಬಾಬು, ಅಳ್ಳಾಳಸಂದ್ರ ಸೋಮಶೇಖರ್, ನಾಗೇನಹಳ್ಳಿ ಶಿವಕುಮಾರ್, ಮಾದಪ್ಪನಹಳ್ಳಿ ವಿಜಯಕುಮಾರ್, ಮೈಲಪ್ಪಮಹಳ್ಳಿ ಹರೀಶ್, ಮುರಾರಿ ರಾಮು, ಅನಿಲ್ ಬೈರಾಪುರ ಸೇರಿದಂತೆ ಸಹಸ್ರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರಿದ್ದರು. ತಹಶಿಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು.
Public power
R Hanumanthu
Kogilu layout Yelahanka
9845085793
7349337989