ಯಲಹಂಕ ಕಾಂಗ್ರೆಸ್ ಮುಖಂಡರಿಂದ ಮುಖ್ಯಮಂತ್ರಿಗಳಿಗೆ ಅಭಿನಂದನೆ :

ಯಲಹಂಕ : ರಾಜ್ಯ ಸರ್ಕಾರ ಯಲಹಂಕ ಕ್ಷೇತ್ರದ ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು ‘ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ’ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಯಲಹಂಕ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅರಣ್ಯ ಸಚಿವ ಈಶ್ವರ ಖಂಡ್ರೆಯವರಿಗೆ ಹೆಸರಘಟ್ಟದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಅಭಿನಂದನೆ ಸಲ್ಲಿಸಿದರು.

ಪತ್ರಿಕಾ ಗೋಷ್ಠಿ ಉದ್ದೇಶಿಸಿ ಹೆಸರಘಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಮಂಜುನಾಥ್ ಅದ್ದೆ ಮಾತನಾಡಿ ‘ಇತ್ತೀಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಹೆಸರಘಟ್ಟ ಪ್ರದೇಶದ 5010 ಎಕರೆ ಭೂಪ್ರದೇಶವನ್ನು ‘ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ’ ಎಂದು ಘೋಷಿಸಿರುವುದು ಸಂತೋಷ ಉಂಟು ಮಾಡಿದೆ. ಇದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು, ಈ ಕುರಿತು ದೊಡ್ಡ ಜನಾಂದೋಲನವೂ ನಡೆದಿತ್ತು. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಪ್ರದೇಶವನ್ನು ಸಂರಕ್ಷಿತ ವನ್ಯಜೀವಿ ಅರಣ್ಯ ಪ್ರದೇಶವಾಗಿ ಘೋಷಣೆ ಮಾಡುವ  ಪ್ರಯತ್ನಗಳು ನಡೆದಿದ್ದವು. 

ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ  ಪ್ರಕೃತಿ ಮತ್ತು ಪರಿಸರ ಸಂರಕ್ಷಣೆಯ ಬಹುದೊಡ್ಡ ನಿಲುವು ತೆಗೆದುಕೊಂಡು ‘ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ’ ಎಂದು ಘೋಷಿಸಿರುವುದು ಈ ಭಾಗದ ಜನತೆಯ ಒತ್ತಾಸೆಗೆ ಸಂದ ಜಯ ಎನ್ನಬಹುದು. 

ಯಲಹಂಕ ಶಾಸಕರಾದ ಎಸ್ ಆರ್ ವಿಶ್ವನಾಥ್ ರವರು ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಹೆಸರಘಟ್ಟ ಪ್ರದೇಶವನ್ನು ‘ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ’ ಎಂದು ಘೋಷಿಸಿರುವ ಈ ಸಂದರ್ಭದಲ್ಲಿ ಅನ್ಯತಾ ಭಾವಿಸದೆ, ಅದರ ಅಭಿವೃದ್ಧಿಗೂ ಸಹ ಉದಾರ ರೀತಿಯಲ್ಲಿ ನೆರವು, ಸಹಕಾರ ನೀಡುವ ಮೂಲಕ ಸ್ಪಂದಿಸಬೇಕೆಂದು ಮನವಿಯ ಮೂಲಕ ಶಾಸಕರಿಗೆ ಮನವರಿಕೆ ಮಾಡಿಕೊಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಕೇಶವರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀನಿವಾಸ್, ಹೆಚ್.ಮೂರ್ತಿ, ವೆಂಕಟೇಶ್ ಮಾತನಾಡಿ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ‌ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅರಣ್ಯ ಸಚಿವ ಈಶ್ವರ್ ಖಂಡ್ರೆಯವರು ಮಹತ್ವದ ನಿಲುವು ತೆಗೆದುಕೊಂಡು ಹೆಸರುಘಟ್ಟ ಪ್ರದೇಶವನ್ನು ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶವಾಗಿ ಘೋಷಿಸುವ ಮೂಲಕ ಈ ಭಾಗದ ಪರಿಸರ ಸಂರಕ್ಷಣೆಗೆ ಇಂಬು ನೀಡಿದ್ದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಬೆಂಗಳೂರು ಡೈರಿ ನಿರ್ದೇಶಕ ಕೇಶವಮೂರ್ತಿ, ಯಲಹಂಕ ಕ್ಷೇತ್ರದ ಗ್ಯಾರೆಂಟಿ ಸಮಿತಿ ಅಧ್ಯಕ್ಷೆ ಪ್ರೇಮಲತಾ, ಹೆಸರಘಟ್ಟ ಬ್ಲಾಕ್ ಎಸ್ಸಿ ಘಟಕದ ಅಧ್ಯಕ್ಷ ಗೋವಿಂದರಾಜು, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ವಸೀಂ ಪಾಷಾ, ಕಾಂಗ್ರೆಸ್ ಮುಖಂಡರಾದ ಎಚ್.ಕೆ.ಚೇತನ್, ಕಾರ್ಲಾಪುರ ಚಂದ್ರಶೇಖರ್, ಅರಕೆರೆ ಶ್ರೀನಿವಾಸ್, ಎ.ರಮೇಶ್, ವೀರಸಾಗರ ರಘು, ಬ್ಯಾಲಕೆರೆ ಸುಬ್ರಮಣಿ, ಹುರುಳಿಚಿಕ್ಕನಹಳ್ಳಿ ಮಂಜುನಾಥ್, ಟ ಕಾಕೋಳು ಬಾಬು, ಲಕ್ಷ್ಮೀಶ್, ಹೆಸರಘಟ್ಟ ದೇವರಾಜ್, ರಂಗಸ್ವಾಮಿ, ಗಣೇಶ್, ಮೇಡಿ ಅಗ್ರಹಾರ ಬಾಬು ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *